ವಕೀಲೆ ಜೀವಾ ಆತ್ಮಹತ್ಯೆ: Dysp ಕನಕಲಕ್ಷ್ಮಿ ಬಂಧನಕ್ಕೆ ಸಿಕ್ಕ ಮಹತ್ವದ ಸಾಕ್ಷ್ಯ ಏನು ಗೊತ್ತಾ?
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಲಾಗಿದೆ. ಜೀವಾ ವಿಚಾರಣೆ ವೇಳೆ ಚಿತ್ರೀಕರಿಸಿದ್ದ ವೀಡಿಯೋ ದೃಶ್ಯಗಳು ಬಂಧನಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಜೀವಾ ಡೆತ್ ನೋಟ್ನಲ್ಲಿ ಆರೋಪಿಸಿದ್ದ ವಿಷಯಗಳು ದೃಢಪಟ್ಟಿವೆ. 15ಕ್ಕೂ ಹೆಚ್ಚು ಜನ ಕನಕಲಕ್ಷ್ಮಿ ಪರವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ವಿಡಿಯೋದಲ್ಲಿನ ಸಾಕ್ಷ್ಯಗಳು ಕನಕಲಕ್ಷ್ಮಿ ವಿರುದ್ಧವಾಗಿರುವುದು ಪತ್ತೆಯಾಗಿದೆ.

ಬೆಂಗಳೂರು, ಮಾರ್ಚ್ 12: ವಕೀಲೆ ಜೀವಾ (advocate jeeva) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎಸ್ಐಟಿ ಅಧಿಕಾರಿಗಳು ಡಿವೈಎಸ್ಪಿ ಕನಕಲಕ್ಷ್ಮಿ (Dysp Kanaka Lakshmi) ಅವರನ್ನು ಬಂಧಿಸಿದ್ದಾರೆ. ಜೀವಾ ವಿಚಾರಣೆ ವೇಳೆ ಡಿವೈಎಸ್ಪಿ ಕನಕಲಕ್ಷ್ಮಿ ಶೂಟ್ ಮಾಡಿಸಿದ್ದ ವಿಡಿಯೋಗ್ರಫಿಯೇ ಅವರ ಬಂಧನಕ್ಕೆ ಅಸ್ತ್ರವಾಗಿದೆ. ಎಸ್ಐಟಿ ತನಿಖೆ ವೇಳೆ ಈ ಸಾಕ್ಷ್ಯ ಪತ್ತೆ ಆಗಿದೆ. ವಿಚಾರಣೆ ಪ್ರಕ್ರಿಯೆ ವೇಳೆ ಕಿರುಕುಳ ಕೊಟ್ಟಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದಲ್ಲಿ ಸದ್ಯ ಅವರುನ್ನು ಬಂಧಿಸಲಾಗಿದೆ. ಒಟ್ಟಾರೆ ಪ್ರಕರಣದಲ್ಲಿ 32 ಮಂದಿಯ ಹೇಳಿಕೆಯನ್ನು ಎಸ್ಐಟಿ ದಾಖಲಿಸಿದೆ.
ವಕೀಲೆ ಜೀವಾ ಡೆತ್ ನೋಟ್ನಲ್ಲಿ ಮಾಡಿದ್ದ ಗಂಭೀರ ಆರೋಪಗಳಲ್ಲಿ ಶೇಕಡ 90% ವಿಡಿಯೋದಲ್ಲೇ ಬೆಳಕಿಗೆ ಬಂದಿದೆ. ಇನ್ನು ವಿಡಿಯೋ ಚಿತ್ರೀಕರಣವನ್ನು ಸುದೀರ್ಘವಾಗಿ ಮಾಡದೆ, ಕಟ್ ಕಟ್ ಮಾಡಿ ಮುಂದುವರೆಸಿರುವುದು ಕೂಡ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಕೇಸ್: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅರೆಸ್ಟ್!
ಈ ನಡುವೆ 15 ಕ್ಕೂ ಹೆಚ್ಚು ಮಂದಿಯು ಕನಕಲಕ್ಷ್ಮಿ ಪರವಾಗಿಯೇ ಹೇಳಿಕೆ ದಾಖಲಿಸಿದ್ದಾರೆ. ಆದರೆ ವಿಡಿಯೋ ಚಿತ್ರೀಕರಣದಲ್ಲೇ ಜೀವಾ ಡೆತ್ ನೋಟ್ನಲ್ಲಿನ ಆರೋಪ ಸಂಬಂಧಿತ ವಿಚಾರಗಳು ಬೆಳಕಿಗೆ ಬಂದಿದ್ದು, ಈ ಮೂಲಕ ಎಸ್ಐಟಿ ತಂಡ ಬಂಧಿಸಿ ತನಿಖೆ ಕೈಗೊಂಡಿದೆ.
ವಿವಸ್ತ್ರಗೊಳಿಸಿ ವಿಚಾರಣೆ: 25 ಲಕ್ಷ ರೂ. ಲಂಚಕ್ಕೆ ಬೇಡಿಕೆ
ಬೆಂಗಳೂರಿನ ಪದ್ಮನಾಭ ನಗರದ ನಿವಾಸಿ ವಕೀಲೆ ಜೀವಾ 2024ರ ನವೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2021-22ರಲ್ಲಿ ಬೆಳಕಿಗೆ ಬಂದ ಭೋವಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿವಸ್ತ್ರಗೊಳಿಸಿ ವಿಚಾರಣೆ ಮಾಡಿದ್ದಲ್ಲದೇ 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ವಕೀಲೆ ಜೀವಾ ತಮ್ಮ ಡೆತ್ ನೋಟ್ನಲ್ಲಿ ಕನಕಲಕ್ಷ್ಮಿ ವಿರುದ್ಧ ಆರೋಪ ಮಾಡಿದ್ದರು.
ನವೆಂಬರ್ 14 ರಂದು ಹೈಕೋರ್ಟ್ ನಿರ್ದೇಶನದ ಮೇರೆಗೆ ಜೀವಾ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು ಎಂದು ವರದಿಯಾಗಿದೆ. ಡಿವೈಎಸ್ಪಿ ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ, ವಿಚಾರಣೆಯ ಸಮಯದಲ್ಲಿ ತನ್ನ ಬಟ್ಟೆ ಬಿಚ್ಚಿಟ್ಟಿದ್ದಾರೆ ಮತ್ತು ಸೈನೈಡ್ ಸಾಗಿಸುತ್ತಿದ್ದಾಳೆ ಎಂದು ವಿಚಾರಣೆ ಮಾಡಿರುವುದಾಗಿ ಜೀವಾ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ, ಡಿವೈಎಸ್ಪಿ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ಜೀವಾ ಸಲ್ಲಿಸಿದ ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ, ಕನಕಲಕ್ಷ್ಮೀ ಬಂಧನ ಆಗಬೇಕು: ವಕೀಲರ ಸಂಘದ ಅಧ್ಯಕ್ಷ ವಿವೇಕ್ ಆಗ್ರಹ
ಎಫ್ಐಆರ್ ಪ್ರಕಾರ, ನವೆಂಬರ್ 14 ರಿಂದ 21 ರವರೆಗೆ ಕಿರುಕುಳ ನೀಡಲಾಗಿದೆ. ಇನ್ನು ಜೀವಾ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಡಿವೈಎಸ್ಪಿ ಅವರ ಅಂಗಡಿ ಬಳಿ ತೆರಳಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಜೀವಾ ಸಹೋದರಿ ಸಂಗೀತ್ ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Wed, 12 March 25