ಕೆಂಪೇಗೌಡ ಲೇಔಟ್ ಅರ್ಹ ಸೈಟ್ ಮಾಲೀಕರಿಗೆ ಶುಭ ಸುದ್ದಿ: ಮೂಲಸೌಕರ್ಯ ವಿಳಂಬಕ್ಕೆ ಬಡ್ಡಿ ಸಮೇತ ಪರಿಹಾರಕ್ಕೆ ರೇರಾ ಆದೇಶ

ನಾಡಪ್ರಭು ಕೆಂಪೇಗೌಡ ಲೇಔಟ್ (NPKL) ಸೈಟ್ ಮಾಲೀಕರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಮೂಲಸೌಕರ್ಯಗಳ ವಿಳಂಬಕ್ಕಾಗಿ ಬಿಡಿಎಗೆ ಬಡ್ಡಿ ಸಹಿತ ಪರಿಹಾರ ನೀಡುವಂತೆ ಕೆ-ರೇರಾ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ವಿಳಂಬವಾದ ಅವಧಿಗೆ SBI MCLR + 2% ದರದಲ್ಲಿ ಪರಿಹಾರ ನೀಡಬೇಕು. ಮೂಲಸೌಕರ್ಯ ಪೂರ್ಣಗೊಳ್ಳುವವರೆಗೂ ಬಿಡಿಎ ನಿರಂತರವಾಗಿ ಬಡ್ಡಿ ಪಾವತಿಸಬೇಕು. ಇದು ಮಾಲೀಕರಿಗೆ ಆರ್ಥಿಕ ಭರವಸೆ ನೀಡಿದೆ.

ಕೆಂಪೇಗೌಡ ಲೇಔಟ್ ಅರ್ಹ ಸೈಟ್ ಮಾಲೀಕರಿಗೆ ಶುಭ ಸುದ್ದಿ: ಮೂಲಸೌಕರ್ಯ ವಿಳಂಬಕ್ಕೆ ಬಡ್ಡಿ ಸಮೇತ ಪರಿಹಾರಕ್ಕೆ ರೇರಾ ಆದೇಶ
ಸಾಂದರ್ಭಿಕ ಚಿತ್ರ

Updated on: Apr 16, 2026 | 12:57 PM

ಬೆಂಗಳೂರು, ಏ.16: ನಾಡಪ್ರಭು ಕೆಂಪೇಗೌಡ ಲೇಔಟ್ (NPKL) ಸೈಟ್ ಮಾಲೀಕರ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಲೇಔಟ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ, ಸೈಟ್ ಮಾಲೀಕರಿಗೆ ಬಡ್ಡಿ ಸಹಿತ ಪರಿಹಾರ ನೀಡುವಂತೆ ಕೆ-ರೇರಾ ಬಿಡಿಎಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಸೈಟ್ ಮಾಲೀಕರಿಗೆ, ವಿಳಂಬವಾದ ಅವಧಿಗೆ SBI MCLR + 2% ದರದಲ್ಲಿ ಬಡ್ಡಿ ಪರಿಹಾರ ನೀಡಬೇಕು. (ಉದಾಹರಣೆಗೆ: 56,03,736 ರೂ. ಮೊತ್ತಕ್ಕೆ 10-06-2020 ರಿಂದ 02-02-2026ರವರೆಗಿನ ಬಡ್ಡಿಯನ್ನು 60 ದಿನಗಳೊಳಗೆ ಪಾವತಿಸಬೇಕು).

ಕೇವಲ ಹಳೆಯ ಬಾಕಿ ಮಾತ್ರವಲ್ಲದೆ, 03-02-2026 ರಿಂದ ಲೇಔಟ್‌ನಲ್ಲಿ ಮೂಲಭೂತ ಸೌಕರ್ಯಗಳು ಸಂಪೂರ್ಣಗೊಳ್ಳುವವರೆಗೆ ಬಿಡಿಎ ನಿರಂತರವಾಗಿ ಬಡ್ಡಿ ನೀಡುತ್ತಿರಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈವರೆಗೆ ದಾಖಲೆ ಸಲ್ಲಿಸದ ಮಾಲೀಕರು ರೇರಾ ಕಾಯ್ದೆಯಡಿ ದೂರು ದಾಖಲಿಸಿ, ಸಮಾನ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ವಿಳಂಬಕ್ಕೆ ಡೆವಲಪರ್ (ಬಿಡಿಎ) ನೇರ ಹೊಣೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮಹಿಳಾ ನೌಕರರಿಗೆ ಗುಡ್ ನ್ಯೂಸ್: ತಿಂಗಳಿಗೆ ಒಂದು ದಿನ ‘ಋತುಸ್ರಾವ ರಜೆ’ ಕಡ್ಡಾಯ; ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ

ವರ್ಷಗಳಿಂದ ಸೈಟ್ ಸಿಕ್ಕರೂ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದ ಮಾಲೀಕರಿಗೆ ಈ ಆದೇಶವು ಆರ್ಥಿಕ ಭರವಸೆ ನೀಡಿದೆ. ಸರ್ಕಾರಿ ಸಂಸ್ಥೆಯಾದರೂ ಸಹ ರೇರಾ ನಿಯಮಗಳ ಅಡಿಯಲ್ಲಿ ಪರಿಹಾರ ನೀಡಲೇಬೇಕು ಎಂಬುದು ಈ ಆದೇಶದ ಪ್ರಮುಖ ವಿಚಾರವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us