ಲಂಡನ್ನಿಂದ ಬರುತ್ತಿದ್ದ ಸೂಚನೆ ಆಧಾರದಲ್ಲಿ ಪಾಕಿಸ್ತಾನೀಯರ ಚಟುವಟಿಕೆ: ತನಿಖೆ ವೇಳೆ ಬಯಲಾಯ್ತು ಅಚ್ಚರಿಯ ಮಾಹಿತಿ
ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನಿ ಪ್ರಜೆಗಳ ಚಟುವಟಿಕೆಗಳ ಜಾಡು ಹಿಡಿದ ಪೊಲೀಸರಿಗೆ ಹಲವು ಅಚ್ಚರಿಯ ಅಂಶಗಳು ತಿಳಿದುಬಂದಿವೆ. ಲಂಡನ್ನಲ್ಲಿದ್ದ ವ್ಯಕ್ತಿಯಿದ ಬರುತ್ತಿದ್ದ ಸೂಚನೆಗಳ ಆಧಾರದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು ಎಂಬುದೂ ಸೇರಿದಂತೆ ತನಿಖೆ ವೇಳೆ ತಿಳಿದುಬಂದ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದು ಕೆಲವು ದಿನಗಳ ಹಿಂದೆ ಬಂಧನಕ್ಕೊಳಗಾದ ಪಾಕಿಸ್ತಾನ ಪ್ರಜೆಗಳ ವಿಚಾರಣೆ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಅವರು ಧರ್ಮ ಪ್ರಚಾರ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಲಂಡನ್ನಿಂದ ವ್ಯಕ್ತಿಯೊಬ್ಬ ನೀಡುತ್ತಿದ್ದ ಸಲಹೆ-ಸೂಚನೆಗಳ ಆಧಾರದಲ್ಲಿ ಅವರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಜೆಗಳು ಲಂಡನ್ನಲ್ಲಿದ್ದ ವ್ಯಕ್ತಿಯ ಅಣತಿಯಂತೆ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ಇವರೆಲ್ಲ ಸೂಫಿ ಪಂಗಡದವರಾಗಿದ್ದು, ತಮ್ಮ ಧರ್ಮ ಪ್ರಚಾರವಷ್ಟೇ ಉದ್ದೇಶವಾಗಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಉಗ್ರ ಚಟುವಟಿಕೆಯಲ್ಲ!
ತನಿಖೆ ವೇಳೆ, ಬಂಧಿತರು ಇದುವರೆಗೂ ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿರದ ಮಾಹಿತಿ ಗೊತ್ತಾಗಿದೆ. ಕೇವಲ ಧರ್ಮ ಪ್ರಚಾರ ಮಾಡುತ್ತಿದ್ದು, ಮನೆ ಒಳಗೆ ಇದ್ದುಕೊಂಡೇ ಕಾರ್ಯಚಟುವಟಿಕೆ ನಡೆಸುತ್ತಿದ್ದರು.
ದೇಶದಲ್ಲಿದ್ದಾರೆ ಇನ್ನೂ 30 ಜನ ಪಾಕಿಸ್ತಾನೀಯರು
ಬಂಧಿತರ ಗುಂಪಿನಲ್ಲಿ ಇನ್ನು ಮೂವತ್ತು ಜನರಿದ್ದು, ಅವರೆಲ್ಲಾ ಉತ್ತರ ಭಾರತದ ಕೆಲ ಜಾಗಗಳಲ್ಲಿ ಉಳಿದುಕೊಂಡಿದ್ದಾರೆ. ಒಟ್ಟು 150 ಜನರ ತಂಡ ಇದ್ದು, ಎಲ್ಲರೂ ಸಂದೇಶಗಳ ಮೂಲಕ ಸಂಪರ್ಕ ಸಾಧಿಸಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನಿ ಪ್ರಜೆಗಳು ಭಾರತದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ವಾಸವಾಗಿದ್ದುದರಿಂದ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸದ್ಯ, ಎಫ್ಆರ್ಆರ್ಒ ಮೂಲಕ ಪಾಕಿಸ್ತಾನ ರಾಯಭಾರ ಕಚೇರಿಗೆ ಪತ್ರ ಬರೆಯಲು ಸಿದ್ಧತೆ ಮಾಡಲಾಗುತ್ತಿದೆ. ಬಂಧಿತರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲು ಅಲ್ಲಿನ ರಾಯಭಾರಿ ಜೊತೆ ಸಂಪರ್ಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು: ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳ ಬಂಧನ ಬೆನ್ನಲ್ಲೇ 14 ಪಾಕಿಸ್ತಾನೀಯರು ಅರೆಸ್ಟ್
ಈವರೆಗೆ ಬಂಧಿತರಾದ 23 ಆರೋಪಿಗಳಲ್ಲಿ ಫರ್ವೇಜ್ ಎಂಬಾತ ಪ್ರಮುಖ ಆರೋಪಿಯಾಗಿದ್ದಾನೆ. ಈತನ ನೇತೃತ್ವದಲ್ಲಿ ಪಾಕಿಸ್ತಾನಿ ಪ್ರಜೆಗಳೆಲ್ಲ ಆಗಾಗ ಒಂದು ಕಡೆ ಸೇರಿ ಧರ್ಮ ಪ್ರಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಎಲ್ಲವೂ ಲಂಡನ್ನಲ್ಲಿದ್ದ ವ್ಯಕ್ತಿ ಸೂಚನೆಯಂತೆಯೇ ನಡೆಯುತ್ತಿತ್ತು.
ವಿದೇಶದಿಂದ ಬರುತ್ತಿತ್ತು ಹಣ
ಬಂಧೊತರಿಗೆ ವಿದೇಶದಿಂದ ಹಣ ಬರುತ್ತಿತ್ತು ಎಂಬುದೂ ತನಿಖೆ ವೇಳೆ ಗೊತ್ತಾಗಿದೆ. ವಿದೇಶದಿಂದ ಬಂದಿದ್ದ ಹಣ, ಆರೋಪಿಗಳ ವಿವಿಧ ಬ್ಯಾಂಕ್ ಅಕೌಂಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಪೊಲೀಸರಿಂದ ತನಿಖೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 am, Thu, 17 October 24