ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಪೂರೈಕೆ: ಅಭಾವ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸ್ಪಷ್ಟನೆ

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮುಂಗಾರು ಹಂಗಾಮಿಗೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಪೂರೈಸಿದೆ. ಆದರೆ ರಾಜ್ಯ ಸರ್ಕಾರದ ವಿತರಣಾ ವೈಫಲ್ಯದಿಂದ ರೈತರು ಪರದಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ರಾಜ್ಯದ ಹಲವೆಡೆ ರಸಗೊಬ್ಬರಕ್ಕಾಗಿ ರೈತರ ಪರದಾಟ ವಿಚಾರ ಸಂಬಂಧ ಸ್ಪಷ್ಟನೆ ನೀಡಿರುವ ಅವರು, 2026ರ ಜನವರಿ ಮತ್ತು ಮಾರ್ಚ್ ನಡುವಿನ ಅವಧಿಯಲ್ಲೇ, ರಾಜ್ಯವು ಅಂದಾಜು ಅಗತ್ಯತೆಗಿಂತ ಹೆಚ್ಚುವರಿಯಾಗಿ ಪೂರೈಕೆಯಾಗಿದೆ ಎಂದಿದ್ದಾರೆ.

ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಪೂರೈಕೆ: ಅಭಾವ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸ್ಪಷ್ಟನೆ
ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸ್ಪಷ್ಟನೆ
Image Credit source: PTI
Edited By:

Updated on: Jun 14, 2026 | 6:55 AM

ಬೆಂಗಳೂರು, ಜೂನ್​​ 14: ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಆರಂಭವಾಗುತ್ತಿದ್ದಂತೆ ರಸಗೊಬ್ಬರ ಕೊರತೆಯಾಗಿದೆ ಎಂದು ಬಿಂಬಿಸಿ, ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಸುರಿಸುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣ ರಸಗೊಬ್ಬರ ಪೂರೈಸಿದೆ. ಆದರೆ ಕರ್ನಾಟಕ ಸರ್ಕಾರವೇ ಸರಿಯಾಗಿ ರಸಗೊಬ್ಬರ ವಿತರಣೆ ಮಾಡಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್​​ ಜೋಶಿ ಆರೋಪಿಸಿದ್ದಾರೆ.

‘ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ’

ರಾಜ್ಯದ ಹಲವೆಡೆ ರಸಗೊಬ್ಬರಕ್ಕಾಗಿ ರೈತರ ಪರದಾಟ ವಿಚಾರ ಸಂಬಂಧ ಸ್ಪಷ್ಟನೆ ನೀಡಿರುವ ಅವರು, ಜಾಗತಿಕ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಮುಂಗಾರಿಗೆ ಮೊದಲೇ ಅಗತ್ಯ ರಸಗೊಬ್ಬರ ಪೂರೈಕೆ ಮಾಡಿದೆ. ಆದರೂ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಗೂಬೆ ಕೂರಿಸಲು ಯತ್ನ ನಡೆಸುತ್ತಿದೆ. ವಾಸ್ತವವಾಗಿ ಕರ್ನಾಟಕದಲ್ಲಿ ಸಮರ್ಪಕ ರಸಗೊಬ್ಬರ ಲಭ್ಯತೆಯಿದ್ದು, ಅದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ತಲುಪಿಸದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಮುಂಗಡ ದಾಸ್ತಾನು ಪ್ರಕ್ರಿಯೆಯನ್ನು ಸುಲಭಗೊಳಿಸಲು 2026ರ ಜನವರಿ ಮತ್ತು ಮಾರ್ಚ್ ನಡುವಿನ ಅವಧಿಯಲ್ಲೇ, ರಾಜ್ಯವು ಅಂದಾಜು ಅಗತ್ಯತೆಗಿಂತ ಹೆಚ್ಚುವರಿಯಾಗಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಎಸ್ ಅನ್ನು ಪಡೆದುಕೊಂಡಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ; ರೈತರ ತೀವ್ರ ಆಕ್ರೋಶ

ಜೂನ್ 10 ರವರೆಗೆ 3.13 ಲಕ್ಷ ಮೆಟ್ರಿಕ್ ಟನ್ ಅನುಪಾತದ ಅಗತ್ಯತೆಯ ಮಧ್ಯೆ, 5.59 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಲಭ್ಯತೆಯನ್ನು ಖಾತರಿಪಡಿಸಲಾಗಿದೆ. 2.47 ಲಕ್ಷ ಮೆಟ್ರಿಕ್ ಟನ್ ಮಾರಾಟದ ನಂತರವೂ, 3.12 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಬಾಕಿ ಉಳಿದಿದೆ ಹಾಗೂ ಇನ್ನೂ 17,190 ಮೆಟ್ರಿಕ್ ಟನ್ ಸಾಗಣೆಯಲ್ಲಿದೆ. 1.89 ಲಕ್ಷ ಮೆಟ್ರಿಕ್ ಟನ್ ಡಿಎಪಿ ಅಗತ್ಯತೆಯ ನಡುವೆ, 2.57 ಲಕ್ಷ ಮೆಟ್ರಿಕ್ ಟನ್ ಲಭ್ಯತೆಯನ್ನು ಖಚಿತಪಡಿಸಲಾಗಿದೆ. ಪ್ರಸ್ತುತ ದಾಸ್ತಾನು 1.09 ಲಕ್ಷ ಮೆಟ್ರಿಕ್ ಟನ್ ಇದ್ದು, ಹೆಚ್ಚುವರಿ ಪೂರೈಕೆ ನಡೆಯುತ್ತಿದೆ. 4.36 ಲಕ್ಷ ಮೆಟ್ರಿಕ್ ಟನ್ ಅಗತ್ಯ ವಿರುವ ಎನ್‌ಪಿಕೆಎಸ್​​ನ 9.28 ಲಕ್ಷ ಮೆಟ್ರಿಕ್ ಟನ್ ಲಭ್ಯತೆಯನ್ನು ಖಾತರಿಪಡಿಸಲಾಗಿದೆ. ಗಣನೀಯ ಪ್ರಮಾಣದ ಮಾರಾಟದ ನಂತರವೂ, ಸಾಗಣೆಯಲ್ಲಿರುವ ದಾಸ್ತಾನು ಸೇರಿದಂತೆ 5.6 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ರಸಗೊಬ್ಬರ ಲಭ್ಯವಿದೆ. ರೈತರ ಹಿತರಕ್ಷಣೆಯನ್ನು ಕಾಯಲು ಭಾರತ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಿರಣ್​ ಹನಿಯಡ್ಕ
Follow Us