
ಬೆಂಗಳೂರು, ಸೆಪ್ಟೆಂಬರ್ 15: ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ಜಾಲ ಪತ್ತೆ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಕಿಂಗ್ಪಿನ್ ಪ್ರಶಾಂತ್ ಇನ್ನೂ ಅಜರ್ ಬೈಜಾನ್ನಲ್ಲೇ ಇದ್ದಾನೆ ಎನ್ನಲಾಗಿದೆ. ಸೆಪ್ಟೆಂಬರ್ 9ರಂದು ಆರೋಪಿ ಪ್ರಶಾಂತ್ನ ವೀಸಾ ಅವಧಿ ಮುಗಿದಿದ್ದು, ಆತ ಅಜರ್ ಬೈಜಾನ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದಾನೆ. ಆದರೆ ಭಾರತ ಹಾಗೂ ಅಜರ್ ಬೈಜಾನ್ ನಡುವೆ ಒಪ್ಪಂದ ಇಲ್ಲದ ಹಿನ್ನೆಲೆ ಪ್ರಶಾಂಶ್ನನ್ನು ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ಎಸ್ಐಟಿ ಹೇಳ್ತಿದೆ. ಸಮಸ್ಯೆ ಬಗೆಹರಿಸಿಕೊಂಡು ಆತನೇ ವಾಪಸಾಗಬೇಕು. ಆ ಬಳಿಕ ಲುಕ್ಔಟ್ ನೋಟಿಸ್ ಜಾರಿಗೊಳಿಸಿ ಬಂಧಿಸಬಹುದು ಎಂದು ಟಿವಿ9ಗೆ ವಿಶೇಷ ತನಿಖಾ ತಂಡದ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಮತ್ತೊಂದೆಡೆ ಈ ಬೃಹತ್ ದಂಧೆಯ ಪ್ರಮುಖ ಆರೋಪಿಯಾಗಿರುವ ವೀರೇಶ್ನನ್ನು ಇಂದು ನ್ಯಾಯಾಂಗ ಬಂಧನದಿಂದ ಕಸ್ಟಡಿಗೆ ಪಡೆಯಲು ಎಸ್ಐಟಿ ಸಿದ್ಧತೆ ನಡೆಸಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್ನಲ್ಲಿರುವ ವೀರೇಶ್ನನ್ನು ಬಾಡಿ ವಾರೆಂಟ್ ಮೇಲೆ ಪಡೆದು, ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ವೀರೇಶ್ ಈ ನಕಲಿ ಔಷಧ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದು ಎಸ್ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ನಕಲಿ ಔಷಧಗಳ ಉತ್ಪಾದನೆ ಮತ್ತು ಸಪ್ಲೈ ವ್ಯವಸ್ಥೆಯನ್ನು ವೀರೇಶ್ ಮಾನಿಟರ್ ಮಾಡುತ್ತಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ನಕಲಿ ಔಷಧಗಳ ಉತ್ಪಾದನೆಯಾದ ನಂತರ, ಅವುಗಳನ್ನು ಪಟ್ಟಿ ಮಾಡಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು ಹಾಗೂ ಮೆಡಿಕಲ್ಗಳಿಗೆ ಪೂರೈಕೆ ಮಾಡುವ ಕೆಲಸವನ್ನು ಈತ ಮಾಡುತ್ತಿದ್ದ. ಈ ಮೂಲಕ, ನಕಲಿ ಔಷಧ ಜಾಲವು ವಾರ್ಷಿಕ ಸುಮಾರು 15 ಕೋಟಿ ರೂಪಾಯಿಗಳಷ್ಟು ಭಾರಿ ಟರ್ನ್ ಓವರ್ ಮಾಡುತ್ತಿತ್ತು ಎಂಬುದು ಎಸ್ಐಟಿ ವಿಚಾರಣೆ ವೇಳೆ ಬಯಲಾಗಿದೆ.
ಇದನ್ನೂ ಓದಿ: ನಕಲಿ ಮೆಡಿಸಿನ್ ದಂಧೆ ಬಗ್ಗೆ ಮತ್ತಷ್ಟು ಕರಾಳ ಸತ್ಯ ಅನಾವಣರ: ಟರ್ಕಿವರೆಗೂ ಲಿಂಕ್ ಬಗ್ಗೆ ಮಾಹಿತಿ ಬಹಿರಂಗ
ಆರಂಭಿಕ ವಿಚಾರಣೆ ವೇಳೆ, ವೀರೇಶ್ ತನಗೆ ಮೆಡಿಸಿನ್ ಬರ್ತಾ ಇತ್ತು, ನಾನು ಸಪ್ಲೈ ಮಾಡ್ತಿದ್ದೆ ಎಂದು ಹೇಳಿಕೆ ನೀಡಿದ್ದ. ಆದರೆ, ಈ ನಕಲಿ ಔಷಧಗಳನ್ನು ತರಿಸುವ ಮತ್ತು ಸಪ್ಲೈ ಮಾಡುವ ಹಿಂದಿನ ಸಮಗ್ರ ಕಾರ್ಯಾಚರಣೆ, ಲಾಭಾಂಶ ಹಂಚಿಕೆ ಮತ್ತು ಜಾಲದ ರೂಪುರೇಷೆಗಳ ಬಗ್ಗೆ ಆಳವಾದ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ದಂಧೆಯ ಪ್ರಮುಖ ಕಿಂಗ್ಪಿನ್ ಪ್ರಶಾಂತ್ ಎಂದೇ ಎಸ್ಐಟಿ ಶಂಕಿಸಿದೆ. ಆದರೆ, ಈವರೆಗೆ ಬಂಧಿತರಾಗಿರುವ ಯಾವುದೇ ಆರೋಪಿಗಳು ಪ್ರಶಾಂತ್ ಕುರಿತು ಬಾಯಿ ಬಿಟ್ಟಿಲ್ಲ. ಹಾಗಾಗಿ, ವೀರೇಶ್ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಪ್ರಶಾಂತ್ನ ಪಾತ್ರ ಮತ್ತು ಆತನ ಕುರಿತು ಮಹತ್ವದ ಮಾಹಿತಿ ಹೊರಬೀಳಬಹುದು ಎಂದು ಎಸ್ಐಟಿ ನಿರೀಕ್ಷಿಸಿದೆ. ವೀರೇಶ್ ವಿಚಾರಣೆಯಿಂದ ಈ ದಂಧೆಗೆ ಸಹಕರಿಸಿದ ಇತರರು ಯಾರು, ನಕಲಿ ಔಷಧ ಸಪ್ಲೈ ಜಾಲವು ಯಾವೆಲ್ಲಾ ಭಾಗಗಳಿಗೆ ಹರಡಿಕೊಂಡಿದೆ, ಮತ್ತು ಪ್ರಶಾಂತ್ ಈ ಇಡೀ ಜಾಲದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬೆಲ್ಲಾ ವಿಚಾರಗಳು ಬಯಲಾಗಲಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.