ಇದು ಮಾನ್ಯತಾ ಟೆಕ್ ಪಾರ್ಕ್ ಅಲ್ಲ, ಮಾನ್ಯತಾ ವಾಟರ್ ಪಾರ್ಕ್! ಮಳೆಯಿಂದ ಹೊಳೆಯಂತಾದ ರಸ್ತೆಯ ವಿಡಿಯೋ ವೈರಲ್

ಬೆಂಗಳೂರಿನ ಪ್ರತಿಷ್ಠಿತ ಮಾನ್ಯತಾ ಟೆಕ್ ಪಾರ್ಕ್ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಜಲಾವೃತಗೊಂಡಿದ್ದು, ರಸ್ತೆಗಳು ಕೆರೆಯಂತಾಗಿವೆ. ಐಟಿ ಉದ್ಯೋಗಿಗಳು ಮನೆಗೆ ತೆರಳಲು ಪರದಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ‘ಮಾನ್ಯತಾ ಟೆಕ್ ಪಾರ್ಕ್ ಅಲ್ಲ ವಾಟರ್ ಪಾರ್ಕ್’ ಎಂದು ಟ್ರೋಲ್ ಮಾಡಲಾಗಿದೆ. ಸದ್ಯ ಹೊಳೆಯಂತಾಗಿರುವ ರಸ್ತೆಯ ವಿಡಿಯೋ ಭಾರಿ ವೈರಲ್ ಆಗಿದೆ.

ಇದು ಮಾನ್ಯತಾ ಟೆಕ್ ಪಾರ್ಕ್ ಅಲ್ಲ, ಮಾನ್ಯತಾ ವಾಟರ್ ಪಾರ್ಕ್! ಮಳೆಯಿಂದ ಹೊಳೆಯಂತಾದ ರಸ್ತೆಯ ವಿಡಿಯೋ ವೈರಲ್
ಮಳೆಯಿಂದ ಹೊಳೆಯಂತಾದ ಮಾನ್ಯತಾ ಟೆಕ್ ಪಾರ್ಕ್ ರಸ್ತೆ
Image Credit source: @karnatakaportf

Updated on: May 19, 2026 | 1:46 PM

ಬೆಂಗಳೂರು, ಮೇ 19: ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನ (Bengaluru) ಜಾಗತಿಕ ಐಟಿ ಇಮೇಜ್‌ಗೆ ಸೋಮವಾರ ಸಂಜೆ ಸುರಿದ ಭಾರಿ ಮಳೆ ಮತ್ತೊಮ್ಮೆ ಮಸಿ ಬಳಿದಿದೆ. ದೇಶದ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಟೆಕ್ ಪಾರ್ಕ್‌ಗಳಲ್ಲಿ ಒಂದಾದ ಹೆಣ್ಣೂರು ರಸ್ತೆಯ ‘ಮಾನ್ಯತಾ ಟೆಕ್ ಪಾರ್ಕ್’ ಏರಿಯಾವು ಕೇವಲ ಒಂದು ಸಂಜೆಯ ಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ಕಚೇರಿ ಮುಗಿಸಿ ಮನೆಗೆ ಹೊರಟ ಸಾವಿರಾರು ಐಟಿ ಉದ್ಯೋಗಿಗಳು ರಸ್ತೆಯಲ್ಲಿ ಮೊಣಕಾಲುದ್ದ ನಿಂತಿದ್ದ ನೀರಿನಲ್ಲಿ ಪರದಾಡಿದ್ದಾರೆ.

ಸದ್ಯ, ಮಾನ್ಯತಾ ಟೆಕ್ ಪಾರ್ಕ್‌ನ ಈ ದುಸ್ಥಿತಿಯ ವೀಡಿಯೊ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಇದನ್ನು ‘ಮಾನ್ಯತಾ ಟೆಕ್ ಪಾರ್ಕ್ ಅಲ್ಲ, ಮಾನ್ಯತಾ ವಾಟರ್ ಪಾರ್ಕ್’ ಅಥವಾ ‘ಮಾನ್ಯತಾ ಸರೋವರ’ ಎಂದು ಲೇವಡಿ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಜಿಬಿಎ ಆಡಳಿತ ನಿರ್ಲಕ್ಷ್ಯದ ವಿರುದ್ಧ ಜನಾಕ್ರೋಶ.
  • ಐಟಿ ಉದ್ಯೋಗಿಗಳಿಂದ ತೀವ್ರ ಅಸಮಾಧಾನ.
  • ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ.

‘ಗ್ಲಾಸ್ ಬಿಲ್ಡಿಂಗ್ ಇದ್ದರೆ ಸಾಲದು, ಸರಿಯಾದ ರಸ್ತೆ ಇರಬೇಕು’

ಪ್ರತಿ ವರ್ಷ ಮುಂಗಾರು ಆರಂಭವಾಗುವ ಮುನ್ನವೇ ಬೆಂಗಳೂರಿನಲ್ಲಿ ಇದೇ ಅವಸ್ಥೆ ಮರುಕಳಿಸುತ್ತಿದೆ. ಮಳೆ ಬಂದ ತಕ್ಷಣ ರಸ್ತೆಗಳು ಕಣ್ಮರೆಯಾಗುತ್ತವೆ, ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಕುಸಿಯುತ್ತದೆ ಮತ್ತು ಸಾರ್ವಜನಿಕರು ರಸ್ತೆಯಲ್ಲೇ ಗಂಟೆಗಟ್ಟಲೆ ನರಕಯಾತನೆ ಅನುಭವಿಸುತ್ತಾರೆ. ಕೇವಲ ದೊಡ್ಡ ದೊಡ್ಡ ಗ್ಲಾಸ್ ಬಿಲ್ಡಿಂಗ್‌ಗಳು ಹಾಗೂ ಆಕರ್ಷಕ ಕಚೇರಿಗಳನ್ನು ನಿರ್ಮಿಸಿದರೆ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ, ಅದಕ್ಕೆ ತಕ್ಕಂತೆ ಸೂಕ್ತ ಒಳಚರಂಡಿ ಮತ್ತು ಪ್ರವಾಹ ನಿರ್ವಹಣಾ ವ್ಯವಸ್ಥೆ ಇರಬೇಕು ಎಂದು ಉದ್ಯೋಗಿಗಳು ಆಗ್ರಹಿಸಿರುವುದಾಗಿ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಕ್ಸ್​​​​ ಖಾತೆಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ


ದೇಶದ ನಂಬರ್ ಒನ್ ಐಟಿ ಹಬ್‌ನ ಸ್ಥಿತಿಯೇ ಹೀಗಾದರೆ, ಇನ್ನು ನಗರದ ಉಳಿದ ಸಾಮಾನ್ಯ ಪ್ರದೇಶಗಳ ಗತಿ ಏನು ಎಂದು ಸಾರ್ವಜನಿಕರು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us