ಮಹಿಳಾ ಅಧಿಕಾರಿಗಳ ಜತೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ, ಬ್ಲ್ಯಾಕ್​ಮೇಲ್! ಬಂಧಿತ ಕೃಪಲಾನಿಯ ಕಾಮಕಾಂಡ ಸಂಪೂರ್ಣ ಬಯಲು

ಬೆಂಗಳೂರಿನಲ್ಲಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಕೃಪಲಾನಿ ಎಂಬ ಕಾಮುಕನ ಕರಾಳ ಮುಖ ಬಯಲಾಗಿದೆ. ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಮಹಿಳಾ ಅಧಿಕಾರಿಗಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಈತನನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಅನೇಕ ಸ್ಫೋಟಕ ವಿಚಾರಗಳು ಬಯಲಾಗಿವೆ. ಆರೋಪಿ ಮಹಿಳೆಯರಷ್ಟೇ ಅಲ್ಲದೆ ಪುರುಷ ಅಧಿಕಾರಿಗಳನ್ನೂ ಒಳಗೊಂಡು 50ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದ ಎಂಬುದು ಗೊತ್ತಾಗಿದೆ.

ಮಹಿಳಾ ಅಧಿಕಾರಿಗಳ ಜತೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ, ಬ್ಲ್ಯಾಕ್​ಮೇಲ್! ಬಂಧಿತ ಕೃಪಲಾನಿಯ ಕಾಮಕಾಂಡ ಸಂಪೂರ್ಣ ಬಯಲು
ಆರೋಪಿ ಕೃಪಲಾನಿ
Image Credit source: tv9

Updated on: Apr 18, 2026 | 12:06 PM

ಬೆಂಗಳೂರು, ಏಪ್ರಿಲ್ 18: ಮಹಿಳಾ ಕಸ್ಟಮ್ಸ್ ಅಧಿಕಾರಿಯ (Customs Officer) ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪುಲಿಕೇಶಿನಗರ ಪೊಲೀಸರಿಂದ ಬಂಧಿತನಾಗಿರುವ ಕೃಪಲಾನಿ (Krupalani) ಎಂಬಾತನ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಈತ ಕೇವಲ ಒಬ್ಬರನ್ನಲ್ಲ, ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳನ್ನು ಇದೇ ರೀತಿ ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಮಹಿಳಾ ಅಧಿಕಾರಿಗಳ ಜತೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ ಮಾಡಿ ನಂತರ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಆ ಮೂಲಕ ತನ್ನ ಕುಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪವಿದೆ.

ಜಿಎಸ್​ಟಿ, ಕಸ್ಟಮ್ಸ್ ಮಹಿಳಾ ಅಧಿಕಾರಿಗಳೇ ಟಾರ್ಗೆಟ್

ಆರೋಪಿ ಕೃಪಲಾನಿ ಮುಖ್ಯವಾಗಿ ಜಿಎಸ್‌ಟಿ (GST) ಮತ್ತು ಕಸ್ಟಮ್ಸ್ ವಿಭಾಗದ ಮಹಿಳಾ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಆರಂಭದಲ್ಲಿ ಕೆಲಸದ ನಿಮಿತ್ತ ಅಧಿಕಾರಿಗಳೊಂದಿಗೆ ಸಲುಗೆ ಬೆಳೆಸುತ್ತಿದ್ದ ಈತ, ಬಳಿಕ ಡಿನ್ನರ್, ಲಂಚ್ ಎಂದು ಆಪ್ತನಾಗುತ್ತಿದ್ದ. ನಂತರ ಪ್ರೀತಿ ಮತ್ತು ಮದುವೆಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಅಷ್ಟಕ್ಕೇ ಸುಮ್ಮನಾಗದೆ, ಆ ದೈಹಿಕ ಸಂಪರ್ಕವನ್ನೇ ಬಂಡವಾಳವಾಗಿಸಿಕೊಂಡು ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಿದ್ದ.

ಕೆಲಸದ ಲೂಪ್ ಹೋಲ್ ಬಳಸಿ ಬ್ಲ್ಯಾಕ್‌ಮೇಲ್

ಪುರುಷ ಅಧಿಕಾರಿಗಳನ್ನೂ ಕೃಪಲಾನಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಮೊದಲು ಅಧಿಕಾರಿಗಳ ಕಾರ್ಯವೈಖರಿ ಮತ್ತು ಇಲಾಖೆಯ ಒಳಗಿನ ಲೋಪದೋಷಗಳನ್ನು ತಿಳಿದುಕೊಳ್ಳುತ್ತಿದ್ದ ಈತ, ಅದನ್ನು ಇಟ್ಟುಕೊಂಡು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದ. ಮಹಿಳಾ ಅಧಿಕಾರಿಗಳ ಜತೆ ಲೈಂಗಿಕ ಸಂಪರ್ಕದ ನಂತರ ವಿಡಿಯೋ ಅಥವಾ ಫೋಟೋಗಳನ್ನು ಬಳಸಿ ಬೆದರಿಕೆ ಹಾಕುತ್ತಿದ್ದ ಈತ, ಅಧಿಕಾರಿಗಳನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದ ಎಂಬ ಆರೋಪವಿದೆ.

ಪೊಲೀಸರ ಮೇಲೆಯೇ ದರ್ಪ

ವಿಚಾರಣೆ ನಡೆಯುತ್ತಿರುವಾಗಲೂ ಈತನ ಉದ್ಧಟತನ ಮುಂದುವರಿದಿದೆ. ಮೆಡಿಕಲ್ ಟೆಸ್ಟ್ ಮಾಡಿಸುವ ವೇಳೆ ಆಸ್ಪತ್ರೆಯಲ್ಲಿ ರಂಪಾಟ ಮಾಡಿರುವ ಆರೋಪಿ, ಪೊಲೀಸರ ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪುಲಿಕೇಶಿನಗರ ಎಸಿಪಿ ಗೀತಾ ನೇತೃತ್ವದಲ್ಲಿ ಈ ಗಂಭೀರ ಪ್ರಕರಣದ ತನಿಖೆ ಚುರುಕಿನಿಂದ ಸಾಗಿದೆ.

ಇದನ್ನೂ ಓದಿ: ಬೆಂಗಳೂರು: ಮಗ ಕಾಣೆಯಾಗಿದ್ದಾನೆಂದು ಸುಳ್ಳು ಕೇಸ್ ಹಾಕಿದ್ದ ತಾಯಿಗೆ 2 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Sat, 18 April 26

Follow Us