ಗಣೇಶ ಚತುರ್ಥಿಗೆ ಖಾಸಗಿ ಬಸ್‌ ಟಿಕೆಟ್​​ ದುಬಾರಿ, ಹಬ್ಬದ ಮುನ್ನಾ ದಿನ ಮೂರ್ನಾಲ್ಕು ಪಟ್ಟು ಹೆಚ್ಚಳ

ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್ ಗಳಿಗೆ ಹಬ್ಬವೋ ಹಬ್ಬ..ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ದುಪ್ಪಟ್ಟು ದರ ವಸೂಲಿ ಶುರುವಾಗುತ್ತೆ. ಈಗ ಮತ್ತದೇ ಚಾಳಿ ಮುಂದುವರಿದಿದ್ದು, ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಡುವ ಪ್ರಯಾಣಿಕರಿಗೆ ಟಿಕೆಟ್​ ದರ ಏರಿಕೆ ಬಿಸಿ ತಟ್ಟಿದೆ.

ಗಣೇಶ ಚತುರ್ಥಿಗೆ ಖಾಸಗಿ ಬಸ್‌ ಟಿಕೆಟ್​​ ದುಬಾರಿ, ಹಬ್ಬದ ಮುನ್ನಾ ದಿನ ಮೂರ್ನಾಲ್ಕು ಪಟ್ಟು ಹೆಚ್ಚಳ
ಖಾಸಗಿ ಬಸ್ ಟಿಕೆಟ್ ದರ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 03, 2024 | 10:15 PM

ಬೆಂಗಳೂರು, (ಸೆಪ್ಟೆಂಬರ್ 03): ಗೌರಿ- ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಸಾಕು ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೆ ಚಾನ್ಸ್ ಎಂದು ಜನರಿಂದ ಸುಲಿಗೆಗೆ ಇಳಿದು ಬಿಡ್ತಾರೆ. ಹೌದು..ಹಬ್ಬದ ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಕತ್ತರಿ ಹಾಕುತ್ತಾರೆ. ಅದರಂತೆ ಇದೀಗ ವಿಘ್ನ ವಿನಾಯಕ ಗಣೇಶ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಅಂತ ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ಗಳ ದರ ಏರಿಕೆ ಶಾಕ್ ಎದುರಾಗಿದೆ. ಒಂದೊಂದು ಖಾಸಗಿ ಬಸ್​​ನ ದರ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಸೆಪ್ಟೆಂಬರ್ 6 ಶುಕ್ರವಾರ ಗೌರಿ ಹಬ್ಬ, 7 ರಂದು ಗಣೇಶನ ಹಬ್ಬ ಭಾನುವಾರ ಹೇಗೂ ರಜೆ. ಹೀಗಾಗಿ ಐದರಂದು ಊರಿಗೆ ತೆರಳಲು ಜನರು ಪ್ಲಾನ್ ಮಾಡಿದ್ದಾರೆ. ಆದರೆ ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ದರ ಏರಿಕೆ ಆಗಿರೋದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ಗುಡ್ ನ್ಯೂಸ್: ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್

ಪ್ರತಿ ವರ್ಷ ಯಾವುದೇ ಹಬ್ಬದ ಸೀಸನ್‌ ನಲ್ಲಿ ಖಾಸಗಿ ಬಸ್‌ಗಳು ಮಾತ್ರವಲ್ಲದೇ ಸರ್ಕಾರಿ ಸಾರಿಗೆ ಬಸ್‌ಗಳ ದರದಲ್ಲಿ ಏರಿಕೆ ಕಾಣುತ್ತದೆ. ಸಾರಿಗೆ ಬಸ್‌ಗಳು ವಾರಾಂತ್ಯ, ರಜೆ ಸಮಯದಲ್ಲಿ ಮೊದಲಿನಿಂದಲೂ ಕೊಂಚ ಏರಿಕೆ ಮಾಡುತ್ತವೆ. ಆದರೆ ಖಾಸಗಿ ಬಸ್‌ಗಳು, ಟ್ರಾವೆಲ್ಸ್‌ ಸಂಸ್ಥೆಯವರು ಮೂರ್ನಾಲ್ಕು ಮೂರು ಪಟ್ಟು ದರ ಏರಿಕೆ ಮಾಡುವುದು ಸಾಮಾನ್ಯವಾಗಿದೆ. ಇನ್ನು ಇದಕ್ಕೆ ಸಾರಿಗೆ ಇಲಾಖೆ ಮಾತ್ರ ಇದಕ್ಕೆ ಕಡಿವಾಣ ಹಾಕುತ್ತಿಲ್ಲ.

ಇಂದಿನ ಖಾಸಗಿ ಬಸ್​ ಟಿಕೆಟ್ ದರ

ಬೆಂಗಳೂರು-ಹಾವೇರಿ: 600ರಿಂದ 1200 ರೂ. ಬೆಂಗಳೂರು-ಗುಲ್ಬರ್ಗ: 600ರಿಂದ 1200 ರೂ. ಬೆಂಗಳೂರು-ಯಾದಗಿರಿ: 600ರಿಂದ 1400 ರೂ. ಬೆಂಗಳೂರು-ದಾವಣಗೆರೆ: 550-900 ರೂ. ಬೆಂಗಳೂರು-ಹಾಸನ: 475-600 ರೂ. ಬೆಂಗಳೂರು-ಧಾರವಾಡ: 500-1100 ರೂ. ಬೆಂಗಳೂರು-ಚಿಕ್ಕಮಗಳೂರು: 500-900 ರೂ.

