ನೈಜ ಕ್ರೈಂಗೆ ಎಫ್ಐಆರ್ ಮಾಡಲ್ಲ, 2 ವರ್ಷಗಳ ಹಳೆಯ ಹಸು ನಾಪತ್ತೆ ಕೇಸ್ಗೆ ತರಾತುರಿ ಮಾಡ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ
ಕರ್ನಾಟಕ ಹೈಕೋರ್ಟ್, 2024ರ ಹಸು ನಾಪತ್ತೆ ಪ್ರಕರಣಕ್ಕೆ 2026ರಲ್ಲಿ FIR ದಾಖಲಿಸಿದ ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗಂಭೀರ ಅಪರಾಧಗಳ ಎಫ್ಐಆರ್ಗೆ ಹಿಂಜರಿಯುವ ಪೊಲೀಸರು, ಇಂತಹ ಹಳೆಯ ಪ್ರಕರಣಗಳಲ್ಲಿ ವಿಳಂಬವಾಗಿ ದೂರು ದಾಖಲಿಸುವುದರ ಔಚಿತ್ಯ ಪ್ರಶ್ನಿಸಿದೆ. ನ್ಯಾಯಪೀಠವು ಆರೋಪಿಗಳ ವಿರುದ್ಧದ ಎಫ್ಐಆರ್ಗೆ ತಡೆಯಾಜ್ಞೆ ನೀಡಿ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದೆ.

ಬೆಂಗಳೂರು, ಏ.27: “ನೈಜ ಅಪರಾಧಗಳು ನಡೆದಾಗ ಎಫ್ಐಆರ್ ದಾಖಲಿಸಲು ಜನ ನೂರಾರು ಬಾರಿ ಅಲೆಯಬೇಕು. ಆದರೆ ಎರಡು ವರ್ಷಗಳ ಹಳೆಯ ಹಸು ನಾಪತ್ತೆ ಪ್ರಕರಣಕ್ಕೆ ಈಗ ಎಫ್ಐಆರ್ ದಾಖಲಿಸುತ್ತೀರಿ,” ಎಂದು ಕರ್ನಾಟಕ ಹೈಕೋರ್ಟ್ ಪೊಲೀಸರ ವಿರುದ್ಧ ಚಾಟಿ ಬೀಸಿದೆ. ಚನ್ನಪಟ್ಟಣ ತಾಲೂಕಿನ ಬೇವೂರು ನಿವಾಸಿ ಪ್ರಸಾದ್ ಎಂಬುವರು 2024ರಲ್ಲಿ ತಮ್ಮ ಹೊಲದಲ್ಲಿ ಕಟ್ಟಿದ್ದ ಎರಡು ಹಸುಗಳು ನಾಪತ್ತೆಯಾಗಿದ್ದವು ಎಂದು ಈ ವರ್ಷದ (2026) ಮಾರ್ಚ್ನಲ್ಲಿ ದೂರು ನೀಡಿದ್ದರು. ಮಂಗಳಮ್ಮ, ಚೇತನ್, ಚಂದನ್ ಮತ್ತು ಸೌಮ್ಯಾ ಎಂಬುವವರು ಈ ಹಸುಗಳನ್ನು ಕದ್ದು ಮಾರಾಟ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಎಫ್ಐಆರ್ (FIR) ದಾಖಲಿಸಿದ್ದರು.
ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಆರೋಪಿ ಸ್ಥಾನದಲ್ಲಿದ್ದ ಕುಟುಂಬದ ನಾಲ್ವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಪೊಲೀಸರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದೆ. 2024ರಲ್ಲಿ ಹಸುಗಳು ಕಾಣೆಯಾಗಿದ್ದಕ್ಕೆ 2026ರಲ್ಲಿ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ಇಷ್ಟು ದಿನ ಏನು ಮಾಡುತ್ತಿದ್ದಿರಿ? ಎಂದು ಗದರಿದ್ದಾರೆ.
ಇದನ್ನೂ ಓದಿ: ‘ಎಂಥ ಮನುಷ್ಯರು ನೀವು?’: ಮೆಟ್ರೋದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಆರೋಪಿಗೆ ಹೈಕೋರ್ಟ್ ಛೀಮಾರಿ, ಅರ್ಜಿ ವಜಾ
ಗಂಭೀರ ಅಪರಾಧಗಳು ನಡೆದಾಗ ಎಫ್ಐಆರ್ ಮಾಡಲು ಹಿಂದೇಟು ಹಾಕುವ ಪೊಲೀಸರು, ಇಂತಹ ಪ್ರಕರಣಗಳಲ್ಲಿ ತಕ್ಷಣ ಕ್ರೈಂ ದಾಖಲಿಸುವುದು ಎಷ್ಟು ನ್ಯಾಯೋಚಿತ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಪೊಲೀಸರ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು, ಮಂಗಳಮ್ಮ ಮತ್ತು ಕುಟುಂಬದ ಇತರ ಮೂವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ತಡೆಯಾಜ್ಞೆ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



