AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಡಳಿ ಅಥವಾ ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್​​ನ ವಿಮಾನ ನಿಲ್ದಾಣ ಸೇವಾ ಗುಣಮಟ್ಟದ ಜಾಗತಿಕ ಮಾನ್ಯತೆ ಪಟ್ಟಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನ ಪಡೆದುಕೊಂಡಿದೆ.

Bengaluru: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Ganapathi Sharma
|

Updated on: Mar 07, 2023 | 6:19 PM

Share

ಬೆಂಗಳೂರು: ಹಲವು ವಿಶೇಷಗಳ ಮೂಲಕ ಗುರುತಿಸಿಕೊಂಡಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಇದೀಗ ಮತ್ತೊಂದು ಗರಿಮೆಗೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಡಳಿ ಅಥವಾ ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್​​ನ (ACI) ವಿಮಾನ ನಿಲ್ದಾಣ ಸೇವಾ ಗುಣಮಟ್ಟದ ಜಾಗತಿಕ ಮಾನ್ಯತೆ (ASQ) ಪಟ್ಟಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನ ಪಡೆದುಕೊಂಡಿದೆ. ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಗುರುತಿಸಿಕೊಳ್ಳುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಗೌರವವು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿಯನ್ನು ತಂದುಕೊಟ್ಟಿದ್ದು, ಈ ಮೂಲಕ ಗ್ರಾಹಕ-ಕೇಂದ್ರಿತ ವಿಮಾನ ನಿಲ್ದಾಣವಾಗಿ ತನ್ನ ಸ್ಥಾನವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಯಾಣಿಕರಿಂದಲೇ ಆಯ್ಕೆಯಾಗುವ ಈ ಪ್ರಶಸ್ತಿಗೆ ಜಾಗತಿಕವಾಗಿ 15 ವಿಮಾನ ನಿಲ್ದಾಣಗಳನ್ನು ಪರಿಗಣಿಸಲಾಗಿತ್ತು.

ದೇಶದ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೆಟ್ರೋ ಅಲ್ಲದ ನಗರಗಳಿಗೆ ಸಂಪರ್ಕವನ್ನು ಸುಲಭಗೊಳಿಸುವ ಮೂಲಕ ಮತ್ತು ದಕ್ಷಿಣ ಭಾರತಕ್ಕೆ ಆದ್ಯತೆಯ ಸಂಚಾರ ಕೇಂದ್ರವಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ವಾಯುಯಾನ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಸಮರ್ಥ ಡಿಬೋರ್ಡಿಂಗ್ ಕಾರ್ಯವಿಧಾನಗಳು, ಸುವ್ಯವಸ್ಥಿತ ವಲಸೆ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳು, ಬ್ಯಾಗೇಜ್ ಕ್ಲೈಮ್ ಸೇವೆಗಳು ಮತ್ತು ಸಾರಿಗೆ, ಹೋಟೆಲ್‌ಗಳು ಮತ್ತು ಕೃತಕಬುದ್ಧಿಮತ್ತೆ- ಚಾಲಿತ ರೋಬೋಟ್‌ಗಳಂತಹ ಮೂಲಸೌಕರ್ಯಗಳ ಲಭ್ಯತೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ವಿಮಾನ ನಿಲ್ದಾಣದಲ್ಲಿ ಒದಗಿಸಲಾಗಿದೆ. ಈ ಮೂಲಕ ಪ್ರಯಾಣಿಕ ಸ್ನೇಹಿಯಾಗಿದೆ. ಉತ್ತಮ ಗ್ರಾಹಕರ ಅನುಭವವನ್ನು ನೀಡಲು ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಪ್ರಮಾಣವನ್ನು ನಿರ್ವಹಿಸಲು ಕಾರ್ಯಾಚರಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ವಿಮಾನ ನಿಲ್ದಾಣ ಮುಂದಾಗಿದೆ. ಈ ಮೂಲಕ ಭಾರತದ ಹೊಸ ಗೇಟ್‌ವೇ ಆಗುವ ಗುರಿಯನ್ನು ವಿಮಾನ ನಿಲ್ದಾಣ ಹೊಂದಿದೆ.

2022ರ ಜಾಗತಿಕ ಎಸಿಐನ ಎಎಸ್‌ಕ್ಯೂ ಸಮೀಕ್ಷೆ ಆಧಾರಿತ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ಸ್ವೀಕರಿಸಲು ಸಂತಸೆನಿಸುತ್ತದೆ. ಈ ಮನ್ನಣೆಯು ನಮ್ಮ ತಂಡದ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಜೊತೆಗೆ, ಕಸ್ಟಮ್ಸ್ ಮತ್ತು CISF ಸರ್ಕಾರಿ ಸಿಬ್ಬಂದಿಗಳ ಸಹಕಾರವೂ ಅತ್ಯಂತ ದೊಡ್ಡದು. ತಡೆರಹಿತ ಆಗಮನ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುವಲ್ಲಿ ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸುವೆ. ಅಷ್ಟೇ ಅಲ್ಲದೆ, ಈ ಸಾಧನೆಗೆ ಪ್ರಮುಖವಾಗಿ ಪ್ರಯಾಣಿಕರಿಗೂ ಅಭಿನಂದನೆ ಸಲ್ಲಿಸುವೆ. ಈ ಪ್ರಶಸ್ತಿಯು ಉತ್ಕೃಷ್ಟತೆಯ ಕಡೆಗೆ ಶ್ರಮಿಸುವುದನ್ನು ಮುಂದುವರಿಸಲು ಮತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿ ನಮ್ಮ ಸ್ಥಾನವನ್ನು ಬಲಪಡಿಸಲು ಮತ್ತಷ್ಟು ಪ್ರೇರೇಪಿಸುತ್ತದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಹೇಳಿದರು.

