TV9 Kannada News Live: ಚಾಲಕನಿಗೆ ಹಾರ್ಟ್​ ಅಟ್ಯಾಕ್, ತಪ್ಪಿದ ಬಸ್ ದುರಂತ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಕೊಡಗಿನಲ್ಲಿ ಚಾಲಕನಿಗೆ ಹೃದಯಾಘಾತವಾಗಿ ಬಸ್ ಅಪಘಾತ ಸಂಭವಿಸಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ನಟ ವಿಜಯ್ ಕಸರತ್ತು ಮಾಡುತ್ತಿದ್ದು, ಮ್ಯಾಜಿಕ್ ನಂಬರ್​ಗಾಗಿ ಪರದಾಡುತ್ತಿದ್ದಾರೆ. ಇನ್ನು ಜಾಗತಿಕ ಯುದ್ಧದ ಪರಿಣಾಮವಾಗಿ ಇಂಧನ ಬೆಲೆ ಏರಿಕೆಯಿಂದ ಪೀಣ್ಯ ಕೈಗಾರಿಕೆಗಳು ಮುಚ್ಚುವ ಭೀತಿ ಎದುರಾದ ಕುರಿತ ಮಾಹಿತಿಯ ಜೊತೆಗೆ ಇಂದಿನ ಪ್ರಮುಖ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ

TV9 Kannada News Live: ಚಾಲಕನಿಗೆ ಹಾರ್ಟ್​ ಅಟ್ಯಾಕ್, ತಪ್ಪಿದ ಬಸ್ ದುರಂತ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು
ಈ ಹೊತ್ತಿನ ಪ್ರಮುಖ ಸುದ್ದಿಗಳು

Updated on: May 08, 2026 | 9:42 AM

ಬೆಂಗಳೂರು, ಮೇ 08: ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ದುರ್ಘಟನೆ ಸಂಭವಿಸಿದೆ. ಬಸ್ ಚಲಾಯಿಸುತ್ತಿದ್ದ ವೇಳೆ ಖಾಸಗಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಗುದ್ದಿದರೂ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ 107 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ಶಾಸಕರ ಬೆಂಬಲಕ್ಕಾಗಿ ತೀವ್ರ ಕಸರತ್ತು ನಡೆಯುತ್ತಿದೆ. ಅದರ ಜೊತೆಗೆ ಜಾಗತಿಕ ಯುದ್ಧದ ಬಿಸಿ ಬೆಂಗಳೂರಿನ ಸಣ್ಣ ಕೈಗಾರಿಕೆಗಳಿಗೂ ತಟ್ಟಿದ್ದು, ಯುನಿಟ್​ಗಳು ಮುಚ್ಚುವ ಹಂತಕ್ಕೆ ತಲುಪಿವೆ.

ಮುಖ್ಯಾಂಶಗಳು

  • ಮಡಿಕೇರಿ ತಾಳತ್‌ಮನೆ ಬಳಿ ಚಾಲಕನಿಗೆ ಹೃದಯಾಘಾತವಾಗಿ ಸಾವು, ಕೂದಲೆಳೆ ಅಂತರದಲ್ಲಿ ಪಾರಾದ ಬಸ್ ಪ್ರಯಾಣಿಕರು.
  • ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕೇವಲ ಆರು ಶಾಸಕರ ಬೆಂಬಲದ ನಿರೀಕ್ಷೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ.
  • ಜಾಗತಿಕ ಯುದ್ಧದ ಬಿಕ್ಕಟ್ಟು ಮತ್ತು ಇಂಧನ ಬೆಲೆ ಏರಿಕೆಯಿಂದ ಪೀಣ್ಯದ ಸಾವಿರಾರು ಕೈಗಾರಿಕೆಗಳು ಮುಚ್ಚುವ ಭೀತಿಯಲ್ಲಿವೆ.

