ಕೃಷಿ ಪಂಪ್​ಸೆಟ್​ಗಳಿಗೆ ಹಗಲು 7 ತಾಸು ನಿರಂತರ ತ್ರಿಫೇಸ್​ ವಿದ್ಯುತ್ ನೀಡಲು ಇಂಧನ ಸಚಿವ ಸೂಚನೆ

ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗುವ ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆ ಬಗ್ಗೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗಾಗಿ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು.

ಕೃಷಿ ಪಂಪ್​ಸೆಟ್​ಗಳಿಗೆ ಹಗಲು 7 ತಾಸು ನಿರಂತರ ತ್ರಿಫೇಸ್​ ವಿದ್ಯುತ್ ನೀಡಲು ಇಂಧನ ಸಚಿವ ಸೂಚನೆ
ಸಚಿವ ಸುನಿಲ್ ಕುಮಾರ್
Edited By:

Updated on: Feb 24, 2022 | 7:48 PM

ಬೆಂಗಳೂರು: ಕರ್ನಾಟಕದಲ್ಲಿ ಕೃಷಿ ಪಂಪ್​ಸೆಟ್​ಗಳಿಗೆ ನಿರಂತರ ತ್ರಿಫೇಸ್​ ವಿದ್ಯುತ್ ಪೂರೈಸಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಗಲು ವೇಳೆ ನಿರಂತರ ಏಳು ಗಂಟೆ ಕಾಲ ವಿದ್ಯುತ್ ಪೂರೈಕೆಯಾಗಬೇಕು. ಪೂರೈಕೆಯು ವ್ಯತ್ಯಯವಾದರೆ ವಲಯ ಎಂಜಿನಿಯರ್​ರನ್ನು ಹೊಣೆ ಮಾಡಲಾಗುವುದು. ಗೃಹ, ವಾಣಿಜ್ಯ, ಕೈಗಾರಿಕಾ ಬಳಕೆಯ ವಿದ್ಯುತ್ ಪೂರೈಕೆಯಲ್ಲೂ ಲೋಪವಾಗುವಂತಿಲ್ಲ. ಬೇಸಿಗೆ ಕಾಲದಲ್ಲಿ ಮೂರು ತಿಂಗಳು ಕಾಲ ನಿರಂತರ ವಿದ್ಯುತ್ ಪೂರೈಕೆ ಖಾತ್ರಿಪಡಿಸಬೇಕು. ಎಲ್ಲಾ ಎಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗುವ ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆ ಬಗ್ಗೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗಾಗಿ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ವಿದ್ಯುತ್ ವ್ಯತ್ಯಯದಿಂದ ಆಗುವ ತೊಂದರೆಯನ್ನು ಅಧಿಕಾರಿಗಳ ಕರ್ತವ್ಯ ಲೋಪ ಎಂದೇ ಪರಿಗಣಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಎಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಇಂದು ನಡೆದ ಅಧಿಕಾರಿಗಳ‌ ಸಭೆಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರು ಮತ್ತು ರೈತರ ಅನುಕೂಲಕ್ಕಾಗಿ ಚಿಕ್ಕಮಗಳೂರು ಜಿಲ್ಲೆಗೆ ಇಂದಿನಿಂದ 12 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಹೇಳಿದರು. ವಿದ್ಯುತ್ ಅವಘಡದಿಂದ ಎರಡೂ ಕೈ ಕಳೆದುಕೊಂಡಿದ್ದ ಬಸವನಬಾಗೇವಾಡಿಯ ಕೆ.ಎನ್.ಸದಾಶಿವ ಅವರಿಗೆ ಕೃತಕ ಕೈ ಅಳವಡಿಸಲು ₹ 2.25 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಿದರು.

ವಿದ್ಯುತ್ ಕ್ಷೇತ್ರ ಖಾಸಗೀಕರಣದ ಚಿಂತನೆಯಿಲ್ಲ

ವಿದ್ಯುತ್‌ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಹಾಗೂ ಕೃಷಿ ಪಂಪ್​ಸೆಟ್​ಗಳಿಗೆ ಮೀಟರ್ ಅಳವಡಿಸುವ ಚಿಂತನೆಯೂ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಕೇಂದ್ರ ಸರ್ಕಾರದ ‘ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಮ್‌’ ಯೋಜನೆಯಡಿ ಮೊದಲನೇ ಹಂತದಲ್ಲಿ ಸರ್ಕಾರಿ ಕಚೇರಿ ಹಾಗೂ ಬೆಸ್ಕಾಂ ವ್ಯಾಪ್ತಿಯ ಒಂದು ಲಕ್ಷ ಕಟ್ಟಡಗಳಿಗೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಸಲಾಗುವುದು ಎಂದು ವಿವರಣೆ ನೀಡಿದ್ದರು.

ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆಗಳಿಂದಲೇ ₹ 5,798 ಕೋಟಿ ವಿದ್ಯುತ್‌ ಬಾಕಿ ಬರಬೇಕಿದೆ. ಹಣಕಾಸು ಬಾಕಿ ಇದ್ದರೆ ಇಲಾಖೆಯನ್ನು ನಿರ್ವಹಿಸಲು ಆಗುವುದಿಲ್ಲ. ಆದಾಯವೇ ಇಲ್ಲದಿದ್ದರೆ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಇಂಧನ ಕ್ಷೇತ್ರದ ಸುಧಾರಣೆ ಕುರಿತು ಕೈಗಾರಿಕೋದ್ಯಮಿಗಳ ಜೊತೆ ಈಗಾಗಲೇ ಒಮ್ಮೆ ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸುತ್ತಿನ ಸಭೆ ಕರೆಯಲಾಗುವುದು ಎಂದು ಸಚಿವರು ಹೇಳಿದ್ದರು.

ಇದನ್ನೂ ಓದಿ: ಏಪ್ರಿಲ್​ನಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ

ಇದನ್ನೂ ಓದಿ: ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ, ಸರ್ಕಾರ ನಿಸ್ಸಂದೇಹವಾಗಿ ಅದನ್ನು ಮಟ್ಟ ಹಾಕಲಿದೆ ಎಂದರು ಸಚಿವ ಸುನಿಲ್ ಕುಮಾರ್

Published On - 7:46 pm, Thu, 24 February 22

Web contact

TV9 Kannada

Read More
Follow Us