ಜೈಲಲ್ಲಿ ಎಣ್ಣೆ ಪಾರ್ಟಿ ಕೇಸ್​ಗೆ ಸ್ಫೋಟಕ ಟ್ವಿಸ್ಟ್​: ಬಾಟಲಿಯಲ್ಲಿ ಇದ್ದಿದ್ದು ಮದ್ಯವಲ್ಲ, ಮೂತ್ರ?

ಜೈಲಿನಲ್ಲಿ ಕೈದಿಗಳ ಎಣ್ಣೆ ಪಾರ್ಟಿ ವಿಡಿಯೋ ವೈರಲ್​ ವಿಚಾರಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪ್ರಾಥಮಿಕ ತನಿಖೆ ವೇಳೆ ಕಳ್ಳಾಟ ಬಯಲಾಗಿದ್ದು, ಬೇಕಂತಲೇ ವಿಡಿಯೋ ಮಾಡಿ ಹರಿಬಿಟ್ಟಿರುವುದು ಗೊತ್ತಾಗಿದೆ. ಜೈಲಿನಲ್ಲಿನ ಅಕ್ರಮಗಳ ಹಿಂದೆ ಅಧಿಕಾರಿಗಳ ಕೈವಾಡವಿದ್ದು, ಹುದ್ದೆಗಳಿಗಾಗಿ ಅಥವಾ ಹಣಕಾಸಿನ ಲಾಭಕ್ಕಾಗಿ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ಯಾ ಎಂಬ ಅನುಮಾನಕ್ಕೆ ಮತ್ತಿಷ್ಟು ಪುಷ್ಠಿ ಸಿಕ್ಕಿದೆ.

ಜೈಲಲ್ಲಿ ಎಣ್ಣೆ ಪಾರ್ಟಿ ಕೇಸ್​ಗೆ ಸ್ಫೋಟಕ ಟ್ವಿಸ್ಟ್​: ಬಾಟಲಿಯಲ್ಲಿ ಇದ್ದಿದ್ದು ಮದ್ಯವಲ್ಲ, ಮೂತ್ರ?
ಪರಪ್ಪನ ಅಗ್ರಹಾರ

Updated on: Nov 10, 2025 | 6:05 PM

ಬೆಂಗಳೂರು, ನವೆಂಬರ್​ 10: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಎಣ್ಣೆ ಪಾರ್ಟಿ ವಿಡಿಯೋ ವೈರಲ್​ ವಿಚಾರಕ್ಕೀಗ ಸ್ಪೋಟಕ ತಿರುವು ಸಿಕ್ಕಿದೆ. ಮದ್ಯದ ಬಾಟಲಿಗೆ ಮೂತ್ರ ತುಂಬಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. 3 ಬಾಟಲಿಗಳನ್ನು ಸಾಲಾಗಿ ಜೋಡಿಸಿ ವಿಡಿಯೋ ಮಾಡಿದ್ದು, ಗ್ಲಾಸ್​ಗೆ ಮೂತ್ರ ತುಂಬಿಸಿ ಮದ್ಯದ ರೀತಿಯಲ್ಲಿ ಅದನ್ನು ಬಿಂಬಿಸಲಾಗಿದೆ. ಬಳಿಕ ಆ ವಿಡಿಯೋವನ್ನ ಬೇಕಂತಲೇ ಹರಿಬಿಟ್ಟಿದ್ದಾರೆ ಎಂಬುದು ಗೊತ್ತಾಗಿದೆ.

ಷಡ್ಯಂತ್ರದ ಅನುಮಾನಕ್ಕೆ ಮತ್ತಷ್ಟು ಪುಷ್ಠಿ?

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಮೊಬೈಲ್​ ಮತ್ತು ಟಿವಿಗಳ ಬಳಕೆಯ ವಿಡಿಯೋಗಳು ವೈರಲ್​ ಆಗಿದ್ದವು. ಜೈಲಿನಲ್ಲಿ ಭಯೋತ್ಪಾದಕರು ಮತ್ತು ಅತ್ಯಾಚಾರಿಗಳ ಕೈಯಲ್ಲಿ ಮೊಬೈಲ್ ಫೋನ್‌ಗಳೂ ಪತ್ತೆಯಾಗಿದ್ದವು. ಈ ಅಕ್ರಮಗಳ ಹಿಂದೆ ಅಧಿಕಾರಿಗಳ ಕೈವಾಡವಿದ್ದು, ಹುದ್ದೆಗಳಿಗಾಗಿ ಅಥವಾ ಹಣಕಾಸಿನ ಲಾಭಕ್ಕಾಗಿ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ಯಾ ಎಂಬ ಅನುಮಾನ ವ್ಯಕ್ತವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಉನ್ನತ ಹುದ್ದೆಗಳಿಗೆ ಭಾರಿ ಬೇಡಿಕೆ ಇದ್ದು, ಇಲ್​ಲಿ ವಿಐಪಿ ಖೈದಿಗಳಿಗೆ ಸೌಲಭ್ಯ ನೀಡಿಯೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗುತ್ತೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನ ಟಾರ್ಗೆಟ್​ ಮಾಡುವ ಉದ್ದೇಶದಿಂದ ಸಿಬ್ಬಂದಿಯೇ ಈ ಕೆಲಸ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಹಿನ್ನಲೆ ತನಿಖೆ ಆರಂಭಿಸಿದಾಗ ಮದ್ಯದ ಬಾಟಲಿಗೆ ಮೂತ್ರ ತುಂಬಿಸಿ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿರೋದು, ಷಡ್ಯಂತ್ರದ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: FIR ದಾಖಲು, ಎನ್​​ಐಎ ಎಂಟ್ರಿ

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಅವರನ್ನು ಈಗಾಗಲೆ ಸಸ್ಪೆಂಡ್ ಮಾಡಲಾಗಿದೆ. ಜೊತೆಗೆ ಈ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಗೃಹ ಸಚಿವರು ಆದೇಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ಸಮಿತಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿರೋದಾಗಿ ತಿಳಿಸಿದ್ದಾರೆ.

ವರದಿ: ವಿಕಾಸ್​ ಟಿವಿ9, ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:04 pm, Mon, 10 November 25