ಸಚಿವ ಈಶ್ವರಪ್ಪ ವಜಾಗೆ ಕಾಂಗ್ರೆಸ್ ಬಿಗಿ ಪಟ್ಟು, ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್

| Updated By: preethi shettigar

Updated on: Feb 18, 2022 | 1:36 PM

ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಮುಂದುವರಿದಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪ ಮುಂದೂಡಿದ್ದಾರೆ.

ಸಚಿವ ಈಶ್ವರಪ್ಪ ವಜಾಗೆ ಕಾಂಗ್ರೆಸ್ ಬಿಗಿ ಪಟ್ಟು, ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್
ವಿಶ್ವೇಶ್ವರ ಹೆಗಡೆ ಕಾಗೇರಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ವಿಧಾನಸಭೆಯಲ್ಲಿ ಕಾಂಗ್ರೆಸ್​ನಿಂದ​ ಅಹೋರಾತ್ರಿ ಧರಣಿ, ಗದ್ದಲ, ಕೋಲಾಹಲ ಮುಂದುವರಿದಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(vishweshwar hegde kageri)ಕಲಾಪ ಮುಂದೂಡಿದ್ದಾರೆ. ಪ್ರತಿಪಕ್ಷ ನಾಯಕರ ಮನವೊಲಿಕೆಗೆ ಸ್ಪೀಕರ್(Speaker) ಕಾಗೇರಿ ಮುಂದಾಗಿದ್ದರು. ಧರಣಿ ಬಿಟ್ಟು ಕಲಾಪದಲ್ಲಿ ಭಾಗಿಯಾಗುವಂತೆ ಸ್ಪೀಕರ್​ ಮನವಿ ಮಾಡಿದ್ದರು. ಸಿಎಂ, ಮಾಜಿ ಸಿಎಂ ಮಾತಿಗೂ ಕಾಂಗ್ರೆಸ್ ನಾಯಕರು ಜಗ್ಗದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರ ಮನವೊಲಿಕೆಗೆ ಸ್ಪೀಕರ್ ಮುಂದಾಗಿದ್ದರೆ. ಸ್ಪೀಕರ್ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ಎಷ್ಟೇ ಮನವೊಲಿಕೆ ಪ್ರಯತ್ನ ಮಾಡಿದರು ಒಪ್ಪದ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪ (Session) ಸೋಮವಾರಕ್ಕೆ ಮುಂದೂಡಿದ್ದಾರೆ.

ಸದನ ಮುಂದುವರಿಸಬೇಕೋ ಬೇಡವೋ ಎಂದು ಚರ್ಚೆ

ವಿಧಾನಸಭೆಯಲ್ಲಿ ಮತ್ತೆ ಸಂಧಾನ ಸಭೆ ನಡೆದಿತ್ತು. ಬಿಜೆಪಿ ನಾಯಕರ ಸಭೆ ಬಳಿಕ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಸಿ.ಟಿ. ರವಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸದನ ಮುಂದುವರೆಸುವುದೋ ಬೇಡವೋ ಎನ್ನುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪ ಸೋಮವಾರಕ್ಕೆ ಮುಂದೂಡಿದ್ದಾರೆ.

ಎಲ್ಲಾ ಶಾಸಕರ ಹಕ್ಕು ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಯಾವುದೇ ಪ್ರತಿಭಟನೆ ಮಾಡುವುದಿದ್ದರೆ ಹೊರಗೆ ಮಾಡಿಕೊಳ್ಳಿ. ವಿಧಾನಸಭೆಯಿಂದ ಹೊರಗೆ ಹೋಗಿ ಪ್ರತಿಭಟನೆ ಮಾಡಿಕೊಳ್ಳಿ. ಎಲ್ಲಾ ಶಾಸಕರ ಹಕ್ಕು ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ನಿಮ್ಮ ಧರಣಿಯಿಂದ ಇತರೆ ಶಾಸಕರಿಗೆ ತೊಂದರೆಯಾಗುತ್ತಿದೆ. ಕೋಟ್ಯಂತರ ಹಣ ಖರ್ಚು ಮಾಡಿ ಕಲಾಪ ನಡೆಸುತ್ತಿದ್ದೇವೆ. ಕೇವಲ ಒಂದೇ ವಿಚಾರಕ್ಕೆ ಕಲಾಪವನ್ನು ಹಾಳುಮಾಡಬೇಡಿ ಎಂದು ಪ್ರತಿಭಟನಾನಿರತ ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದಾರೆ.

ವಿಧಾನಸಭೆ: ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡ ಸ್ಪೀಕರ್

ಸದನದಲ್ಲಿ ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ ಮುಂದುವರಿದಿದ್ದು, ಸ್ಪೀಕರ್ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದ್ದಾರೆ. ಸದನದಲ್ಲಿ ಗದ್ದಲ, ಕೋಲಾಹಲ ಮುಂದುವರಿದಿದ್ದು, ಗದ್ದಲದ ನಡುವೆಯೇ ಪ್ರಶ್ನೋತ್ತರ ‌ಕಲಾಪ ಶುರುವಾಗಿದೆ.

ಕಲಾಪ ನಡೆಯಲು ಬಿಡಲ್ಲ ಎನ್ನುವುದು ಸರಿಯಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಕಲಾಪ ನಡೆಯಲು ಬಿಡಲ್ಲ ಎನ್ನುವುದು ಸರಿಯಲ್ಲ. ನಾವು ಹೇಳಿದ್ದೇ ನಡೆಯಬೇಕು ಎನ್ನುವುದು ಸರಿಯಲ್ಲ. ವಿಧಾನಸಭೆ ಪ್ರಜಾಪ್ರಭುತ್ವದ ದೇವಸ್ಥಾನವಾಗಿದೆ. ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಸಚಿವರ ರಾಜೀನಾಮೆಗೆ ಆಗ್ರಹಿಸಿ ಧರಣಿ, ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ಆದರೆ ಸದನದ ಹೊರಗೆ ಎಲ್ಲಿಬೇಕಾದರೂ ಪ್ರತಿಭಟನೆ ಮಾಡಿ. ಒಂದು ವಿಚಾರಕ್ಕಾಗಿ ಕಲಾಪ ಹಾಳುಮಾಡುವುದು ಸರಿಯಲ್ಲ. ಇದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಿ ಎಂದು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವಿಧಾನಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:
ರಾಜಕೀಯ ಪ್ರತಿಷ್ಠೆಗೆ ಕಲಾಪ ಆಹುತಿಯಾಗಿದೆ; ಕಲಾಪದಲ್ಲಿ ‘ಚುನಾವಣೆ ಅಜೆಂಡಾ’ ಇಟ್ಟುಕೊಳ್ಳಬಾರದು -ಸರಣಿ ಟ್ವೀಟ್ ಮೂಲಕ ಹೆಚ್ಡಿಕೆ ಆಕ್ರೋಶ

Viral Video: ಜೋರ್ಡಾನ್​ ಸಂಸತ್​ ಕಲಾಪದ ವೇಳೆ ಹೊಡೆದಾಡಿಕೊಂಡ ಸಂಸದರು; ವೈರಲ್ ಆಯ್ತು ವಿಡಿಯೋ

Published On - 1:04 pm, Fri, 18 February 22