25 – 39 ವರ್ಷದ ಗಂಡಸರಿಂದಲೇ ಹೆಚ್ಚು ಆತ್ಮಹತ್ಯೆ ಯತ್ನ, ಬೆಂಗಳೂರಿನಲ್ಲೇ ಅಧಿಕ: ನಿಮ್ಹಾನ್ಸ್ ಅಧ್ಯಯನದಲ್ಲಿ ಆಘಾತಕಾರಿ ಅಂಶ

ನಿಮ್ಹಾನ್ಸ್‌ನ ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ 25-39 ವಯಸ್ಸಿನ ಪುರುಷರಲ್ಲಿ ಆತ್ಮಹತ್ಯೆ ಯತ್ನಗಳು ಹೆಚ್ಚಿರುವುದು ತಿಳಿದುಬಂದಿದೆ. ‘ಉಷಾಸ್’ ಯೋಜನೆಯಡಿ 20,000 ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ, ಆದರೆ ಮರು ಆತ್ಮಹತ್ಯೆ ಯತ್ನದ ಪ್ರಮಾಣ ತೀರಾ ಕಡಿಮೆ. ಭಾರತದ ಮಹಾನಗರಗಳಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿರುವುದೂ ಗೊತ್ತಾಗಿದೆ.

25 - 39 ವರ್ಷದ ಗಂಡಸರಿಂದಲೇ ಹೆಚ್ಚು ಆತ್ಮಹತ್ಯೆ ಯತ್ನ, ಬೆಂಗಳೂರಿನಲ್ಲೇ ಅಧಿಕ: ನಿಮ್ಹಾನ್ಸ್ ಅಧ್ಯಯನದಲ್ಲಿ ಆಘಾತಕಾರಿ ಅಂಶ
ಸಾಂದರ್ಭಿಕ ಚಿತ್ರ

Updated on: Sep 11, 2025 | 12:48 PM

ಬೆಂಗಳೂರು, ಸೆಪ್ಟೆಂಬರ್ 11: ಆತ್ಮಹತ್ಯೆಗೆ ಯತ್ನಿಸುವವರ ಪೈಕಿ 25 ರಿಂದ 39 ವರ್ಷ ವಯಸ್ಸಿನವರೇ ಹೆಚ್ಚಿದ್ದು, ಅದರಲ್ಲಿಯೂ ಗಂಡುಮಕ್ಕಳೇ ಅಧಿಕ ಇರುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್​​ನ (NIMHANS) ಎನ್​-ಸ್ಟ್​ರೈಟ್ ಕೇಂದ್ರ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಿನಲ್ಲೇ (Bengaluru) ಆತ್ಮಹತ್ಯೆ ಯತ್ನ ಹೆಚ್ಚಾಗಿರುವುದೂ ಕಂಡುಬಂದಿದೆ. ಅದೇ ರೀತಿ, ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿ ನಿಮ್ಹಾನ್ಸ್​​ನ ‘ಉಷಾಸ್ (ನಗರ ಪ್ರದೇಶದಲ್ಲಿನ ಸ್ವಯಂ ಹಾನಿ ಅಧ್ಯಯನ)’ (USHAS) ಯೋಜನೆಯಡಿ ನೋಂದಣಿ ಮಾಡಿಕೊಂಡವರು ಮತ್ತೆ ಆತ್ಮಹತ್ಯೆಗೆ ಯತ್ನಸುವುದು ತೀರಾ ವಿರಳ ಎಂದು ಅಧ್ಯಯನ ವರದಿ ತಿಳಿಸಿದೆ. ಆತ್ಮಹತ್ಯೆ ಮರುಪ್ರಯತ್ನ ಪ್ರಮಾಣ ಶೇ 1.19 ರಷ್ಟಿದೆಯಷ್ಟೆ ಎಂದು ವರದಿ ತಿಳಿಸಿದೆ.

ವಿಶ್ವ ಆತ್ಮಹತ್ಯೆ ತಡೆ ದಿನ ಪ್ರಯುಕ್ತ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಯನ ವರದಿ ಬಿಡುಗಡೆಯಾಗಿದೆ.

