ಬೆಂಗಳೂರು: ಬಾಮೈದ ಮಾಡಿದ ತಪ್ಪಿಗೆ ತನ್ನ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

| Updated By: ಆಯೇಷಾ ಬಾನು

Updated on: Oct 10, 2024 | 8:42 AM

ಮಿಡಲ್ ಕ್ಲಾಸ್ ಜನರು ಯಾವುದಕ್ಕೆ ಭಯ ಪಡ್ತಾರೋ ಇಲ್ವೋ. ಆದ್ರೆ ಮಾನ‌ ಮರ್ಯಾದೆ ಅಂತಾ ಬಂದ್ರೆ ಜೀವವೇ ಕಳೆದುಕೊಳ್ಳಲು ಸಹ ಹಿಂದೆ ಮುಂದೆ ನೋಡಲ್ಲ. ಬೆಂಗಳೂರಿನಲ್ಲಿ ಈಗ ಆಗಿದ್ದೂ ಅದೇ. ವ್ಯಕ್ತಿಯೊಬ್ಬ ಮಾನ ಮರ್ಯಾದಿಗೆ ಅಂಜಿ ತನ್ನ ಕೈಯಾರೆ ತನ್ನ ಕತ್ತನ್ನ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು: ಬಾಮೈದ ಮಾಡಿದ ತಪ್ಪಿಗೆ ತನ್ನ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಸಾವು
Image Credit source: Citizens for Justice and Peace
Follow us on

ಬೆಂಗಳೂರು, ಅ.10: ಮಾನ ಮರ್ಯಾದಿಗೆ ಅಂಜಿ ತನ್ನ ಕತ್ತನ್ನ ತಾನೇ ಸೀಳಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ (Death) ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರಿನ ಬಳಿ ನಡೆದಿದೆ. 45 ವಯಸ್ಸಿನ ಮೋಹನ್ ಕುಮಾರ್ ಎಂಬಾತ ಚಾಕುವೊಂದರಿಂದ ತನ್ನ ಕತ್ತನ್ನ ತಾನೇ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದೇ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ನಿವಾಸಿಯಾಗಿರೋ ಮೋಹನ್ ಕುಮಾರ್ ಪೇಂಟಿಂಗ್ ಕೆಲಸ ಮಾಡ್ಕೊಂಡಿದ್ದ. ಆತನ ಪತ್ನಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡ್ತಿದ್ದರು. ಆಗೋ ಹೀಗೋ ಕುಟುಂಬ ಚೆನ್ನಾಗಿಯೇ ನಡೀತಿತ್ತು. ಆದ್ರೆ ಇತ್ತೀಚೆಗೆ ಈತನ ಬಾಮೈದ ಮಾಡಿದ್ದ ಕೆಲಸ ಮೋಹನ್ ಕುಮಾರ್ ಗೆ ತಲೆ ತಗ್ಗಿಸುವಂತೆ ಮಾಡಿತ್ತು. ವಿವಿ ಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಅರೆಸ್ಟ್ ಆಗಿದ್ದ. ಕಳ್ಳತನ ಮಾಡಿದ್ದವ ಇದೇ ಮೋಹನ್ ಕುಮಾರ್ ಮನೇಲಿ‌ ಕದ್ದಿದ್ದ ಚಿನ್ನ ತಂದಿಟ್ಟಿದ್ದ. ತನಿಖೆ ನಡೆಸಿದ್ದ ವಿವಿ ಪುರಂ ಪೊಲೀಸರು ಮೋಹನ್ ಕುಮಾರ್ ಮನೆಯಲ್ಲಿ ಚಿನ್ನ ವಶಪಡೆದು ಕೇಸ್ ಸಂಬಂಧ ವಿಚಾರಣೆ ಕರೆದಿದ್ರು. ಆಗಾಗ ಠಾಣೆಗೆ ಓಡಾಡೋ ಪರಿಸ್ಥಿತಿ ಬಂದಿತ್ತು.

ಇದನ್ನೂ ಓದಿ: Karnataka Rains: ಮುಂದಿನ ಒಂದು ವಾರ ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಮಳೆ

ಇದ್ರಿಂದ ಮೊದಲೇ ಮನ ನೊಂದಿದ್ದ ಮೋಹನ್ ಕುಮಾರ್ ಗೆ ಚಿನ್ನ ಕಳೆದು ಕೊಂಡಿದ್ದ ದೂರುದಾರ ಬೈತಿದ್ನಂತೆ. ನನ್ನ ಚಿನ್ನ ನಿಮ್ಮ ಮನೇಲಿ ಯಾಕಿಟ್ಕೊಂಡಿದ್ದೆ. ನಿನ್ನ ಬಾಮೈದನ ಜೊತೆ ಸೇರಿ ನೀನೂ ಕಳ್ಳತನ ಮಾಡಿದ್ಯಾ ಹಾಗೇ ಹೀಗೆ ಬೈತಿದ್ನಂತೆ. ಠಾಣೆ ಹತ್ತಿರ ಅಲ್ಲದೇ ಇತ್ತೀಚೆಗೆ ಅಮೃತಹಳ್ಳಿಯ ಮೋಹನ್ ಮನೆ ಬಳಿ ಬಂದು ಗಲಾಟೆ ಮಾಡಿ ಬೈದಿದ್ನಂತೆ. ಇದ್ರಿಂದ ತೀವ್ರ ಮನ ನೊಂದಿದ್ದ ಮೋಹನ್ ಕುಮಾರ್ ಮಾಡದ ತಪ್ಪಿಗೆ ಮಾನ ಹೋಯ್ತು ಅಂತಾ ಚಾಕು ಕೈ ಹಿಡ್ಕೊಂಡು ಖಾಲಿ ಸೈಟ್ ವೊಂದರ ಬಳಿ ಹೋದಾತ ಮರದ ಕೆಳಗಡೆ ಕುಳಿತು ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಈ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಮೇಲು ನೋಟಕ್ಕೆ ಇದು ಆತ್ಮಹತ್ಯೆ ಅಂತಾ ಗೊತ್ತಾಗಿದೆ. ಸದ್ಯ ತನಿಖೆ ನಡೀತಿದ್ದು ಮೋಹನ್ ಕುಮಾರ್ ಸಾವಿಗೆ ಬೇರೆ ಏನಾದ್ರು ಕಾರಣ ಇದ್ಯಾ? ಅನ್ನೋದು ತನಿಖೆ ನಂತರವೇ ಗೊತ್ತಾಗಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