
ಬೀದರ್, ಮೇ 26: ವೈದ್ಯೋ ನಾರಾಯಣೋ ಹರಿಃ ಅಂದರೆ ವೈದ್ಯನು ಸಾಕ್ಷಾತ್ ಭಗವಂತನ (ನಾರಾಯಣನ) ಸ್ವರೂಪ ಎಂಬ ಮಾತಿದೆ. ಎಂತಹ ಕಷ್ಟ ಕಾಲದಲ್ಲೂ ಮುಷ್ಯನ ಜೀವ ಉಳಿಸಬಹುದಾದ ಶಕ್ತಿ ವೈದ್ಯರಿಗಿರುವ ಕಾರಣ ಅವರಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಆದರೆ ಇದೇ ಪವಿತ್ರವಾದ ವೈದ್ಯಕೀಯ ವೃತ್ತಿಯನ್ನು ಇತ್ತೀಚೆಗೆ ಕೆಲವರು ಹಣ ಮಾಡುವ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ರೋಗಿಗೆ ಏನಾದರೂ ಪರವಾಗಿಲ್ಲ ನಮಗೆ ದುಡ್ಡಾದರೆ ಸಾಕು ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಹ ಘಟನೆಯೊಂದು ಬೀದರ್ನಲ್ಲಿ ನಡೆದಿದೆ.
ಬೀದರ್ ತಾಲೂಕಿನ ಮನ್ನಾಖೇಳಿ ಗ್ರಾಮದಲ್ಲಿರುವ ಸೇಡಂಕರ್ ಆಸ್ಪತ್ರೆ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಆಪರೇಷನ್ ಮಾಡದೆ ಮಾಡಿದ್ದೇವೆಂದು ದುಡ್ಡು ಪಡೆದಿದ್ದಾರೆ ಎಂದು ದೂರಲಾಗಿದೆ. ರೋಗಿಗೆ ಕೇವಲ ಬ್ಯಾಂಡೇಜ್ ಸುತ್ತಿ 37 ಸಾವಿರ ರೂ. ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಬುಜ ನೋವಾಗುತ್ತಿದೆ ಎಂದು ಸ್ಕ್ಯಾನ್ ಮಾಡಿಸಿದಾಗ ಆಪರೇಷನ್ ಮಾಡದೆ ಇರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ; ಹನಿ ನೀರಿಗೂ ಜನರ ಪರದಾಟ!
ಬೀದರ್ ತಾಲೂಕಿನ ಬಸಲಾಪುರ ಗ್ರಾಮದ ಪ್ರಜ್ವಲ್ ಎಂಬವರ ಬುಜದ ಎಲಬು ರಸ್ತೆ ಅಪಘಾತದಲ್ಲಿ ಮುರಿದಿತ್ತು. ಹೀಗಾಗಿ ಚಿಕಿತ್ಸೆಗೆಂದು ತೆರಳಿದ್ದಾಗ ಆಪರೇಷನ್ ಮಾಡಿ ಮುರಿದಿದ್ದ ಎಲುಬಿಗೆ ರಾಡ್ ಹಾಕಬೇಕು ಎಂದು ವೈದ್ಯರು ತಿಳಿಸಿದ್ದರು. ಅದರಂತೆ 37 ಸಾವಿರ ರೂಪಾಯಿಯನ್ನು ಕಟ್ಟಿಸಿಕೊಂಡಿದ್ದರು. ಆದರೆ ಆಪರೇಷನ್ ಮಾಡದೆ ಪ್ರಜ್ವಲ್ ಕೈಗೆ ಹಾಗೇ ಬ್ಯಾಂಡೇಜ್ ಸುತ್ತಲಾಗಿದೆ. ಆಪರೇಷನ್ ಆದಮೇಲೂ ಬುಜ ನೋವಾಗುತ್ತಿದ್ದ ಹಿನ್ನೆಲೆ ಸ್ಕ್ಯಾನಿಂಗ್ ಮಾಡಿಸಿದಾಗ ಆಪರೇಷನ್ ಮಾಡದೆ ವೈದ್ಯರು ಸುಳ್ಳು ಹೆಳಿರುವುದು ಗೊತ್ತಾಗಿದೆ. ಮುರಿದಿದ್ದ ಬುಜದ ಎಲುಬು ಹಾಗೇ ಇದೆ ಎನ್ನಲಾಗಿದ್ದು, ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:17 pm, Tue, 26 May 26