ಮಹಿಳೆಯರೇ ಎಚ್ಚರ: ಹೃದಯಘಾತಕ್ಕೆ ಕಾರಣವಾಗುತ್ತಿವೆ ಗರ್ಭ ನಿರೋಧಕ ಮಾತ್ರೆ
ಮಹಿಳೆಯರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಗರ್ಭನಿರೋಧಕ ಮಾತ್ರೆಗಳ ಸೇವನೆ ಕೂಡ ಕಾರಣ ಎಂದು ಜಯದೇವ ಆಸ್ಪತ್ರೆಯ ತಜ್ಞರ ಅಧ್ಯಯನದಲ್ಲಿ ಕಂಡುಬಂದಿದೆ.ರಕ್ತ ಹೆಪ್ಪುಗಟ್ಟುವಿಕೆ ಮತ್ತು ಇತರ ಅಡ್ಡಪರಿಣಾಮಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ ಎಂದು ತಜ್ಞರು ಹೇಳಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.

ಬೆಂಗಳೂರು, ಜುಲೈ 3: ಒಂದೆಡೆ ಹಾಸನ ಸೇರಿದಂತೆ ಕರ್ನಾಟಕದ (Karnataka) ವಿವಿಧ ಜಿಲ್ಲೆಗಳಲ್ಲಿ ಯುವ ಜನಾಂಗ ಹೃದಯಾಘಾತದಿಂದ (Heart Attack) ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದರೆ, ಮತ್ತೊಂದೆಡೆ ಇದೀಗ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಗಂಭೀರವಾದ ಕಾರಣವೊಂದನ್ನು ಜಯದೇವ ಆಸ್ಪತ್ರೆಯ (Jayadeva Hospital) ತಜ್ಞರು ಕಂಡುಕೊಂಡಿದ್ದಾರೆ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿರುವ ತಜ್ಞರು, ಅದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಈ ವರದಿಯಿಂದ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
ಸುಲಭವಾಗಿ ಸಿಗುತ್ತದೆ ಎಂದು ಸ್ತ್ರೀಯರು ತೆಗೆದುಕೊಳ್ಳುವ ಗರ್ಭನಿರೋಧಕ ಮಾತ್ರೆ ಕೂಡ ಜೀವಕ್ಕೆ ಕುತ್ತು ತರಬಹುದು. ಈ ಗುಳಿಗೆ ಸೇವನೆ ಕೂಡ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ಜಯದೇವ ತಜ್ಞರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಯುವ ವಯಸ್ಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಗರ್ಭ ನಿರೋಧಕ ಮಾತ್ರೆ ಸೇವನೆ ಕೂಡ ಮಹಿಳೆಯರ ಹೃದಯಸ್ಥಂಭನಕ್ಕೆ ಕಾರಣವಾಗುತ್ತಿದೆ. ಗರ್ಭ ನಿರೋಧಕ ಔಷಧಗಳ ಬಳಕೆಯಿಂದ ಮಹಿಳೆಯರಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ಕಂಡು ಬರುತ್ತಿದೆ. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಅಷ್ಟೇ ಅಲ್ಲದೆ, ಗರ್ಭ ನಿರೋಧಕ ಮಾತ್ರೆ ಹಾಗೂ ನೋವು ನಿವಾರಕಗಳನ್ನು ಆದಷ್ಟು ಕಡಿಮೆ ಬಳಸುವಂತೆ ಮಹಿಳೆಯರಿಗೆ ಜಯದೇವ ಆಸ್ಪತ್ರೆಯ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಮತ್ತೊಂದೆಡೆ, ಗರ್ಭ ನಿರೋಧಕ ಮಾತ್ರೆ ಹಾಗೂ ನೋವು ನಿವಾರಕಗಳ ಬಳಕೆ ಸಂಬಂಧ ಸೂಕ್ತ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ತಜ್ಞರು ನಿರ್ಧರಿಸಿದ್ದಾರೆ.
ಕರ್ನಾಟಕದಲ್ಲಿ ಮುಂದುವರಿದ ಹೃದಯಾಘಾತ ಸರಣಿ
ರಾಜ್ಯದಲ್ಲಿ ಹೃದಯಾಘಾತದಿಂದ ಯುವ ಜನರು ಸಾವನ್ನಪ್ಪುತ್ತಿರುವುದು ಮುಂದುವರಿದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಿಂಗನವಾಡಿ ಗ್ರಾಮದಲ್ಲಿ ಸಂತೋಷ್ ಇಂಡಿ (35) ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಜಮೀನಿನಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸಂಭವಿಸುತ್ತಿರುವ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಐಸಿಎಂಆರ್
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಲ್ಲಾರೆ ಗ್ರಾಮದಲ್ಲಿ ಗ್ರಾ.ಪಂ. ಸದಸ್ಯ ಸಂತೋಷ್ (41) ಹೃದಯಾಘಾತದಿಂದ ಅಸುನೀಗಿದ್ದಾರೆ. ರಾತ್ರಿ ಮಲಗಿದ್ದಲ್ಲಿಯೇ ಸಂತೋಷ್ಗೆ ಹೃದಯಾಘಾತ ಸಂಭವಿಸಿತ್ತು. ಇದರೊಂದಿಗೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.