ಇದನ್ನೂ ಓದಿ: Top Performing Airports: ಅತ್ಯುತ್ತಮ ಕಾರ್ಯನಿರ್ವಹಣೆ; ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣ

ಪ್ರಯಾಣಿಕರಿಂದ ಆಯ್ಕೆ ಮಾಡಿ ನೀಡಲಾಗುವ ಈ ಪ್ರಶಸ್ತಿಗಳನ್ನು ವಿಮಾನ ನಿಲ್ದಾಣಗಳ ಸಮುದಾಯದಿಂದಲೇ ನೀಡಲಾಗುತ್ತವೆ. ಇದು ವಿಮಾನ ನಿಲ್ದಾಣದ ಉದ್ಯೋಗಿಗಳು ಮತ್ತು ಇತರ ಮಧ್ಯಸ್ಥಗಾರರ ಶ್ರೇಣಿಯನ್ನು ಒಳಗೊಂಡಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಡೀ ತಂಡವನ್ನು ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿ ಪಡೆದಿರುವ ಈ ಯಶಸ್ಸಿಗೆ ಅಭಿನಂದಿಸುತ್ತೇನೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಡಳಿ ಪ್ರಧಾನ ನಿರ್ದೇಶಕ ಲೂಯಿಸ್ ಫೆಲಿಪೆ ಡಿ ಒಲಿವೇರಾ ಹೇಳಿದರು.

ವಿಮಾನ ನಿಲ್ದಾಣ ಸೇವಾ ಗುಣಮಟ್ಟ ವಿಶ್ವದ ಪ್ರಮುಖ ವಿಮಾನ ನಿಲ್ದಾಣಗಳ ಗ್ರಾಹಕರ ಅನುಭವದ ಮಾಪನವಾಗಿದೆ. ಇದು ಪ್ರಯಾಣಿಕರಿಂದ ವಿಮಾನ ನಿಲ್ದಾಣದಲ್ಲಿ ಸಂಗ್ರಹಿಸಿದ ಸಮೀಕ್ಷೆಗಳ ಮೂಲಕ ನಿರ್ಧರಿಸಲ್ಪಡುತ್ತದೆ. ನೇರ ಸಂಶೋಧನೆಯ ಆಧಾರದ ಮೇಲೆ ಮತ್ತು ಪ್ರಯಾಣದ ದಿನದಂದು ಪ್ರಯಾಣಿಕರು ನೀಡುವ ರೇಟಿಂಗ್ ಮಾಡುತ್ತದೆ. ಈ ಸಮೀಕ್ಷೆಯನ್ನು ವಿಶ್ವದಾದ್ಯಂತ 340 ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗಿದೆ. ವಿಮಾನ ನಿಲ್ದಾಣ ಸೇವೆಯ ಗುಣಮಟ್ಟವನ್ನು ಅಳೆಯಲು ಉದ್ಯಮದ ಮಾನದಂಡವೆಂದು ಪರಿಗಣಿಸಲಾಗಿದೆ.

ಪ್ರಯಾಣಿಕರಿಗೆ ತೊಂದರೆ-ಮುಕ್ತ ಅನುಭವವನ್ನು ಒದಗಿಸಲು ಬೆಂಗಳೂರು ವಿಮಾನ ನಿಲ್ದಾಣವು ನಿರಂತರವಾಗಿ ಹೊಸತನವನ್ನು ಜಾರಿ ಮಾಡುತ್ತಾ ಬರುತ್ತಿದೆ. ಈ ಹಿಂದೆ, ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI), ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (CII) ನಿಂದ ಗ್ರಾಹಕ ಪ್ರಶಸ್ತಿ, ಭಾರತ ಮತ್ತು ದಕ್ಷಿಣದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣದಂತಹ ‘ಗ್ರಾಹಕರ ಧ್ವನಿ’ ಮನ್ನಣೆಯಂತಹ ಹಲವಾರು ಮನ್ನಣೆಗಳು ಮತ್ತು ಪ್ರಶಸ್ತಿಗಳನ್ನು ವಿಮಾನ ನಿಲ್ದಾಣವು ಪಡೆದಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಮೂಲಕ ಏಷ್ಯಾವಿಮಾನ ನಿಲ್ದಾಣ ಪ್ರಶಸ್ತಿಗಳು 2022 ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