ಡೆಂಗ್ಯೂ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸ್ತಿದ್ದಾರೆ: ದಿನೇಶ್ ಗುಂಡೂರಾವ್ ವಾಗ್ದಾಳಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 08, 2024 | 4:24 PM

ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್ ಅವರು ಮೊನ್ನೆ ಅಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಇನ್ನು ಈ ವಿಡಿಯೋವನ್ನು ಬಿಜೆಪಿ ಐಟಿ ಸೆಲ್​ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿತ್ತು. ಇದೀಗ ಇದಕ್ಕೆ ಸ್ವತಃ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಡೆಂಗ್ಯೂ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸ್ತಿದ್ದಾರೆ: ದಿನೇಶ್ ಗುಂಡೂರಾವ್ ವಾಗ್ದಾಳಿ
ದಿನೇಶ್ ಗುಂಡೂರಾವ್
Follow us on

ಬೆಂಗಳೂರು, (ಜುಲೈ 08): ಸ್ವಿಮ್ಮಿಂಗ್ ಮಾಡಿರುವ ವಿಡಿಯೋ ಹಾಗೂ ಫೋಟೋವನ್ನು ವ್ಯಂಗ್ಯವಾಗಿ ವೈರಲ್ ಮಾಡಿರುವ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರಿಗೆ ಕೆಲಸ ಇಲ್ಲ, ಸ್ವಿಮ್ಮಿಂಗ್ ಒಂದು ಉತ್ತಮ ಹವ್ಯಾಸ. ವಾಕಿಂಗ್, ಜಾಗಿಂಗ್, ರೀತಿ ಸ್ವಿಮ್ಮಿಂಗ್ ಕೂಡ ಆರೋಗ್ಯಕರ ಹವ್ಯಾಸ. ಬಿಜೆಪಿಯವರ ರೀತಿ ರೆಸಾರ್ಟ್​ಗೆ ಹೋಗಿ ಸ್ವಿಮ್ ಮಾಡಿದ್ದಲ್ಲ ಅದು. ಸ್ವಿಮ್ಮಿಂಗ್ ಮಾಡಿದ ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುತ್ತಾರೆ ಅಷ್ಟೇ. ಡೆಂಗ್ಯೂ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಬಿಜೆಪಿಯವರಿಗೆ ಬರೀ ಮೋಜು ಮಸ್ತಿ ಎಂದು ಮಾತನಾಡಿ ಅಭ್ಯಾಸ ಇದೆ. ನಿನ್ನೆ ನೆಲಮಂಗಲ ಬಳಿ ಜನರಿಗೆ ಮದ್ಯ, ಬಾಡೂಟ ಹಂಚಿದ್ದರಲ್ಲ ಆ ರೀತಿ ನಾನೇನಾದ್ರೂ ಮಾಡಿದ್ದೀನಾ ಎಂದು ಪ್ರಶ್ನಿಸಿದ ಸಚಿವ ದಿನೇಶ್ ಗುಂಡೂರಾವ್, ಕಾರ್ಪೊರೇಷನ್ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ವಿಮ್ ಮಾಡ್ದೆ ತಪ್ಪೇನಿದೆ? ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುತ್ತಾರೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ

ಇನ್ನು ಇದೇ ವೇಳೆ ಕರ್ನಾಟಕದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಏನೂ ಇಲ್ಲ. ಡೆಂಗ್ಯೂ ನಿಯಂತ್ರಣ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸೋಂಕಿತರು & ಮೃತಪಟ್ಟವರ ಡೇಟಾ ರಿಲೀಸ್ ಮಾಡುತ್ತಿದ್ದೇವೆ. ಝೀಕಾ ವೈರಸ್ ಕೂಡ ಒಂದೆರಡು ಕಡೆ ಕಂಡು ಬಂದಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆಯೂ ಕೂಡ ಸಭೆ ಮಾಡಲಾಗಿದೆ ಎಂದು ತಿಳಿಸಿದರು.

ಒಂದಿಷ್ಟು ಜನ ಮೆಡಿಕಲ್ ಎಮರ್ಜೆನ್ಸಿ ಅಂತ ಘೋಷಿಸಿ ಎಂದಿದ್ದಾರೆ. ಆತಂಕ ಸೃಷ್ಟಿ ಮಾಡುವ ಪರಿಸ್ಥಿತಿಯೂ ಇಲ್ಲ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ಸಂಸದ ಡಾ ಮಂಜುನಾಥ್​ ಅವರ ಹೇಳಿಕೆಗೆ ಟಾಂಗ್ ಕೊಟ್ಟರು.

ಕೊಳಗೇರಿ ಪ್ರದೇಶಗಳಿಗೆ ರಾಜ್ಯ ಬಿಜೆಪಿ ನಾಯಕರು ಭೇಟಿ ನೀಡಿ ಡೆಂಗ್ಯೂ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ವಿಪಕ್ಷ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಎಲ್ಲೆಲ್ಲೋ ಹೋಗಿ ಏನೇನೋ ಹೇಳಿಕೆ ಕೊಡೋದು ಸರಿಯಲ್ಲ. ನಾನು ಡಾ.ಸಿ.ಎನ್​.ಮಂಜುನಾಥ್ ಬಳಿಯೂ ಮಾತನಾಡಿದ್ದೇನೆ. ಡಾ.ಮಂಜುನಾಥ್​ ಕೂಡ ಒಂದಿಷ್ಟು ಸಲಹೆ ನೀಡಿದ್ದಾರೆ. ಆದರೆ ಅಶೋಕ್ ಸೇರಿ ಹಲವರು ಏನೇನೋ ಮಾತನಾಡ್ತಿದ್ದಾರೆ. ಪ್ರಚಾರಕ್ಕೋಸ್ಕರ ಏನೇನೋ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.