
ಬೆಂಗಳೂರು, ಮಾರ್ಚ್ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ, ಡ್ರಗ್ಸ್ ಸಾಗಾಟ ಇವೆಲ್ಲ ಹೊಸದೇನಲ್ಲ. ಆದರೆ ಇತ್ತೀಚಿಗೆ ಡಿಜಿಪಿ ಅಲೋಕ್ ಕುಮಾರ್ (DGP Alok Kumar )ಅವರ ಕಟ್ಟುನಿಟ್ಟಾದ ಕ್ರಮದಿಂದ ಈ ಎಲ್ಲಾ ಅವ್ಯವಹಾರಗಳಿಗೆ ಬ್ರೇಕ್ ಬೀಳುವ ನಿರೀಕ್ಷೆಯಿತ್ತು. ಆದರೆ ಈಗ ಮತ್ತೊಮ್ಮೆ ಜೈಲಿನೊಳಗೇ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಜೈಲಿನಲ್ಲಿ ಮೊಬೈಲ್, ಟಿವಿ ಹಾಗೂ ನೆಟ್ಫ್ಲಿಕ್ಸ್ನಂತಹ ಸೌಲಭ್ಯಗಳು ಲಭ್ಯವಿವೆ ಎಂದು ಹೇಳಲಾಗಿದ್ದು, ಡಿಜಿಪಿ ಅಲೋಕ್ ಕುಮಾರ್ ಅವರೇ ಮೊಬೈಲ್ ನೀಡಿದ್ದಾರೆಂದೂ ಕೈದಿಗಳು ಹೇಳಿದ್ದಾರೆ. ಈ ವಿಡಿಯೋ ನಿಜವಾಗಿಯೂ ಜೈಲಿನೊಳಗೇ ಚಿತ್ರೀಕರಿಸಲ್ಪಟ್ಟಿದೆಯೇ ಅಥವಾ ಬೇರೆಡೆ ಸೆಟಪ್ ಮಾಡಿ ಚಿತ್ರಿಸಿಲಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ವಿಡಿಯೋ ವೈರಲ್ ಆದ ನಂತರ ಪೊಲೀಸರು ತಕ್ಷಣವೇ ಜೈಲಿನಲ್ಲಿ ಪರಿಶೀಲನೆ ನಡೆಸಿದರು. ಕೇಂದ್ರ ಕಾರಾಗೃಹದ 9ನೇ ಬ್ಯಾರಕ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಡ್ರೈನೇಜ್ ಮಾರ್ಗದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಹಾಲಿನ ಪ್ಯಾಕೆಟ್ಗಳಲ್ಲಿ ಸುತ್ತಿ ಅಡಗಿಸಿಡಲಾಗಿದ್ದ ಮೊಬೈಲ್ಗಳನ್ನು ಅಧಿಕಾರಿಗಳು ಆರೋಪಿಗಳಿಂದಲೇ ಹೊರತೆಗೆಸಿದ್ದಾರೆ.
ಮೊಬೈಲ್ ದೊರಕಿದ ವೀಡಿಯೋ ಇಲ್ಲಿದೆ
ತನಿಖೆಯಲ್ಲಿ ವಿಡಿಯೋ ಮಾಡಿದ್ದ ಕೈದಿಗಳನ್ನು ಪತ್ತೆಹಚ್ಚಲಾಗಿದೆ. ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇವರು ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಚ್ಯುತಿ ತರಲು ವಿಡಿಯೋ ಮಾಡಿ ವೈರಲ್ ಮಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಕ್ವಾರಂಟೈನ್ ಸೆಲ್ಗೆ ಸ್ಥಳಾಂತರಿಸಲಾಗಿದೆ.
ವೀಡಿಯೋ ಇಲ್ಲಿದೆ
ಇದನ್ನೂ ಓದಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಹೊಸ ಅಸ್ತ್ರ ಪ್ರಯೋಗಿಸಿದ ಡಿಜಿಪಿ ಅಲೋಕ್ ಕುಮಾರ್
ಘಟನೆ ಬಳಿಕ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಆದೇಶದ ಮೇರೆಗೆ ವಾರ್ಡರ್ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೈಲಿನ ಕೆಲವು ಭಾಗಗಳಲ್ಲಿ ಏರ್ಟೆಲ್ ಸಿಗ್ನಲ್ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಬಳಿ ಮೊಬೈಲ್ ಸಿಕ್ಕ ನಂತರ ಅವರನ್ನು ಕ್ವಾರೆಂಟೈನ್ ಸೆಲ್ಗೆ ಹಾಕಲಾಗಿತ್ತು. ಗ್ಯಾಂಗ್ ಸದಸ್ಯರನ್ನು ಅಕ್ಷರ ಕ್ರಮದಲ್ಲಿ ಬೇರೆ ಬ್ಯಾರಕ್ಗಳಿಗೆ ಸ್ಥಳಾಂತರಿಸಲಾಗುತ್ತಿತ್ತು. ಇದಕ್ಕೆ ಅಸಮಾಧಾನಗೊಂಡು ಕೈದಿಗಳು ಟಾಯ್ಲೆಟ್ ಚೇಂಬರ್ನಲ್ಲಿ ಮೊಬೈಲ್ ಇಟ್ಟು ಬಳಸಿದ್ದಾರೆ. ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ಹಿನ್ನೆಲೆ ಮೂವರು ಸಿಬ್ಬಂದಿ ಅಮಾನತು ಮಾಡಿ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:39 am, Sun, 29 March 26