ಪಾಳು ಬೀಳುತ್ತಿದೆ 13 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್​​ ಗ್ರೌಂಡ್​​ ಮಾರುಕಟ್ಟೆ: ನೀರಲ್ಲಿ ಹೋಮವಾಯ್ತಾ ಸಾರ್ವಜನಿಕರ ತೆರಿಗೆ ಹಣ?

ಬೆಂಗಳೂರಿನ ವಿಜಯನಗರದಲ್ಲಿ 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್ ಅಂಡರ್​​ ಗ್ರೌಂಡ್​ ಮಾರುಕಟ್ಟೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪಾಳುಬಿದ್ದಿದೆ. ಉದ್ಘಾಟನೆಯಾಗಿ 2 ವರ್ಷ ಕಳೆದರೂ ಟೆಂಡರ್ ಪ್ರಕ್ರಿಯೆ ಮುಗಿಯದ ಕಾರಣ 80ಕ್ಕೂ ಹೆಚ್ಚು ಮಳಿಗೆಗಳು ಧೂಳು ತಿನ್ನುತ್ತಿವೆ. ಮಾರುಕಟ್ಟೆಯ ಒಳಗಿರುವ ಲಿಫ್ಟ್, ಎಸ್ಕಲೇಟರ್‌ಗಳು ಉದ್ಘಾಟನೆಯಾದದಿನದಿಂದ ಬಂದ್ ಆಗಿವೆ. ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿರುವ ಆರೋಪ ಕೇಳಿಬಂದಿದೆ.

ಪಾಳು ಬೀಳುತ್ತಿದೆ 13 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್​​ ಗ್ರೌಂಡ್​​ ಮಾರುಕಟ್ಟೆ: ನೀರಲ್ಲಿ ಹೋಮವಾಯ್ತಾ ಸಾರ್ವಜನಿಕರ ತೆರಿಗೆ ಹಣ?
ಪಾಳು ಬೀಳುತ್ತಿರುವ ಅಂಡರ್​​ ಗ್ರೌಂಡ್​​ ಮಾರುಕಟ್ಟೆ
Image Credit source: Tv9 Kannada

Updated on: Jul 12, 2026 | 7:25 AM

ಮುಖ್ಯಾಂಶಗಳು

  • ವಿಜಯನಗರದಲ್ಲಿ ಪಾಳು ಬೀಳುತ್ತಿರುವ ಹೈಟೆಕ್​​ ಮಾರುಕಟ್ಟೆ
  • 13 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್​​ ಗ್ರೌಂಡ್​​ ಮಾರ್ಕೆಟ್​​
  • ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಗೆ ವ್ಯಾಪಾರಿಗಳಿಂದ ಹಿಡಿ ಶಾಪ

ಬೆಂಗಳೂರು, ಜುಲೈ 12: ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಬೆಂಗಳೂರಿನ (Bengaluru) ವಿಜಯನಗರದಲ್ಲಿ (Vijayanagara) ನಿರ್ಮಿಸಲಾಗಿರುವ ಅಂಡರ್​​ ಗ್ರೌಂಡ್​​ ಮಾರುಕಟ್ಟೆ (Underground Market) ಉದ್ಘಾಟನೆಯಾಗಿ ಬರೋಬ್ಬರಿ 2 ವರ್ಷಗಳೇ ಕಳೆದರೂ ವ್ಯಾಪಾರಿಗಳ ಬಳಕೆಗೆ ಮಾತ್ರ ಇನ್ನೂ ಲಭ್ಯವಾಗಿಲ್ಲ. ಟೆಂಡರ್​​ ಪ್ರಕ್ರಿಯೆ ಮುಗಿದಿರುವ ಕಾರಣ 80ಕ್ಕೂ ಹೆಚ್ಚು ಸುಸಜ್ಜಿತ ಮಳಿಗೆಗಳು ಪಾಳು ಬೀಳುತ್ತಿವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಗೆ ವ್ಯಾಪಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನೂ ನಡೆಯದ ಟೆಂಡರ್​​ ಪ್ರಕ್ರಿಯೆ

