ಬೆಂಗಳೂರಿನ ಬಿಲ್ಡರ್​ಗೂ ಮೈಸೂರಿನ ಮುಡಾಗೂ ಏನು ಸಂಬಂಧ? ಇಡಿ ದಾಳಿಯಿಂದ ವಿಚಾರ ಬಹಿರಂಗ  ​

| Updated By: ವಿವೇಕ ಬಿರಾದಾರ

Updated on: Oct 28, 2024 | 1:06 PM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯಲ್ಲಿ ಬೆಂಗಳೂರಿನ ಬಿಲ್ಡರ್ ಎನ್. ಮಂಜುನಾಥ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದೆ. ಮುಡಾ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಗರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.

ಬೆಂಗಳೂರಿನ ಬಿಲ್ಡರ್​ಗೂ ಮೈಸೂರಿನ ಮುಡಾಗೂ ಏನು ಸಂಬಂಧ? ಇಡಿ ದಾಳಿಯಿಂದ ವಿಚಾರ ಬಹಿರಂಗ  ​
ಬಿಲ್ಡರ್​ ಎನ್​ ಮಂಜುನಾಥ್​​ ಮನೆ
Follow us on

ಬೆಂಗಳೂರು, ಅಕ್ಟೋಬರ್​ 28: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಮುಡಾ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನಡೆಸುತ್ತಿದ್ದಾರೆ. ಮುಡಾ ಹಗರಣದ ಜಾಡು ಬೆಂಗಳೂರಿನವರೆಗೂ (Bengaluru) ವ್ಯಾಪಿಸಿದ್ದು, ಇಡಿ ಅಧಿಕಾರಿಗಳು ಇಲ್ಲಿನ ಜೆಪಿ ನಗರದಲ್ಲಿರುವ ಬಿಲ್ಡರ್​​ ಎನ್​. ಮಂಜುನಾಥ್​ ಎಂಬುವರ ಮನೆ ಮೇಲೆ ದಾಳಿ ಮಾಡಿ, ದಾಖೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮುಡಾಗು ಮತ್ತು ಬೆಂಗಳೂರಿನ ಬಿಲ್ಡರ್​ ಎನ್​.ಮಂಜುನಾಥ್​ಗೂ ಏನು ಸಂಬಂಧ ಅಂತ ತನಿಖೆಗೆ ಇಳಿದ ಇಡಿ ಅಧಿಕಾರಿಗಳಿಗೆ ಹಲವು ವಿಚಾರಗಳು ತಿಳಿದುಬಂದಿವೆ. ಎನ್.ಕಾರ್ತಿಕ್ ಡೆವಲಪರ್ ಮಾಲೀಕನಾಗಿರುವ ಎನ್​.ಮಂಜುನಾಥ್ ಮೈಸೂರಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಿನಲ್ಲಿ ಲೇಔಟ್​ಗಳನ್ನು​ ನಿರ್ಮಾಣ ಮಾಡಿದ್ದರು. ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುತ್ತಿದ್ದ ವೇಳೆ, ಅಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನಿಜವಾಯ್ತು ಟಿವಿ9 ಡಿಜಿಟಲ್​ ನುಡಿದಿದ್ದ ಭವಿಷ್ಯ; ಮುಡಾ ಕಚೇರಿ ಮೇಲೆ ಇಡಿ ದಾಳಿ, ಸಿದ್ದರಾಮಯ್ಯಗೆ ಹೆಚ್ಚಿದ ಸಂಕಷ್ಟ

ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಇಂದು (ಅ.28) ಬೆಳ್ಳಂ ಬೆಳಗ್ಗೆ ಬಿಲ್ಡರ್​ ಎನ್​. ಮಂಜುನಾಥ್​ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಕೆಲ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಇಡಿ ಅಧಿಕಾರಿಗಳು ಎನ್​. ಮಂಜುನಾಥ್ ಅವರ ಕಚೇರಿ, ಬ್ಯಾಂಕ್ ಖಾತೆ ಪರಿಶೀಲನೆಗೆ ತೆರಳಿದ್ದಾರೆ.

ಇಡಿ ಅಧಿಕಾರಿಗಳು ಅಕ್ಟೋಬರ್​ 18 ಮುಡಾ ಕಚೇರಿ ಸೇರಿದಂತೆ ಮೈಸೂರಿನ ಇತರ ಕೆಲವು ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಬಳಿಕ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಡಾದ ಆರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ್ದರು. ಅಧಿಕಾರಿಗಳು ಕಳೆದ ವಾರ ಬೆಂಗಳೂರಿನ ಇಡಿ ಕಚೇರಿಯಲ್ಲಿ ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದರು.

ಮುಡಾ ಅಧಿಕಾರಿಗಳು ನೀಡಿದ ದಾಖಲೆಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಬಿಲ್ಡರ್​ ಎನ್​. ಮಂಜುನಾಥ್​ ಅವರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇಡಿ ಅಧಿಕಾರಿಗಳು ಆರ್​ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮುಡಾ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಕೂಡ ನಡೆಸಿದ್ದು, ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರನ್ನು ವಿಚಾರಣೆಗೆ ಒಳಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:54 pm, Mon, 28 October 24