ಚಾಲಕನಿಗೆ ಹೃದಯಾಘಾತ, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ‘ಪೂರ್ಣಿಮಾ ಟ್ರಾವೆಲ್ಸ್’ ಬಸ್ ಚಲಿಸುತ್ತಿದ್ದಾಗ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲನೆ ವೇಳೆಯೇ ಚಾಲಕ ಸಾವನ್ನಪ್ಪಿದ್ದರೂ, ಬಸ್ ದೊಡ್ಡ ಪ್ರಪಾತಕ್ಕೆ ಬೀಳದೆ ದಿಣ್ಣೆಗೆ ಗುದ್ದಿದ್ದರಿಂದ ಭೀಕರ ದುರಂತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!

ಮ್ಯಾಜಿಕ್ ನಂಬರ್ ಬೆನ್ನತ್ತಿದ ದಳಪತಿ ವಿಜಯ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕಾಗಿದ್ದು, ವಿಜಯ್ ಪ್ರಸ್ತುತ 112 ಶಾಸಕರ (ಟಿವಿಕೆ 107 + ಕಾಂಗ್ರೆಸ್ 5) ಬೆಂಬಲ ಹೊಂದಿದ್ದಾರೆ. ಬಾಕಿ ಇರುವ 6 ಶಾಸಕರ ಬೆಂಬಲಕ್ಕಾಗಿ ತೀವ್ರ ಕಸರತ್ತು ನಡೆಯುತ್ತಿದೆ. ಇದರ ನಡುವೆ ಎಐಎಡಿಎಂಕೆಯ 28 ಶಾಸಕರನ್ನು ಪುದುಚೇರಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದ್ದು, ವಿಜಯ್‌ಗೆ ಬೆಂಬಲ ನೀಡುವ ಬಗ್ಗೆ ಪಳನಿಸ್ವಾಮಿ ಮೇಲೆ ಒತ್ತಡ ಹೆಚ್ಚಿದೆ. ಅತ್ತ ನಿರ್ಗಮಿತ ಸಿಎಂ ಎಂ.ಕೆ. ಸ್ಟಾಲಿನ್, ವಿಜಯ್ ಸರ್ಕಾರ ರಚಿಸಲಿ ನಾವು ಆರು ತಿಂಗಳು ತೊಂದರೆ ಕೊಡುವುದಿಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪೀಣ್ಯ ಕೈಗಾರಿಕಾ ವಲಯಕ್ಕೆ ಇಂಧನ ಬಿಸಿ: ಮುಚ್ಚುವ ಭೀತಿಯಲ್ಲಿ ಉದ್ಯಮಗಳು

ಜಾಗತಿಕ ಯುದ್ಧದ ಬಿಕ್ಕಟ್ಟು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೆ ಭೀಕರ ಪರಿಣಾಮ ಬೀರಿದೆ. ಸರ್ಕಾರಿ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕೈಗಾರಿಕೆಗಳು ಸಂಪೂರ್ಣವಾಗಿ ಖಾಸಗಿ ಏಜೆನ್ಸಿಗಳ ಮೇಲೆ ಅವಲಂಬಿತವಾಗಿವೆ. ಖಾಸಗಿಯಲ್ಲಿ ಸಿಲಿಂಡರ್ ಬೆಲೆ ಎರಡು ಪಟ್ಟು ಹೆಚ್ಚಾಗಿರುವುದು ಉತ್ಪಾದನಾ ವೆಚ್ಚವನ್ನು ಏರಿಕೆ ಮಾಡಿದೆ. ಇದರಿಂದಾಗಿ ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆಗಳು ಮತ್ತು ಕಟ್ಟಿಂಗ್ ಯೂನಿಟ್‌ಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಉತ್ಪಾದನಾ ವೆಚ್ಚ ಭರಿಸಲಾಗದೆ ಕೈಗಾರಿಕಾ ಮಾಲೀಕರು ಕಂಗಾಲಾಗಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇಂಧನ ಪೂರೈಕೆ ಸರಿಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 am, Fri, 8 May 26

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us