
ನೆಲಮಂಗಲ, ನವೆಂಬರ್ 21: ನಗದರಲ್ಲಿ ಫ್ಲೆಕ್ಸ್ ಹಾವಳಿ (Flex Banner) ನಿಂತ್ತಿಲ್ಲ. ಇದೇ ಫ್ಲೆಕ್ಸ್ನಿಂದ ಮತ್ತೊಂದು ಜೀವ ಹೋಗಿದೆ. ಬೈಕ್ನಲ್ಲಿ ತೆರಳುವಾಗ ಫ್ಲೆಕ್ಸ್ ತಗುಲಿ ಯುವಕ ರಸ್ತೆಗೆ ಬಿದ್ದಿದ್ದಾನೆ. ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ (death). ತೇಜಸ್ ಗೌಡ (27) ಮೃತ ಯುವಕ. ಜರ್ಮನಿಯಲ್ಲಿ ಎಂ.ಎಸ್ ಓದುತ್ತಿದ್ದ ತೇಜಸ್ ಗೌಡ, ಸ್ನೇಹಿತನ ಮದುವೆ ಅಂತ ಊರಿಗೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ. ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೇಜಸ್ ಗೌಡ ವಿದೇಶದಲ್ಲಿ ಎಂಎಸ್ ಕೊನೆಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದು, ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದ ಯುವಕ. ಸ್ನೇಹಿತನ ಮದುವೆ ಅಂತ ಮೂರು ದಿನಗಳ ಹಿಂದೆ ಹೂಟ್ಟೂರಿನ ನೆಲಮಂಗಲಕ್ಕೆ ಬಂದಿದ್ದ. ರಿಸೆಪ್ಷನ್ ಮುಗಿಸಿ ಬೈಕ್ನಲ್ಲಿ ತೆರಳುವ ವೇಳೆ ಈ ಘನಘೋರ ದುರಂತ ನಡೆದು ಹೋಗಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬೆಸ್ಕಾಂ ಕಚೇರಿಯ ಮುಂದೆ ಕಳೆದ ಮೂರು ದಿನಗಳ ಹಿಂದೆ ಸಂಭವಿಸಿದೆ.
ಇದನ್ನೂ ಓದಿ: ಹದಗೆಟ್ಟ ಬೆಂಗಳೂರು ರಸ್ತೆಗೆ ಮತ್ತೊಂದು ಬಲಿ: ಮಹಿಳೆ ದುರಂತ ಸಾವು
ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ತೇಜಸ್ ನನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು, ಆದರೆ ವಿಧಿಯಾಟಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಮೃತ ಯುವಕನ ತಂದೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಇದ್ದ ಒಬ್ಬ ಮಗನನ್ನ ಕಳೆದುಕೊಂಡ ಕುಟುಂಬಸ್ತರು ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ನಗರದಲ್ಲಿ ಪ್ರಚಾರದ ಫ್ಲೆಕ್ಸ್, ಬ್ಯಾನರ್ಗಳು ಅತಿಕ್ರಮವಾಗಿ ರಾರಾಜಿಸುತ್ತಿವೆ. ಇದು ನಗರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರು ಗ್ಯಾಂಗ್ನಿಂದಲೇ 7 ಕೋಟಿ ರೂ. ದರೋಡೆ : ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು
ಒಟ್ಟಾರೆ ಬಡತನದಲ್ಲಿ ಹುಟ್ಟಿ ಕಠಿಣ ಪರಿಶ್ರಮದಿಂದ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ನಾಡಿಗೆ ತನ್ನ ಸಾಧನೆ ತಿಳಿಸುವ ಹಂಬಲದಲ್ಲಿದ್ದ ತೇಜಸ್, ಫ್ಲೆಕ್ಸ್ ಹಾವಳಿಗೆ ದುರಂತ ಅಂತ್ಯವಾಗಿದ್ದಾನೆ. ಇನ್ನಾದರು ಅಧಿಕಾರಿಗಳು ಅಮಾಯಕ ಜೀವಗಳ ಜೊತೆಗೆ ಚೆಲ್ಲಾಟವಾಡುವುದನ್ನು ಬಿಟ್ಟು ತೆರವು ಕಾರ್ಯ ಮಾಡಿ ಶಾಶ್ವತವಾಗಿ ಫ್ಲೆಕ್ಸ್ ಹಾವಳಿಗೆ ಬ್ರೇಕ್ ಹಾಕಬೇಕಿದೆ.
ವರದಿ: ಮಂಜನಾಥ್ ಟಿವಿ9, ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.