
ಬೆಂಗಳೂರು, ನವೆಂಬರ್ 09: RSS ಚಟುವಟಿಕೆಗಳಿಗೆ ರಾಜ್ಯ ಸರ್ಕಾರದಿಂದ ನಿರ್ಬಂಧ ವಿಚಾರ ತೀವ್ರ ವಿವಾದ ಸ್ವರೂಪ ಪಡೆದಿರುವ ನಡುವೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿ ಆಗಿಲ್ಲ. ಇವರಿಗೇನು ಪ್ರತ್ಯೇಕ ಕಾನೂನು ದೇಶದಲ್ಲಿ ಇದೆಯಾ ಎಂಬ ಪ್ರಶ್ನೆಗಳು ಕಾಂಗ್ರೆಸ್ ಪಾಳಯದಿಂದ ಕೇಳಿಬಂದಿದ್ದು. ಹಲವು ಆರೋಪಗಳನ್ನು ಸಹ RSS ಮೇಲೆ ಮಾಡಲಾಗಿತ್ತು. ಇವುಗಳಿಗೆಲ್ಲ ಈಗ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಉತ್ತರ ಕೊಟ್ಟಿದ್ದಾರೆ.
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ನಿನ್ನೆ ಉಪನ್ಯಾಸ ನೀಡಿದ್ದರು. ಇಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಆಗಮಿಸಿರುವ ವಿವಿಧ ಕ್ಷೇತ್ರಗಳ ಆಹ್ವಾನಿತರ ಪ್ರಶ್ನೆಗೆ ಅವರು ಉತ್ತರ ನೀಡಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. RSS ಸ್ಥಾಪನೆ ಆಗಿದ್ದು 1925ರಲ್ಲಿ. ಆಗ ಭಾರತದಲ್ಲಿದ್ದ ಬ್ರಿಟಿಷರ ಬಳಿ ನಾವು ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕಿತ್ತಾ? ಸ್ವಾತಂತ್ರ್ಯ ಬಂದ ನಂತರವೂ ನೋಂದಣಿ ಕಡ್ಡಾಯ ಮಾಡಿಲ್ಲ. ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘವಾಗಿದ್ದು, ಹೀಗಾಗಿಯೇ ನೋಂದಣಿ ಮಾಡಿಸಿಲ್ಲ. ಹಿಂದೂ ಧರ್ಮ ಕೂಡಾ ನೋಂದಣಿ ಆಗಿಲ್ಲ. RSS ನಿಷೇಧ ಮಾಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಕೋರ್ಟ್ ಇದನ್ನು ತಿರಸ್ಕರಿಸಿದೆ. ನಮ್ಮದು ಸಂವಿಧಾನಾತ್ಮಕ ಸಂಘವಾಗಿದ್ದು, ಆರ್ಎಸ್ಎಸ್ ಆದಾಯ ತೆರಿಗೆ ಸಹ ಕಟ್ಟುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್ಎಸ್ಎಸ್ ಉದ್ದೇಶ; ಮೋಹನ್ ಭಾಗವತ್
ಆರ್ಎಸ್ಎಸ್ನಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳಲು ಅವಕಾಶ ಇದೆಯಾ ಮತ್ತು ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶ ಇದೆಯಾ ಎಂಬ ಪ್ರಶ್ನೆಗೂ ಉತ್ತರಿಸಿದ ಮೋಹನ್ ಭಾಗವತ್, ನಮ್ಮಲ್ಲಿ ಜಾತಿ, ಲಿಂಗ, ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಎಂಬ ಪಂಥಗಳಿಗೆ ಅವಕಾಶ ಇಲ್ಲ. ಯಾವುದೇ ಧರ್ಮದವರು ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವವರು ತಮ್ಮ ಧರ್ಮವನ್ನು ಹೊರಗಿಟ್ಟು ಭಾರತ ಮಾತೆಯ ಮಕ್ಕಳಾಗಿ ಬರಬೇಕು. ಹಿಂದೂ ಸಮಾಜವನ್ನು ಒಪ್ಪಿಕೊಂಡು ಶಾಖೆಗೆ ಬರಬೇಕು. ಸಂಘದ ನಿಯಮಗಳನ್ನು ಪಾಲನೆ ಮಾಡಬೇಕು ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:49 am, Sun, 9 November 25