ಬೆಂಗಳೂರು ಗ್ಯಾಂಗ್ನಿಂದಲೇ 7 ಕೋಟಿ ರೂ. ದರೋಡೆ : ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು
Bengaluru ATM Cash Van Robbery: ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಎಟಿಎಂ ವಾಹನದದಲ್ಲಿ ಬರೋಬ್ಬರಿ 7.11 ಕೋಟಿ ರೂಪಾಯಿ ದರೋಡೆ ಪ್ರಕರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬೆಂಗಳೂರು ಪೊಲೀಸರು ಆರೋಪಿಗಳ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು....ಆಂಧ್ರ ಪ್ರದೇಶದಲ್ಲಿ ದರೋಡೆಗೆ ಬಳಿಸಿದ್ದ ಇನ್ನೋವಾ ಕಾರು ಪತ್ತೆಯಾಗಿದೆ. ಜೊತೆಗೆ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪೊಲೀಸ್ ಭಾಷೆಯಲ್ಲೇ ಬಾಯಿಬಿಡಿಸಿದಾಗ ದರೋಡೆಯ ಅಸಲಿ ಕಹಾನಿ ಹೇಳಿದ್ದಾರೆ.

ಬೆಂಗಳೂರು, (ನವೆಂಬರ್ 20): ನಿನ್ನೆ (ನವೆಂಬರ್ 19) ಮಟಮಟ ಮಧ್ಯಾಹ್ನವೇ ಡೈರಿ ಸರ್ಕಲ್ ಫ್ಲೈಓವರ್ ಮೇಲೆ ನಡೆದ ಸಿನಿಮೀಯ ಶೈಲಿಯ ದರೋಡೆಗೆ (Bengaluru ATM Cash Van Robbery) ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿಬಿದ್ದಿದೆ. ರಸ್ತೆ ಮಧ್ಯೆಯೇ 7 ಕೋಟಿ 11 ಲಕ್ಷ ಹಣ ತುಂಬಿದ್ದ ವಾಹನ ತಡೆದು ನಡೆದಿರೋ ದರೋಡೆ ಬೆಂಗಳೂರಿಗರನ್ನು ನಡುಗಿಸಿತ್ತು. ಈ ರೀತಿಯ ದರೋಡೆ ಕರ್ನಾಟಕದ ಗ್ಯಾಂಗ್ನಿಂದ ಸಾಧ್ಯವಿಲ್ಲ. ಬದಲಾಗಿ ಹೊರ ರಾಜ್ಯದ ಗ್ಯಾಂಗ್ ಈ ದರೋಡೆ ಮಾಡಿರುಬಹುದು ಎಂದು ಪೊಲೀಸರು ಶಂಕಿ ವ್ಯಕ್ತಪಡಿಸಿದ್ದರು. ಆದ್ರೆ, ಬೆಂಗಳೂರು ಮೂಲದ ಗ್ಯಾಂಗ್ ಈ ಕೃತ್ಯ ಎಸಗಿದೆ ಎನ್ನುವುದು ತನಿಖೆ ವೇಳೆ ಸ್ಫೋಟಕ ಅಂಶ ಬಯಲಿಗೆ ಬಂದಿದೆ. ತಕ್ಷಣವೇ ದರೋಡೆಕೋರರ ಬೇಟೆಗಿಳಿದ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಚಿತ್ತೂರುವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ದ
ರೋಡೆಕೋರರು ಆಂಧ್ರದತ್ತ ಪರಾರಿಯಾಗಿರೋ ಸುಳಿವು ಪಡೆದ ಪೊಲೀಸರು, ಚಿತ್ತೂರು ಪೊಲೀಸರ ಸಹಾಯದಿಂದ ದರೋಡೆಕೋರರ ಇನ್ನೋವಾ ಕಾರು ಹಾಗೂ ಇಬ್ಬರನ್ನು ಲಾಕ್ ಮಾಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಚಿತ್ತೂರಿನಲ್ಲೇ ತೀವ್ರ ವಿಚಾರಣೆ ನಡೆಸ್ತಿದ್ದಾರೆ. ವಿಚಾರಣೆ ವೇಳೆ ದರೋಡೆ ಮಾಡಿವರೆಲ್ಲ ಬೆಂಗಳೂರು ಮೂಲದವರು ಎನ್ನುವುದು ಬಯಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 7.11 ಕೋಟಿ ರೂ.ದರೋಡೆ: ತಿರುಪತಿಯಲ್ಲಿ ಕಾರು ಪತ್ತೆ, ಇಬ್ಬರು ಶಂಕಿತರು ವಶಕ್ಕೆ
ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಚಿತ್ತೂರಿನಲ್ಲೇ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ದರೋಡೆ ಮಾಡಿವರೆಲ್ಲ ಬೆಂಗಳೂರು ಮೂಲದವರು ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಪೂರ್ವ ವಿಭಾಗದ ಬಾಣಸವಾಡಿಯ ಕಲ್ಯಾಣ್ ನಗರ ಗ್ಯಾಂಗ್ನಿಂದ ದರೋಡೆ ನಡೆದಿ ಎಂದು ತಿಳಿದುಬಂದಿದ್ದು, ದರೋಡೆಯಲ್ಲಿ ಭಾಗಿಯಾದ ಎಲ್ಲರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನು ಗ್ಯಾಂಗ್ನ ಎಲ್ಲಾ ಸದಸ್ಯರ ಮೊಬೈಲ್ ಸದ್ಯ ಸ್ವಿಚ್ಡ್ ಆಫ್ ಆಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ
ಆರೋಪಿಗಳನ್ನು ಹಿಡಿದಿದ್ಹೇಗೆ?
