
ಬೆಂಗಳೂರು, ಮೇ 08: ಕೇಬಲ್ ಅಳವಡಿಕೆ, ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಮೇ 5ರಿಂದ ಬಂದ್ ಆಗಿದ್ದ ಬೆಂಗಳೂರಿನ (Bengaluru) ಪೀಣ್ಯ ಎಲಿವೇಟೆಡ್ ಫ್ಲೈಓವರ್ ಈಗ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಫ್ಲೈ ಓವರ್ ಕೇಬಲ್ ಚೇಂಜ್, ಲೋಡ್ ಟೆಸ್ಟಿಂಗ್ ಸಕ್ಸಸ್ ಆಗಿರುವ ಹಿನ್ನೆಲೆ ಡಾ. ಶಿವಕುಮಾರ್ ಸ್ವಾಮೀಜಿ ಮೇಲ್ಸೇತುವೆ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಫ್ಲೈಓವರ್ ಬಂದ್ ಆಗಿದ್ದ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರು ಈಗ ನಿರಾಳರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ 4 ದಿನ ಬಂದ್
ಬುಧವಾರ ಬೆಳಿಗ್ಗೆ 5 ಗಂಟೆಗೆ ಕ್ಲೋಸ್ ಆಗಿದ್ದ ಫ್ಲೈಓವರ್ 72 ಗಂಟೆಗಳ ಬಳಿಕ ಅಂದರೆ ಇಂದು (ಮೇ 8) ಬೆಳಿಗ್ಗೆ 11 ಗಂಟೆಗೆ ಮತ್ತೆ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ. ಈ ಬಾರಿ 1,422 ಕೇಬಲ್ಗಳನ್ನು ಚೇಂಜ್ ಮಾಡಲಾಗಿದ್ದು, 4 ದಿನಗಳ ಕಾಲ 32 ಟನ್ ಲೋಡ್ ಟೆಸ್ಟಿಂಗ್ ನಡೆಸಲಾಗಿದೆ. ಸುಮಾರು 10ಕ್ಕೂ ಹೆಚ್ಚು ಟ್ರಕ್ಗಳಲ್ಲಿ 32 ಟನ್ನಷ್ಟು ಲೋಡ್ ಹಾಕಿ ಪರೀಕ್ಷೆ ನಡೆದಿದ್ದು, ಬದಲಾಯಿಸಲಾದ ಕೇಬಲ್ಗಳ ಮೊತ್ತ 32 ಕೋಟಿ ರೂಪಾಯಿ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಕೇಬಲ್ಗಳಿಗೆ ಯಾವುದೇ ಹಾನಿಯಾಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನೂ NHAI ಕೈಗೊಂಡಿದೆ.
ಪೀಣ್ಯ ಮೇಲ್ಸೇತುವೆಯ ಕೆನ್ನಮೆಟಲ್ ವಿಡಿಯಾ ಅಪ್ ರ್ಯಾಂಪ್ನಿಂದ ಎಸ್ಆರ್ಎಸ್ ಡೌನ್ ರ್ಯಾಂಪ್ವರೆಗೆ ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೆ ಮೇ 5ರಿಂದ ಅವಕಾಶವಿರಲಿಲ್ಲ. ಇಂದು ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆ ಸವಾರರು ನಾ ಮುಂದು ತಾ ಮುಂದು ವಾಹನಗಳನ್ನು ಚಲಾಯಿಸಿದ ದೃಶ್ಯಗಳು ಕಂಡುಬಂದಿವೆ. ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮತ್ತೆ ಮುಕ್ತವಾಗಿರುವ ಕಾರಣ ಟ್ರಾಫಿಕ್ ಸಮಸ್ಯೆ ತುಂಬಾ ಕಡಿಮೆ ಆಗಲಿದೆ ಎಂದು ವಾಹನ ಸವಾರರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.