
ಬೆಂಗಳೂರು, ಮೇ 8: ಜಾಗತಿಕ ಮಟ್ಟದ ಯುದ್ಧದ ಬಿಕ್ಕಟ್ಟು ಕೇವಲ ಕಚ್ಚಾ ತೈಲ ಬೆಲೆಯ ಮೇಲೆ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರಿನ (Bengaluru) ಕೈಗಾರಿಕೆಗಳ ಮೇಲೂ ಭೀಕರ ಪರಿಣಾಮ ಬೀರಿದೆ. ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ವಲಯವೆಂದು ಗುರುತಿಸಲ್ಪಟ್ಟಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ (Peenya Industries) ಈಗ ವಾಣಿಜ್ಯ ಇಂಧನ ಪೂರೈಕೆಯ ವ್ಯತ್ಯಯ ಹಾಗೂ ಬೆಲೆ ಏರಿಕೆಯ ‘ಟ್ರಬಲ್’ ಶುರುವಾಗಿದೆ. ಇದರಿಂದಾಗಿ ನೂರಾರು ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ.
ಸರ್ಕಾರದಿಂದ ಪೂರೈಕೆಯಾಗುತ್ತಿದ್ದ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿರುವುದು ಪೀಣ್ಯದ ಕೈಗಾರಿಕಾ ಕಂಪನಿಗಳ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. ಪ್ರಸ್ತುತ ಕೈಗಾರಿಕೆಗಳು ಕೇವಲ ಖಾಸಗಿ ಏಜೆನ್ಸಿಗಳ ಮೇಲೆ ಅವಲಂಬಿತವಾಗಿವೆ. ಆದರೆ ಖಾಸಗಿಯಲ್ಲಿ ಸಿಲಿಂಡರ್ ಬೆಲೆ ಎರಡು ಪಟ್ಟು ಹೆಚ್ಚಾಗಿರುವುದರಿಂದ ಉತ್ಪಾದನಾ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಸಣ್ಣಪುಟ್ಟ ಕಟ್ಟಿಂಗ್ ಯೂನಿಟ್ ಸೇರಿದಂತೆ ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಈ ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಬೆಲೆ ಏರಿಕೆಯಿಂದಾಗಿ ಉದ್ಯಮ ನಡೆಸಲು ಸಾಧ್ಯವಾಗದೆ ಮಾಲೀಕರು ಕಂಗಾಲಾಗಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, ಸಾವಿರಾರು ಕಂಪನಿಗಳಿಗೆ ಎಲ್ಪಿಜಿ (LPG) ಅತ್ಯಗತ್ಯವಾಗಿದೆ. ಈ ಗ್ಯಾಸ್ ಬಿಕ್ಕಟ್ಟಿನ ಬಗ್ಗೆ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ‘ವಾಣಿಜ್ಯ ಸಿಲಿಂಡರ್ಗಳ ಪೂರೈಕೆಯನ್ನು ಪುನರಾರಂಭಿಸಿ ಮತ್ತು ಕೈಗಾರಿಕೆಗಳಿಗೆ ಪ್ರತ್ಯೇಕ ಹಾಗೂ ಕಡಿಮೆ ದರ ನಿಗದಿಪಡಿಸಿ’ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ದಾನಪ್ಪ ಮನವಿ ಮಾಡಿದ್ದಾರೆ.
ಪೀಣ್ಯದ ವಿವಿಧ ಬಿಡಿಭಾಗ ತಯಾರಿಕಾ ಘಟಕಗಳು ಈ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಪ್ಲೈ ಇಲ್ಲದೆ ಉತ್ಪಾದನೆ ಕುಂಠಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಆಟೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೀಟರ್ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ
ವಾಣಿಜ್ಯ ಇಂಧನದ ಈ ವ್ಯತ್ಯಯ ಕೇವಲ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲದೆ, ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೈಗಾರಿಕಾ ಕ್ಷೇತ್ರಕ್ಕೂ ದೊಡ್ಡ ಹೊಡೆತ ನೀಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:46 am, Fri, 8 May 26