ಬೆಂಗಳೂರಿನಲ್ಲಿ ಓಡಾಡುವಾಗ ಕಲ್ಯಾಣನಗರದ ಸ್ವಿಫ್ಟ್ ಕಾರಿನ ನಕಲಿ ನಂಬರ್ ಪ್ಲೇಟ್ ಬಳಸಿದ್ದ ದರೋಡೆಕೋರರು, ಕರ್ನಾಟಕದ ಗಡಿ ದಾಟುತ್ತಿದ್ದಂತೆ ಉತ್ತರಪ್ರದೇಶ ನೋಂದಣಿಯ ನಂಬರ್ ಪ್ಲೇಟ್ ಇನ್ನೋವಾ ಕಾರಿಗೆ ಅಳವಡಿಸಿದ್ದರು. ದರೋಡೆಕೋರರು ಓಡಾಡಿದ ರಸ್ತೆಯುದ್ದಕ್ಕೂ ಸಿಸಿಟಿವಿ, ಮೊಬೈಲ್ ಲೊಕೇಷನ್ ಆಧರಿಸಿ ಕಾರ್ಯಾರಚಣೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ. ಈ ವೇಳೆಯೂ ಆರೋಪಿಗಳು ಹಿಂದಿ ಮಾತಾಡೋ ಮೂಲಕ ದಾರಿ ತಪ್ಪಿಸೋ ಯತ್ನವೂ ಖಾಕಿ ಮುಂದೆ ಫೇಲ್ ಆಗಿದೆ.
ಇದಕ್ಕೂ ಮುನ್ನ ಸೌತ್ ಎಂಡ್ ಸರ್ಕಲ್ನಿಂದ ಭಟ್ರಳ್ಳಿ ರಸ್ತೆವರೆಗಿನ ಸಿಸಿಟಿವಿ ಜಾಲಾಡಿದ ಪೊಲೀಸರಿಗೆ ದರೋಡೆಕೋರರ ಹೆಜ್ಜೆಗುರುತು ಪತ್ತೆಹಚ್ಚೋದು ಕಷ್ಟವೇನೂ ಆಗಿರಲಿಲ್ಲ. ಜೆಪಿ ನಗರದ ಐಟಿ ಲೇಔಟ್ನ ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ಸಿಎಂಎಸ್ ವಾಹನಕ್ಕೆ ಹಣ ತುಂಬಿಸಿ ಮುಂದೆ ಸಾಗಿದೆ. ಇದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಇಲ್ಲಿ ದರೋಡೆಕೋರರು ಕಾರನ್ನು ಹಿಂಬಾಲಿಸಿಲ್ಲ. ಬಳಿಕ ಸಿದ್ದಾಪುರ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿರೋ ದೃಶ್ಯದಲ್ಲಿ ಮೊದಲು ಸಿಎಂಎಸ್ ವಾಹನ ಸಾಗ್ತಿದ್ದರೆ ಅದರ ಹಿಂದೆಯೇ ದರೋಡೆಕೋರರ ಇನ್ನೋವಾ ಕಾರು ಹಿಂಬಾಲಿಸಿದೆ. ಅಲ್ಲಿಂದ ದೊಮ್ಮಲೂರು ಕಡೆ ದರೋಡೆಕಾರರ ಕಾರು ತೆರಳಿರೋ ದೃಶ್ಯದ ಜೊತೆಗೆ ಹಳೇ ಮದ್ರಾಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಯತ್ತ ಇನ್ನೋವಾ ಕಾರು ತೆರಳಿರೋ ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ.
ದರೋಡೆ ನಡೆದ 24 ಗಂಟೆಗಳ ಒಳಗೆ ಪೊಲೀಸರು ಖದೀಮರ ಜುಟ್ಟು ಹಿಡಿದಿದ್ದಾರೆ. ಆಂಧ್ರಪ್ರದೇಶಕ್ಕೆ ದರೋಡೆಕೋರರು ಪರಾರಿಯಾಗಿದ್ದು, ಅವರ ಮೂಲ ಕಲ್ಯಾಣ್ ನಗರದಲ್ಲೇ ಇದೆ ಎನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಶೀಘ್ರದಲ್ಲೇ ಎಲ್ಲಾ ದರೋಡೆಕೋರರ ಕೈಗೆ ಕೋಳ ತೊಡಿಸುವುದಂತೂ ಗ್ಯಾರಂಟಿ.
Published On - 6:28 pm, Thu, 20 November 25




