
ಬೆಂಗಳೂರು, ಜುಲೈ 22: ವಿದೇಶದಲ್ಲಿ ಹೆಚ್ಚಿನ ಸಂಬಳದ ಕೆಲಸದ ಆಮಿಷಕ್ಕೆ ಒಳಗಾಗಿ ಮಯನ್ಮಾರ್ನ ಚೀನಿ ಸೈಬರ್ ಗ್ಯಾಂಗ್ ಕೈಗೆ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗೆ ಕರೆತರಲಾಗಿದೆ. ಕರ್ನಾಟಕ ಸೈಬರ್ ಕಮಾಂಡ್, ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (I4C), ಜಾರಿ ನಿರ್ದೇಶನಾಲಯ (ED) ಹಾಗೂ ಮಯನ್ಮಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಜಂಟಿ ಕಾರ್ಯಾಚರಣೆಯ ಮೂಲಕ ಈ ರಕ್ಷಣಾ ಕಾರ್ಯ ನಡೆದಿದೆ.
ಕರ್ನಾಟಕ ಮೂಲದ ಯುವಕರಿಗೆ ಥೈಲ್ಯಾಂಡ್ನಲ್ಲಿ ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಸಂಬಂಧಿತ ಅತ್ಯುತ್ತಮ ಸಂಬಳದ ಉದ್ಯೋಗ ನೀಡುವುದಾಗಿ ಮಾನವ ಕಳ್ಳಸಾಗಣೆದಾರರು (Human Traffickers) ಆಮಿಷ ಒಡ್ಡಿದ್ದರು. ಆದರೆ, ಅಲ್ಲಿಗೆ ಕರೆದೊಯ್ದ ಬಳಿಕ ಯುವಕರನ್ನು ಅಕ್ರಮವಾಗಿ ಗಡಿ ದಾಟಿಸಿ ಮಯನ್ಮಾರ್ನಲ್ಲಿದ್ದ ‘ಚೀನೀ ಸೈಬರ್ ಸ್ಕ್ಯಾಮ್’ ಕೇಂದ್ರಕ್ಕೆ ತಳ್ಳಲಾಗಿತ್ತು. ಅಲ್ಲಿ ಈ ಯುವಕರ ಪಾಸ್ಪೋರ್ಟ್ ಹಾಗೂ ದಾಖಲೆಗಳನ್ನು ಕಸಿದುಕೊಂಡಿದ್ದ ಸಶಸ್ತ್ರ ಸಿಬ್ಬಂದಿ, ಜಾಗತಿಕ ಮಟ್ಟದಲ್ಲಿ ಆನ್ಲೈನ್ ಸೈಬರ್ ವಂಚನೆ (Cyber Fraud) ಹಾಗೂ ಕ್ರಿಪ್ಟೋ ಸ್ಕ್ಯಾಮ್ಗಳನ್ನು ಮಾಡುವಂತೆ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರು. ಕೆಲಸ ಮಾಡಲು ನಿರಾಕರಿಸಿದರೆ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.
ಸಂತ್ರಸ್ತ ಯುವಕರು ಹೇಗೋ ಮಾಡಿ ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿ ತಮಗಾಗುತ್ತಿರುವ ಅನ್ಯಾಯವನ್ನು ತಿಳಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ವಿದೇಶಾಂಗ ಸಚಿವಾಲಯ (MEA), ಸ್ಥಳೀಯ ಅಧಿಕಾರಿಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಇಡಿ ನೀಡಿದ ನಿಖರ ಮಾಹಿತಿ ಆಧಾರದ ಮೇಲೆ ತಕ್ಷಣ ಕರ್ನಾಟಕ ಸೈಬರ್ ಕಮಾಂಡ್, ಕೇಂದ್ರ ಸಂಸ್ಥೆಗಳು ಮತ್ತು ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಯುವಕರನ್ನು ಮುಕ್ತಗೊಳಿಸಿದೆ. ಇದೀಗ ಯುವಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದು, ಯುವಜನತೆ ವಿದೇಶಿ ಉದ್ಯೋಗಗಳ ಹೆಸರಿನಲ್ಲಿ ಬರುವ ನಕಲಿ ಏಜೆಂಟ್ಗಳ ಬಗ್ಗೆ ಎಚ್ಚರದಿಂದಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವಿದೇಶಗಳಲ್ಲಿ ಆಕರ್ಷಕ ಸಂಬಳ ನೀಡುವ ನಕಲಿ ಉದ್ಯೋಗ ಜಾಹೀರಾತುಗಳು ಮತ್ತು ಏಜೆಂಟರ ಬಗ್ಗೆ ಯುವಜನರು ತೀವ್ರ ಎಚ್ಚರ ವಹಿಸಬೇಕು. ಅಧಿಕೃತ ಸಂಸ್ಥೆಗಳ ಮೂಲಕ ಮಾತ್ರ ಉದ್ಯೋಗ ಪರಿಶೀಲನೆ ನಡೆಸುವಂತೆ ಕರ್ನಾಟಕ ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಾಂತಿ ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