ಇನ್ನು ಸೆಪ್ಟೆಂಬರ್ 5ರ ಖಾಸಗಿ ಬಸ್ ಗಳ ದರ

  • ಬೆಂಗಳೂರು-ಹಾವೇರಿ : 1550-1600 ರೂ.
  • ಬೆಂಗಳೂರು-ಗುಲ್ಬರ್ಗ: 1200-1800 ರೂ.
  • ಬೆಂಗಳೂರು-ಯಾದಗಿರಿ: 1100-1750 ರೂ.
  • ಬೆಂಗಳೂರು-ದಾವಣಗೆರೆ : 900-2000 ರೂ.
  • ಬೆಂಗಳೂರು-ಹಾಸನ: 899-1800 ರೂ.
  • ಬೆಂಗಳೂರು-ಧಾರವಾಡ: 1200-3000 ರೂ.
  • ಬೆಂಗಳೂರು-ಚಿಕ್ಕಮಗಳೂರು: 900-1500 ರೂ.

ಹೀಗೆ ವಿಘ್ನ ವಿನಾಯಕ ಗಣೇಶ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಅಂತ ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ಗಳ ದರ ಏರಿಕೆ ಶಾಕ್ ಎದುರಾಗಿದೆ.

ಇನ್ನೂ ಖಾಸಗಿ ಬಸ್ ಗಳ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕರನ್ನು ಕೇಳಿದ್ರೆ ಸಾರಿಗೆ ಇಲಾಖೆ ಪ್ರತಿ ಮೂರು ತಿಂಗಳಿಗೆ ಖಾಸಗಿ ಬಸ್ ಗಳಿಂದ ಒಂದು ಸೀಟ್ ಗೆ 4400 ರುಪಾಯಿ ಟ್ಯಾಕ್ಸ್ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಕೆಎಸ್ಆರ್ಟಿಸಿ ಬಸ್ ನಲ್ಲೂ ಗೌರಿ- ಗಣೇಶ ಹಬ್ಬಕ್ಕೆ ದರ ಏರಿಕೆ ಮಾಡಲಾಗಿದೆ ನಾವು 300 ರಿಂದ 400 ರುಪಾಯಿಯಷ್ಟು ದರ ಏರಿಕೆ ಮಾಡಿದ್ದೀವಿ ಎಂದು ಸಮರ್ಥನೆ ನೀಡಿದ್ದಾರೆ.

ಕೆಎಸ್​​ಆರ್​ಟಿಸಿಯಿಂದ ಗುಡ್​​ನ್ಯೂಸ್

ಇನ್ನು ಗೌರಿ- ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್ಆರ್ಟಿಸಿ ಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಊರಿಗೆ ಹೋಗುವ ಪ್ರಯಾಣಿಕರಿಗಾಗಿ 1500 ಹೆಚ್ಚುವರಿ ಬಸ್ ಗಳನ್ನು ನಿಯೋಜನೆ ಮಾಡಲಾಗಿದೆ.. ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಈ ಹೆಚ್ಚುವರಿ ಬಸ್ ಗಳು ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್ ಗೆ ವಿಶೇಷ ಕಾರ್ಯಚರಣೆ ಮಾಡಲಿವೆ.

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪರಿಯಾಪಟ್ಟಣ ,ವಿರಾಜಪೇಟೆ, ಮಡಿಕೇರಿ ಗ ವಿಶೇಷ ಬಸ್ ಕಾರ್ಯಚರಣೆ ಮಾಡಲಿದ್ದು, ತಮಿಳುನಾಡು ಮತ್ತು ಕೇರಳ ಭಾಗಗಳಿಗೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದೆ.ಸೆ.8 ರಂದು ರಾಜ್ಯದ ವಿವಿಧ ಸ್ಥಳಗಳಿಂದ ಹೆಚ್ಚುವರಿ ಬಸ್ ಗಳು ವಾಪಸ್ಸಾಗಲಿವೆ..ಪ್ರಯಾಣಿಕರಿಗೆ ಇ- ಟಿಕೆಟ್ ಬುಕ್ಕಿಂಗ್ ಗೆ ಅವಕಾಶವನ್ನು ನೀಡಲಾಗಿದೆ.

ಒಟ್ಟಿನಲ್ಲಿ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಒಂದ್ಕಡೆ ಖಾಸಗಿ ಬಸ್ಸುಗಳು ದರ ಏರಿಕೆ ಮಾಡಿ ಶಾಕ್ ನೀಡಿದ್ರೆ ಅತ್ತ ಕೆಎಸ್ಆರ್ಟಿಸಿ 1500 ಬಸ್ ಗಳ ಹೆಚ್ಚುವರಿ ನಿಯೋಜನೆ ಮಾಡಿ ಸ್ವಲ್ಪ ರಿಲೀಫ್ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