ದೆಹಲಿಯ ಪಾಲಿಕಾ ಬಜಾರ್ ಮಾದರಿಯಲ್ಲಿ ಹೈಟೆಕ್ ಭೂಗತ ಮಾರುಕಟ್ಟೆ ಮಾಡುತ್ತೇವೆ ಎಂದು ಬರೋಬ್ಬರಿ 13 ಕೋಟಿ ರೂಪಾಯಿ ಹಣವನ್ನ ಬಳಸಿ ಈ ಭೂಗತ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಯೂ ನಡೆದಿರುವ ಕಾರಣ ಮಾರ್ಕೆಟ್​​ ವ್ಯಾಪಾರಿಗಳ ಬಳಕೆಗೆ ಲಭ್ಯವಾಗಬೇಕಿತ್ತು. ಆದರೆ ಕಮಿಷನ್ ದಂಧೆಯೋ ಅಥವಾ ಅಧಿಕಾರಿಗಳ ಜಡ್ಡುಗಟ್ಟಿದ ಜಿಡ್ಡುತನವೋ ಗೊತ್ತಿಲ್ಲ, ಇಷ್ಟೂ ದಿನವಾದ್ರೂ ಒಂದು ಟೆಂಡರ್ ಪ್ರಕ್ರಿಯೆಯನ್ನು ಮುಗಿಸಲು ಈ ಮಹಾಶಯರಿಗೆ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ

ವ್ಯಾಪಾರಿಗಳ ಆಕ್ರೋಶ

ನಗರದಲ್ಲಿ ಸದ್ಯ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ದೊಡ್ಡ ಮಟ್ಟದಲ್ಲಿ ನಡೀತಿದೆ. ಹೊಟ್ಟೆಪಾಡಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡಿರೋ ಬಡವರ ಅಂಗಡಿಗಳನ್ನು ಕಿತ್ತೆಸೆಯಲಾಗುತ್ತಿದೆ. ಆದರೆ, ಅದೇ ವ್ಯಾಪಾರಿಗಳಿಗೆ ಆಸರೆಯಾಗಬೇಕಿದ್ದ ವಿಜಯನಗರದಲ್ಲಿ ನಿರ್ಮಿಸಿರುವ ಅಂಡರ್​​ ಗ್ರೌಂಡ್​​ ಮಾರ್ಕೆಟ್​​ನ ಸುಸಜ್ಜಿತ ಮಳಿಗೆಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಉಪಯೋಗಕ್ಕೆ ಬಾರದಂತೆ ಬಿದ್ದಿವೆ. ಮಾರುಕಟ್ಟೆಯ ಒಳಗಿರುವ ಲಿಫ್ಟ್, ಎಸ್ಕಲೇಟರ್‌ಗಳು ಉದ್ಘಾಟನೆಯಾದದಿನದಿಂದ ಬಂದ್ ಆಗಿವೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಕಾರಣ ಇಡೀ ಮಾರುಕಟ್ಟೆ ಈಗ ಪಾಳುಬೀಳುವ ಸ್ಥಿತಿಗೆ ತಲುಪಿದ್ದು, ವ್ಯಾಪಾರಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ಇನ್ನಾದರೂ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು ಎಚ್ಚೆತ್ತುಕೊಂಡು ಟೆಂಡರ್ ಪ್ರಕ್ರಿಯೆ ಮುಗಿಸುತ್ತಾರಾ? ಅಥವಾ ಈ 13 ಕೋಟಿ ವೆಚ್ಚದ ಮಾರುಕಟ್ಟೆ ಕೇವಲ ಧೂಳು ತಿನ್ನುವ ಶೋಕೇಸ್ ಆಗಿ ಉಳಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:30 am, Sun, 12 July 26

Follow Us