ಮೈಸೂರು-ದರ್ಬಾಂಗ ಎಕ್ಸ್​ಪ್ರೆಸ್ ರೈಲು ಅಪಘಾತ: ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ಸೋಮಣ್ಣ

| Updated By: ಆಯೇಷಾ ಬಾನು

Updated on: Oct 12, 2024 | 7:58 AM

ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ ರೈಲು ಅಪಘಾತದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಯಾರ ಪ್ರಾಣಕ್ಕೂ ಹಾನಿಯಾಗದೆ ಹಲವರಿಗೆ ಗಾಯಗಳಾಗಿವೆ. ಆದರೆ, ಈ ಘಟನೆ ನಿಜಕ್ಕೂ ನಡೆದದ್ದು ಹೇಗೆ ಅನ್ನೋದ್ರ ಬಗ್ಗೆ ಈಗ ಪ್ರಶ್ನೆ ಹುಟ್ಟಿಕೊಂಡಿದೆ. ತನಿಖೆ ಕೂಡ ನಡೆಯುತ್ತಿದೆ. ಘಟನೆ ಸಂಬಂಧ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು-ದರ್ಬಾಂಗ ಎಕ್ಸ್​ಪ್ರೆಸ್ ರೈಲು ಅಪಘಾತ: ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ಸೋಮಣ್ಣ
ಸಚಿವ ಸೋಮಣ್ಣ
Follow us on

ಬೆಂಗಳೂರು, ಅ.12: ನಿನ್ನೆ (ಅ.11) ರಾತ್ರಿ 8.30ರ ಸುಮಾರಿಗೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ (Kavaraipettai) ನಡೆದ ರೈಲು ಅಪಘಾತ ಬಿಚ್ಚಿಬೀಳುವಂತಿತ್ತು. ಗೂಡ್ಸ್‌ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ (Mysuru-Darbhang) ರೈಲು ಡಿಕ್ಕಿಯಾಗಿ ಭಾರಿ ಅನಾಹುತ ನಡೆದಿದೆ. ಆದ್ರೆ, ಅದೃಷ್ಟವಶಾತ್ ರೈಲಿನಲ್ಲಿದ್ದ ಅಷ್ಟೂ ಜನರ ಜೀವ ಉಳಿದಿದೆ. ಘಟನೆ ಸಂಬಂಧ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ಅಪಘಾತದಲ್ಲಿ ದೊಡ್ಡ ಅನಾಹುತ ತಪ್ಪಿದೆ ಎಂದರು.

ರೈಲ್ವೆ ಅಪಘಾತದಲ್ಲಿ 19 ಜನರು ಗಾಯಗೊಂಡಿದ್ದಾರೆ. ರೈಲು ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. 13 ಬೋಗಿಗಳು ಹಳಿ ತಪ್ಪಿದ್ವು ಎಂದು ವಿ.ಸೋಮಣ್ಣ ತಿಳಿಸಿದರು. ತುಂಬಾ ಒಳ್ಳೇ ದಿನ, ಅಪಘಾತದಲ್ಲಿ ದೊಡ್ಡ ಅನಾಹುತವಾಗಿಲ್ಲ. ಎಲ್ಲ ಪ್ರಯಾಣಿಕರನ್ನೂ ಮೆಮು ಟ್ರೈನ್ ಮೂಲಕ ಶಿಫ್ಟ್ ಮಾಡಲಾಗಿದೆ. ಪ್ರಯಾಣಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇಂದು ಅವರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುವುದು. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕೆ ಅಪಘಾತವಾಯ್ತು ಎಂದ ತನಿಖೆ ಆಗಬೇಕಿದೆ ಎಂದರು.

