
ಬೆಂಗಳೂರು, ಜುಲೈ 09: ರಾಜ್ಯ ಬೀದಿಬದಿ ವ್ಯಾಪಾರಿಗಳ ಒಕ್ಕೂಟಗಳಿಂದ ಬುಧವಾರ ಫುಟ್ಪಾತ್ ತೆರವು (Footpath Eviction Drive) ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟಿಸುವ ಮೂಲಕ ನಮ್ಮ ವ್ಯಾಪಾರಕ್ಕೆ ಸೂಕ್ತ ಸ್ಥಳ ಒದಗಿಸುವಂತೆ ಹಕ್ಕೊತ್ತಾಯ ಮಂಡಿಸಿದರು. ಈ ಬೆನ್ನಲ್ಲೇ ಇಂದು ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಮುಖಂಡರ ಜೊತೆ ಸಚಿವ ಕೃಷ್ಣಬೈರೇಗೌಡ (Krishna Byre Gowda) ಮಹತ್ವದ ಸಭೆ ಮಾಡಿದರು. ಈ ಬಗ್ಗೆ ಮಾತನಾಡಿದ ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ರಂಗಸ್ವಾಮಿ, ತೆರವು ಕಾರ್ಯಾಚರಣೆಗೆ ನಮ್ಮ ಸಂಪೂರ್ಣ ಸಹಮತ ಇದೆ ಎಂದು ಹೇಳಿದ್ದಾರೆ.
ಸಚಿವ ಕೃಷ್ಣಬೈರೇಗೌಡರೊಂದಿಗಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ರಂಗಸ್ವಾಮಿ, ‘‘ಇಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸಭೆ ಕರೆದಿದ್ದರು. ಸಭೆಯಲ್ಲಿ ನಮ್ಮ ಕಷ್ಟ, ಗೊಂದಲಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಪ್ರಮುಖ ರಸ್ತೆಯನ್ನು ಹೊರತು ಪಡಿಸಿ ಆಂತರಿಕ ರಸ್ತೆಯಲ್ಲಿ ವ್ಯಾಪಾರ ಮಾಡಲು ಯಾವುದೇ ರೀತಿಯ ವಿರೋಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ’’ ಎಂದರು.
ಇದನ್ನೂ ಓದಿ: ಫುಟ್ಪಾತ್ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಸಚಿವ ಕೃಷ್ಣಬೈರೇಗೌಡ ಸುಳಿವು
‘‘ಅಷ್ಟೇ ಅಲ್ಲದೆ ಆದಷ್ಟು ಬೇಗ ವೆಂಡಿಂಗ್ ಜೋನ್ಗಳ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದ್ದಾರೆ. ಹಾಗಾಗಿ ಸಚಿವ ಕೃಷ್ಣಬೈರೇಗೌಡರ ತೆರವು ಕಾರ್ಯಾಚರಣೆಗೆ ನಮ್ಮ ಸಂಪೂರ್ಣ ಸಹಮತ ಇದೆ’’ ಎಂದು ರಂಗಸ್ವಾಮಿ ಹೇಳಿದ್ದಾರೆ.
ಇನ್ನು ಕೃಷ್ಣಬೈರೇಗೌಡರೊಂದಿಗಿನ ಸಭೆಗೂ ಮುಂಚೆ ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘‘ಇಂದು ಬೆಳಿಗ್ಗೆ ಸಿಎಂ ಡಿಕೆ ಶಿವಕುಮಾರ್ರನ್ನು ಸಹ ಭೇಟಿ ಮಾಡಿ ಅವರ ಜೊತೆಗೆ ಮಾತಾಡಿದ್ದೇನೆ. ಬೀದಿಬದಿ ವ್ಯಾಪಾರಸ್ತರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತೆ. ಗುರುತು ಮಾಡಿದ ಜಾಗದಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಿದ್ದಾರೆ. ಜಾಗ ಇದ್ದರೆ ಅಂಗಡಿ ಮಾಡಿ ಕೊಡುವುದಾಗಿ ಸಿಎಂ ತಿಳಿಸಿದ್ದಾರೆ’’ ಎಂದರು.
ವರದಿ: ಅರುಣ್ ಕುಮಾರ್ ಮೆಟ್ರೋ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.