ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಗಲ್ಫ್ ರಾಷ್ಟ್ರಗಳಿಗೆ ಈರುಳ್ಳಿ ರಫ್ತು ಸ್ಥಗಿತಗೊಂಡಿದೆ. ಇದರಿಂದ ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕಿಳಿದಿದೆ. ಭಾಲ್ಕಿ ತಾಲೂಕಿನ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದು, ಎಕರೆಗೆ 50-55 ಸಾವಿರ ಖರ್ಚು ಮಾಡಿ ಬೆಳೆದ ಈರುಳ್ಳಿಗೆ ಕೆ.ಜಿ.ಗೆ ಕೇವಲ 4-6 ರೂ. ಸಿಗುತ್ತಿದೆ. ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ರೈತರು ಕಟಾವು ವೆಚ್ಚವೂ ಸಿಗದೆ ಕಂಗಾಲಾಗಿದ್ದಾರೆ.

ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ
ಸಾಂದರ್ಭಿಕ ಚಿತ್ರ
Image Credit source: naijaolofofo.com
Edited By:

Updated on: Mar 27, 2026 | 4:19 PM

ಬೀದರ್​​, ಮಾರ್ಚ್​​ 27: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶ ಸೇರಿದಂತೆ ರಾಜ್ಯದ ಹಲವು ಉದ್ಯಮಗಳು ಈಗಾಗಲೇ ತತ್ತರಿಸಿ ಹೋಗಿವೆ. ಈ ನಡುವೆ ವಾರ್​​ ಎಫೆಕ್ಟ್​​ ಅನ್ನದಾತರ ಕೈಸುಡಲೂ ಆರಂಭಿಸಿದ್ದು, ಬೀದರ್​​ನಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆ ಅವರ ಕಣ್ಣಲ್ಲೇ ಈಗ ನೀರು ತರಿಸುತ್ತಿದೆ. ಯುದ್ಧದ ಹಿನ್ನೆಲೆ ಗಲ್ಫ್​​ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ರಫ್ತು ನಿಂತಿರುವ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕೆ.ಜಿ. ಈರುಳ್ಳಿ 4ರಿಂದ 6 ರೂಪಾಯಿವರೆಗೆ ಮಾರಾಟವಾಗುತ್ತಿರುವ ಕಾರಣ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರೈತರಿದ್ದು, ಒಂದೇ ಗ್ರಾಮದಲ್ಲಿ 300 ಎಕರೆಗೂ ಅಧಿಕ ಜಾಗದಲ್ಲಿ ಬೆಳೆ ಬೆಳೆಯಲಾಗುತ್ತೆ. ಪ್ರತಿವರ್ಷ 3 ಸಾವಿರಕ್ಕೂ ಅಧಿಕ ಕ್ವಿಂಟಾಲ್​​ ಈರುಳ್ಳಿ ಹೈದ್ರಾಬಾದ್​​​ ಮೂಲಕ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಈಗ ಯುದ್ಧ ಇದರ ಮೇಲೆ ಪರಿಣಾಮ ಬೀರಿದ್ದು, ಲಾಭ ಹಾಗಿರಲಿ ಕಟಾವು ಮಾಡಿದ ಕರ್ಚೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈರುಳ್ಳಿ ಕೀಳೋದಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಬರಬೇಕೆಂದರೆ ಅವರಿಗೆ ಕೈ ತುಂಬ ಹಣ ನೀಡಲೇ ಬೇಕು. ಆದರೆ ಬೆಲೆ ಇಲ್ಲದ ಕಾರಣ ಕೆಲ ರೈತರು ಬೆಳೆಯನ್ನು ಮಾರುಕಟ್ಟೆಗೂ ಕೊಂಡೊಯ್ಯದೆ ಹಳ್ಳಿಗಳಲ್ಲಿ ವಿತರಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕೇಳೋರಿಲ್ಲ ಬೀದರ್​​ ರೈತರ ಗೋಳು; ಬೆಳೆ ವಿಮೆ ಹೆಸರಲ್ಲಿ ಭಾರೀ ಮೋಸ

ಚುನಾವಣೆಯ ಸಮಯದಲ್ಲಿ ಮನೆ ಮನೆಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ರೈತರ ಸಂಕಷ್ಟ ಕೇಳಿಸುತ್ತಿಲ್ಲ. ನಮ್ಮ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿ ಬೆಳೇಯನ್ನೇ ನಂಬಿ ಬದುಕಿದ್ದೇವೆ. ಬೆಲೆ ಏರಬಹುದೆಂಬ ನಿರೀಕ್ಷೆಯಲ್ಲಿ ಹಲವು ರೈತರು ಬೆಳೆಯನ್ನು ಹಾಗೆಯೇ ಇಟ್ಟುಕೊಂಡಿದ್ದು, ಮುಂದೇನು ಎಂಬುದು ತಿಳಿಯದಂತಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಬೇಕಾದರೆ 50 ರಿಂದ 55 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್​​ಗೆ 400-600 ರೂಪಾಯಿಗೆ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ. ಮೂರುವರೆ ತಿಂಗಳುಗಳ ಕಾಲ ಹಗಲು-ರಾತ್ರಿ ಎನ್ನದೆ ದುಡಿದು ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ ಎಂಬುದು ರೈತರ ಅಳಲು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us