ಇನ್ನು ನಿನ್ನೆಯೇ ಸ್ಥಳೀಯರು ರೈಲಿನಲ್ಲಿದ್ದವರನ್ನ ರಕ್ಷಿಸಿದ್ದಾರೆ. ತಮಿಳುನಾಡು ಪೊಲೀಸರು, ರೈಲ್ವೆ ಅಧಿಕಾರಿಗಳು, NDRF ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಗಾಯಗೊಂಡವರನ್ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಎಲ್ಲಾ ಪ್ರಯಾಣಿಕರು ಸೇಫಾಗಿದ್ದಾರೆ. ಆದ್ರೂ, ಶ್ವಾನ ದಳದಿಂದ ಯಾರಾದ್ರೂ ನಾಪತ್ತೆಯಾಗಿದ್ದಾರಾ ಅಂತಾ ಹುಡುಕಾಟ ನಡೆದಿದೆ. ರೈಲ್ವೆ ಇಲಾಖೆ ಸಹಾಯವಾಣಿ ಕೂಡ ಓಪನ್‌ ಮಾಡಿದೆ. ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುತ್ತಿದೆ. ಬದುಕುಳಿದ ಪ್ರಯಾಣಿಕರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು-ದರ್ಭಾಂಗ್ ಎಕ್ಸ್​ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು

8 ರೈಲುಗಳ ಸಂಚಾರ ಬದಲು.. 2 ರೈಲು ಸಂಚಾರ ರದ್ದು

ಇನ್ನು, ರೈಲ್ವೆ ಒಟ್ಟು 8 ರೈಲುಗಳ ಸಂಚಾರ ಮಾರ್ಗವನ್ನ ಬದಲಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಚೆನ್ನೈ-ವಿಜಯವಾಡ, ವಿಜಯವಾಡ-ಚೆನ್ನೈ 2 ರೈಲುಗಳ ಸಂಚಾರವನ್ನ ರದ್ದು ಮಾಡಿದೆ. ಇನ್ನು, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಆಸ್ಪತ್ರೆಗಳಿಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು.

ಘಟನೆ ಹಿನ್ನೆಲೆ

ನಿನ್ನೆ ಮೈಸೂರಿನಿಂದ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ KSR ರೈಲ್ವೆ ನಿಲ್ದಾಣ ದಾಟಿ ಹೋಗ್ತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಪೆರಂಬೂರು ದಾಟಿದ್ದ ರೈಲು, ದರ್ಬಾಂಗದತ್ತ ಪ್ರಯಾಣ ಬೆಳೆಸಿತ್ತು. ಆದ್ರೆ, 75 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು, ಕಾವರಪೇಟ್ಟೈ ತಲುಪುತ್ತಿದ್ದಂತೆ ಲೂಪ್‌ ಲೇನ್‌ನಲ್ಲಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು.

ಪೆರಂಬೂರು ದಾಟಿ ಕಾವರಪೇಟ್ಟೈಗೆ ಎಕ್ಸ್‌ಪ್ರೆಸ್ ರೈಲು ತೆರಳುತ್ತಿತ್ತು. ಕಾವರ ಪೇಟ್ಟೈ ರೈಲು ನಿಲ್ದಾಣದಲ್ಲಿ ಮುಖ್ಯ ಲೇನ್‌ಗೆ ಹೋಗುವಂತೆ ಸೂಚನೆ ಸಿಗ್ನಲ್‌ ನೀಡಿದ್ರು. ಆದರೆ, ಮೇನ್‌ ಲೇನ್‌ಗೆ ಸಿಗ್ನಲ್‌ ಇದ್ದರೂ ಗೂಡ್ಸ್‌ ರೈಲು ನಿಂತಿದ್ದ ಲೂಪ್‌ ಲೇನ್‌ ಟ್ರ್ಯಾಕ್‌ಗೆ ನುಗ್ಗಿತ್ತು. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ, 75 km ವೇಗದಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿ ಆಗಿದೆ. ಡಿಕ್ಕಿಯಾದ ರಭಸಕ್ಕೆ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಎಲ್ಲರಿಗೂ ಭೂಕಂಪನದ ಅನುಭವವಾಗಿದೆ. 12ರಿಂದ 13 ಬೋಗಿಗಳು ಹಳಿ ತಪ್ಪಿ ಅಕ್ಕಪಕ್ಕಕ್ಕೆ ಬಂದು ಬಿದ್ದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