
ಬೆಂಗಳೂರು, ಆಗಸ್ಟ್ 27: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಯುಜಿ ಸಿಇಟಿ 2026ರ (KEA UGCET 2026) ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇತ್ತೀಚೆಗೆ ಪ್ರಕಟಿಸಿದೆ. ಆದರೆ ಕೆಇಎಯ ಅದೊಂದು ನಿಯಮ ಇದೀಗ ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಮುಂದಿನ ಸುತ್ತಿಗೆ ತೆರಳಲು 5,000 ರೂ ದಂಡ ವಿಧಿಸಿರುವ ಪ್ರಾಧಿಕಾರದ ಆದೇಶವನ್ನು ವಿರೋಧಿಸಿ, ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿ ಮುಂದೆ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆಯಂತೆ, ಆನ್ಲೈನ್ ಮೂಲಕ ಸೀಟು ರದ್ದು ಪ್ರಕ್ರಿಯೆ ಇಂದಿನಿಂದ (ಆಗಸ್ಟ್ 27) ಆರಂಭವಾಗಿದ್ದು, ಆ.29ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಕೆಇಎ ಪೋರ್ಟಲ್ಗೆ ಲಾಗಿನ್ ಆಗಿ ದಂಡ ಮೊತ್ತ ಪಾವತಿಸಿ ಸೀಟು ರದ್ದುಪಡಿಸಿಕೊಂಡವರಿಗೆ ಮಾತ್ರ ಮೂರನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ. ಇದೇ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಎರಡನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ನಿಗದಿತ ಕಾಲೇಜಿನಲ್ಲಿ ಪ್ರವೇಶ ಪಡೆಯಲೇಬೇಕು. ಇಲ್ಲವೇ ಚಾಯ್ಸ್-1 ಆಯ್ಕೆ ಮಾಡದೆ 3ನೇ ಸುತ್ತಿಗೆ ಹೋಗಲು ಬಯಸಿದರೆ ತಮಗೆ ಸಿಕ್ಕ ಸೀಟನ್ನು ರದ್ದುಪಡಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ. ಆದರೆ, ಹೀಗೆ ಸೀಟು ರದ್ದುಪಡಿಸಲು ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ 5,000 ರೂ ದಂಡ ಪಾವತಿಸಬೇಕೆಂಬ ಷರತ್ತು ವಿದ್ಯಾರ್ಥಿ ಸಮುದಾಯವನ್ನು ಕೆರಳಿಸಿದೆ. ಶುಲ್ಕದ ಹೊರೆಯ ನಡುವೆ ಈ ರೀತಿ ದಂಡ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸಿಇಟಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA: ಆಕ್ಷೇಪಣೆ ಸಲ್ಲಿಕೆಗೆ ನಾಳೆ ಸಂಜೆ 4ರವರೆಗೆ ಗಡುವು!
ಪ್ರಾಧಿಕಾರದ ಈ ನಿರ್ಧಾರದಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೀವ್ರ ಹೊರೆಯಾಗುತ್ತಿದ್ದು, ಕೂಡಲೇ ಈ ದಂಡದ ನಿಯಮವನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮಾಡಿದ ಮಹಾ ಎಡವಟ್ಟಿನಿಂದಾಗಿ ನರ್ಸಿಂಗ್ ಹಾಗೂ ಬಿಪಿಟಿ ಕೋರ್ಸ್ಗಳ ಪ್ರವೇಶಾತಿ ಬಯಸಿದ್ದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಇದೀಗ ಅತಂತ್ರ ಸ್ಥಿತಿಗೆ ತಲುಪಿದೆ. ಇಲಾಖೆಯು ಅಧಿಕೃತವಾಗಿ ನೋಂದಣಿಯೇ ಆಗದ ಹಾಗೂ ವಿಳಾಸ ಬದಲಾಗಿರುವ ಕಾಲೇಜುಗಳ ಮಾಹಿತಿ ನೀಡಲಾಗಿದೆ. ಇತ್ತ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿರುವ ಕಾಲೇಜಗಳಿಗೆ ಕೆಇಎ ಸೀಟು ಹಂಚಿಕೆ ಮಾಡಿದೆ. ಇತಂಹ ಕಾಲೇಜುಗಳಿಗೆ ಸೀಟ್ ಹಂಚಿಕೆಯಾದ ವಿದ್ಯಾರ್ಥಿಗಳು ಇದೀಗ ಕೆಇಎ ಮುಂದೆ ಪ್ರತಿಭಟನೆಗೆ ಇಳಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.