
ಬೆಂಗಳೂರು, ಆಗಸ್ಟ್ 18: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯದ ಪವಿತ್ರ ಕೇದಾರನಾಥ ಕ್ಷೇತ್ರಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ (76) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಹಿಮಾಲಯದ ಪುಣ್ಯಕ್ಷೇತ್ರದ ಸನ್ನಿಧಿಯಲ್ಲಿ ದಶಕಗಳ ಕಾಲ ಶಿವನ ಆರಾಧನೆ ಮಾಡಿದ್ದ ಶ್ರೇಷ್ಠ ಅರ್ಚಕರೊಬ್ಬರನ್ನು ಧಾರ್ಮಿಕ ಲೋಕ ಇಂದು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ದೇಶಾದ್ಯಂತ ಇರುವ ಅಪಾರ ಭಕ್ತವೃಂದ ತೀವ್ರ ಶೋಕ ವ್ಯಕ್ತಪಡಿಸಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿ ಗ್ರಾಮದವರಾದ ಗುರುಲಿಂಗಯ್ಯ ಅವರ ಕುಟುಂಬವು ಕಳೆದ ಮೂರು ತಲೆಮಾರಿನಿಂದ ಉತ್ತರಾಖಂಡದಲ್ಲೇ ನೆಲೆಸಿದೆ. ಇವರು, ಕೇದಾರಪೀಠದ 322ನೇ ಜಗದ್ಗುರು ರಾವಲ್ ಶಾಂತ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಅರ್ಚಕರಾಗಿ ಸೇವೆಗೆ ಸೇರಿದ್ದರು. 1970 ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ನಿಷ್ಠೆ ಹಾಗೂ ಭಕ್ತಿಯಿಂದ ಸುದೀರ್ಘ ಸೇವೆ ಸಲ್ಲಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಕೇದಾರನಾಥ ಪೀಠದ (ಹಿಮವತ್ ಕೇದಾರ ವೈರಾಗ್ಯ ಪೀಠ) ಸಾಂಪ್ರದಾಯಿಕ ನಿಯಮಗಳ ಪ್ರಕಾರ, ದಕ್ಷಿಣ ಭಾರತದ (ವಿಶೇಷವಾಗಿ ಕರ್ನಾಟಕದ) ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ ಅರ್ಚಕರೇ ಇಲ್ಲಿ ಪೂಜೆ ಸಲ್ಲಿಸುವ ರಾವಲ್ ಅಥವಾ ಪ್ರಧಾನ ಅರ್ಚಕರಾಗುತ್ತಾರೆ. ಗುರುಲಿಂಗಯ್ಯ ಅವರು ಈ ಪವಿತ್ರ ಪರಂಪರೆಯನ್ನು ಮುನ್ನಡೆಸಿದವರಾಗಿದ್ದಾರೆ.
ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಸ್ವಗ್ರಾಮವಾದ ಬೆಳಗಾವಿಯ ಚಿಕ್ಕ ಬಾಗೇವಾಡಿಗೆ ತರಲಾಗಿದೆ. ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಕಲ ಗೌರವಗಳೊಂದಿಗೆ ಅವರ ಕ್ರಿಯಾ ಸಮಾಧಿ ನೆರವೇರಲಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Tue, 18 August 26