ನಿಮ್ಹಾನ್ಸ್ ‘ಉಷಾಸ್’ ಅಧ್ಯಯನ ವರದಿಯಲ್ಲೇನಿದೆ?

‘ಉಷಾಸ್’ ಅಧ್ಯಯನ ಯೋಜನೆಯಡಿ ಈವರೆಗೆ 20,861 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಶೇಕಡಾ 44.37 ರಷ್ಟು ಜನರು 25–39 ವಯಸ್ಸಿನವರು ಮತ್ತು ಶೇಕಡಾ 28.87 ರಷ್ಟು ಜನರು 18–24 ವಯೋಮಾನದವರು. ಪುರುಷರು ಶೇಕಡಾ 55.76 ಆಗಿದ್ದರೆ, ಮಹಿಳೆಯರು ಶೇಕಡಾ 44.15 ಮತ್ತು ಟ್ರಾನ್ಸ್ಜೆಂಡರ್​​ಗಳು ಶೇಕಡಾ 0.09 ರಷ್ಟಿದ್ದಾರೆ.

ಏನಿದು ‘ಉಷಾಸ್’ ಯೋಜನೆ?

ಆತ್ಮಹತ್ಯೆ ಯತ್ನ ಮಾಡಿದವರಲ್ಲಿ ಆತ್ಮಸ್ಥೈರ್ಯ ತುಂಬಿ ಬೆಂಬಲ ಒದಗಿಸುವುದರ ಜತೆಗೆ, ಮರು ಆತ್ಮಹತ್ಯೆ ಯತ್ನ ಮಾಡದಂತೆ ಅವರನ್ನು ರೂಪಿಸುವ ಉದ್ದೇಶದೊಂದಿಗೆ ನಿಮ್ಹಾನ್ಸ್ 2022 ರಲ್ಲಿ ಆರಂಭಿಸಿರುವ ಯೋಜನೆಯೇ ‘ಉಷಾಸ್ (ನಗರ ಪ್ರದೇಶದಲ್ಲಿನ ಸ್ವಯಂ ಹಾನಿ ಅಧ್ಯಯನ)’. ಬೆಂಗಳೂರಿನ ವಿಕ್ಟೋರಿಯಾ, ಕೆಸಿ ಜನರಲ್ ಮತ್ತು ಬೌರಿಂಗ್ ಮತ್ತು ಲೇಡಿ ಕರ್ಜನ್ ಸೇರಿದಂತೆ 16 ಆಸ್ಪತ್ರೆಗಳಲ್ಲಿ ಯೋಜನೆ ಆರಂಭಿಸಲಾಗಿದೆ. ಆತ್ಮಹತ್ಯೆ ಸಂಬಂಧ ಅಧ್ಯಯನವನ್ನೂ ಈ ಯೋಜನೆ ಅಡಿ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲೇ ಹೆಚ್ಚು ಆತ್ಮಹತ್ಯೆ

ಆತ್ಮಹತ್ಯೆ ಪ್ರಕರಣಗಳಲ್ಲಿ ಭಾರತದ ಮಹಾನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳಿಂದ ತಿಳಿದುಬಂದಿದೆ. ಇದರ ಪ್ರಕಾರ, ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣ ಶೇ 20.2 ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ 12.4 ಕ್ಕಿಂತ ಹೆಚ್ಚಿನದ್ದಾಗಿದೆ.

ಇದನ್ನೂ ಓದಿ: ಈ ಸಲಹೆಯನ್ನು ಪಾಲಿಸಿದ್ರೆ ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆಗೆ ಜಾರುತ್ತೀರಿ

ರಾಜ್ಯದಲ್ಲಿ ವಾರ್ಷಿಕವಾಗಿ 13,606 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಆತ್ಮಹತ್ಯೆ ಪ್ರಕರಣಗಳ ಪೈಕಿ ಭಾರತದ ಮೆಗಾಸಿಟಿಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