
ಬೆಂಗಳೂರು, ಆಗಸ್ಟ್ 29: “ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ತಮ್ಮ ವಿರುದ್ಧ ಪ್ರಮುಖ ಆರೋಪಗಳು ಕೇಳಿಬಂದಾಗ ಸ್ವತಃ ತನಿಖೆಗೆ ಆದೇಶಿಸಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಂತಹ ಮೌಲ್ಯಾಧಾರಿತ ರಾಜಕಾರಣಿ. ಅಧಿಕಾರಕ್ಕಿಂತ ನೈತಿಕತೆಯೇ ಮುಖ್ಯ ಎಂಬುದಕ್ಕೆ ನಿದರ್ಶನವಾಗಿದ್ದ ಮುತ್ಸದ್ದಿ ರಾಜಕಾರಣಿ ಇಂದಿನ ತಲೆಮಾರಿನವರಿಗೆ ದಾರಿದೀಪವಾಗಿದ್ದಾರೆ” ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.
ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿ, “ರಾಮಕೃಷ್ಣ ಹೆಗಡೆ ರಾಜಕಾರಣ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ನಿಷ್ಠೆಯ ಪಯಣ ಎಂಬ ನೈತಿಕ ಪಾಠ ಹೇಳಿದಂತಹ ರಾಜಕೀಯ ಗುರುವೂ ಆಗಿದ್ದಾರೆ” ಎಂದು ಬಣ್ಣಿಸಿದರು.
“ಬರೀ ರಾಜಕೀಯ ಮಾತ್ರವಲ್ಲ, ಸಾಹಿತ್ಯ, ಕಲೆ, ರಂಗಭೂಮಿಯಲ್ಲೂ ಆಸಕ್ತಿ ತೋರಿದ್ದ ರಾಮಕೃಷ್ಣ ಹೆಗಡೆ ಸಾಮಾಜಿಕ ಕಳಕಳಿ, ಬಡವರ ಏಳಿಗೆಗೆ ಪರಿಶ್ರಮ, ಯುವ ನಾಯಕತ್ವಕ್ಕೆ ಬೆಳೆಸಿದಂತಹ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ಅಸ್ಪೃಶ್ಯತೆ ನಿರ್ಮೂಲನೆಗೆ ಕಟಿಬದ್ಧತೆ ತೋರಿದಂತಹ ಧೀಮಂತ ರಾಜಕಾರಣಿ ಆಗಿದ್ದರೆಂದು” ಪ್ರಲ್ಹಾದ್ ಜೋಶಿ ಸ್ಮರಿಸಿದರು.
ರಾಮಕೃಷ್ಣ ಹೆಗಡೆ ಅವರನ್ನು ಆಡಳಿತ-ಅಧಿಕಾರಾವಧಿಯಲ್ಲಿ ಎಂದಿಗೂ ಪ್ರಾಮಾಣಿಕತೆಯ ದಾರಿಯಲ್ಲಿ ನಡೆದಂತಹ ಒಬ್ಬ ಮುತ್ಸದ್ದಿ ರಾಜಕಾರಣಿ ಎಂದೇ ಹೇಳಬಹುದು. ತತ್ವ, ಸಿದ್ಧಾಂತ ಮತ್ತು ಮೌಲ್ಯಾಧಾರಿತ ರಾಜಕಾರಣಕ್ಕೆ ಎಂದಿಗೂ ಧಕ್ಕೆ ತರದ ಅವರ ನಾಯಕತ್ವ, ಆದರ್ಶಗಳು ನಮಗೆಲ್ಲರಿಗೂ ಸದಾ ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ‘ರಾಹುಲ್ ಗಾಂಧಿಯ ಅಹಂಕಾರದಿಂದ ಇಡೀ ಅಧಿವೇಶನ ಹಾದಿ ತಪ್ಪಿತು’; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥರಾವ್ ಜೋಶಿ ಹಾಗೂ ರಾಮಕೃಷ್ಣ ಹೆಗಡೆ ಅವರಂತಹ ಮೇರು ವ್ಯಕ್ತಿತ್ವದ ನಾಯಕರ ಭಾಷಣಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಕೇಳಿ ಪ್ರೇರಿತನಾಗಿದ್ದೆ ಎಂದ ಸಚಿವ ಪ್ರಲ್ಹಾದ್ ಜೋಶಿ, ಇವರೆಲ್ಲರೂ ರಾಜಕೀಯ ಸಿದ್ಧಾಂತಗಳು ಭಿನ್ನ ವಿಭಿನ್ನವಾಗಿದ್ದರೂ ಮಾತುಗಾರಿಕೆ ಮತ್ತು ವ್ಯಕ್ತಿತ್ವ ಸರ್ವರಿಗೂ ಮಾದರಿಯಾಗಿದೆ ಎಂದರು.
ಕರ್ನಾಟಕ ಕಂಡ ಅತ್ಯಂತ ಧೀಮಂತ, ಮೌಲ್ಯಾಧಾರಿತ ಹಾಗೂ ಜನಪ್ರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹೊಸ ಆಡಳಿತಾತ್ಮಕ ಮೌಲ್ಯಗಳು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬುವ ಮೂಲಕ ಅವರು ನಾಡಿನ ವಿಕಾಸಕ್ಕೆ ಶ್ರಮಿಸಿದ ರೀತಿ ಇಂದಿನ ಯುವ ನಾಯಕರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬಸವರಾಜ ರಾಯರೆಡ್ಡಿ, ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಬಿ.ಎಲ್. ಶಂಕರ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Sat, 29 August 26