ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಾಗ್ದಾಳಿ
ನೀವು ಬೆಳಗಾವಿಗೆ ಬರಬೇಡಿ, ನಿಮಗೆ ವೋಟ್ ಹಾಕಲ್ಲ. ಕಾಂಗ್ರೆಸ್ನವರೇ ವಾಪಸ್ ಹೋಗಿ ಎಂದು ಕೈ ಪಾಳಯದ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ: ಏಪ್ರಿಲ್ 7ರಂದು ಬೆಳಗಾವಿ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಒಂದೆಡೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಕಡೆಗೆ ಮತ ಸೆಳೆಯಲು ಯತ್ನಿಸಿದರೆ ಮತ್ತೊಂದೆಡೆ ಬಿಜೆಪಿ ಪರ ನಾಯಕರು ಹೋರಾಟ ಮಾಡುತ್ತಿದ್ದಾರೆ. ಬೆಳಗಾವಿಯ ಧರ್ಮನಾಥ್ ಭವನದಲ್ಲಿ ಇಂದು (ಏಪ್ರಿಲ್ 4) ಬಿಜೆಪಿ ಪ್ರಚಾರ ಸಭೆ ಕೈಗೊಂಡಿದ್ದು, ಸಚಿವ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದಾರೆ.
ಸುರೇಶ್ ಅಂಗಡಿ ನಮ್ಮನ್ನು ಅಗಲಿ ಹೋಗಿದ್ದಾರೆ. ಆದರೆ, ಅವರು ಮಾಡಿದ ಸಾಧನೆ ನಮ್ಮ ಕಣ್ಣಮುಂದಿದೆ. ಕಾಂಗ್ರೆಸ್ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರು ಅದ್ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬರ್ತಿದ್ದಾರೋ ಗೊತ್ತಿಲ್ಲ. ಅವರು ಬೆಳಗಾವಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಶೆಟ್ಟರ್ ಪ್ರಶ್ನೆಮಾಡಿದ್ದಾರೆ.
ನೀವು ಬೆಳಗಾವಿಗೆ ಬರಬೇಡಿ, ನಿಮಗೆ ವೋಟ್ ಹಾಕಲ್ಲ. ಕಾಂಗ್ರೆಸ್ನವರೇ ವಾಪಸ್ ಹೋಗಿ ಎಂದು ಕೈ ಪಾಳಯದ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ನ ಒಬ್ಬರು, ಕಾಂಗ್ರೆಸ್ನ ಒಬ್ಬ ಸಂಸದರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಹೇಳ್ತಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ನಿಮ್ಮಲ್ಲಿ ಯಾರು ಸಿಎಂ ಆಗ್ತೀರೆಂದು ಕ್ಲಿಯರ್ ಮಾಡಿಕೊಳ್ಳಿ ಎಂದು ಶೆಟ್ಟರ್ ಕುಟುಕಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ 7ರಂದು ಒಂದು ದಿನ ಈ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾರೆ. ಐದು ಲಕ್ಷಕ್ಕೂ ಹೆಚ್ಚು ಮತಗಳಿಂದ ನಮ್ಮ ಅಭ್ಯರ್ಥಿ ಗೆಲ್ಲಿಸುವ ವಿಶ್ವಾಸವಿದೆ. ಮುಂದೆ ಬರುವ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೊನ್ನೆಯಾಗಲಿದೆ. ಕಾಂಗ್ರೆಸ್ ಸದ್ಯ ಒಡೆದ ಮನೆಯಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್, ಎಸ್ಐಟಿ ಸರಿಯಾದ ರೀತಿಯಲ್ಲಿ ಪಾರದರ್ಶಕ ಕೆಲಸ ಮಾಡ್ತಿದೆ. ಎಸ್ಐಟಿ ಮೇಲೆ ಯಾವುದೇ ಸಂಶಯ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಎಲ್ಲ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಿದ್ದರಾಮಯ್ಯ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರದ ವಿರುದ್ಧ ಮಾತನಾಡಲು ವಿಪಕ್ಷಗಳಿಗೆ ವಿಷಯವಿಲ್ಲ. ಹೀಗಾಗಿ ಆಡಳಿತ ಯಂತ್ರ ಕುಸಿಯುತ್ತಿದೆ ಎಂದು ಹೇಳುತ್ತಿದ್ದಾರೆ. ಮೊನ್ನೆ ಬಜೆಟ್ ಅಧಿವೇಶನದಲ್ಲಿ ಭಾಷಣ, ಚರ್ಚೆ ಮಾಡಲಿಲ್ಲ. ಜನಪರವಾದ ಧ್ವನಿ ಎತ್ತುವ ಕೆಲಸವನ್ನು ವಿಪಕ್ಷ ಮಾಡಲಿಲ್ಲ. ಯಾವುದೋ ವಿಚಾರಕ್ಕೆ ಸದನದ ಬಾವಿಗಿಳಿದು ಧರಣಿ ಮಾಡಿದ್ರು. ಸಿದ್ದರಾಮಯ್ಯ ಕಲಾಪವನ್ನು ಹಾಳು ಮಾಡಿದರು ಎಂದು ಶೆಟ್ಟರ್ ಟೀಕಿಸಿದ್ದಾರೆ.
ಹಸೀಸುಳ್ಳು ಹೇಳೋದನ್ನು ನಿಲ್ಲಿಸಿ, ಇಲ್ಲದಿದ್ದರೆ ಜನ ನಿಮ್ಮನ್ನು ನಂಬುವುದಿಲ್ಲ. ಬಿಜೆಪಿಯಲ್ಲಿ ಎಲ್ಲ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿಲ್ಲ. ಸಚಿವ ಸ್ಥಾನದಿಂದ ಈಶ್ವರಪ್ಪ ವಜಾಗೆ ಡಿಕೆಶಿ ಆಗ್ರಹ ವಿಚಾರವಾಗಿ, ಹೀಗೆ ಕೇಳಲು ಡಿ.ಕೆ.ಶಿವಕುಮಾರ್ಗೆ ಯಾವ ನೈತಿಕತೆ ಇದೆ ಎಂದು ಬೆಳಗಾವಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ – ಸಚಿವ ನಿರಾಣಿ ಮಧ್ಯೆ ಪರಸ್ಪರ ವಾಗ್ಧಾಳಿ ವಿಚಾರವಾಗಿ ಮಾತನಾಡಿದ ಶೆಟ್ಟರ್, ಈ ಕುರಿತು ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ ಶಾಸಕರು, ಸಚಿವರು ಕೆಲಸ ಮಾಡ್ತಿದಾರೆ. ಸುಮ್ಮನೇ ಬೇರೆ ಬೇರೆ ವಿಚಾರ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ಯಾವುದೂ ಅಸಮಾಧಾನ ಇಲ್ಲ ಎಲ್ಲರೂ ಒಗ್ಗಟ್ಟಾಗಿ ಯಡಿಯೂರಪ್ಪ ಜತೆಗಿದ್ದೀವಿ ಎಂದು ತಿಳಿಸಿದ್ದಾರೆ.
ಮಂಗಳಾ ಅಂಗಡಿ ಭಾವುಕ ಸುರೇಶ್ ಅಂಗಡಿ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಸರ್ಕಾರ ಎಲ್ಲ ಸಮುದಾಯದ ಪರ ಒಳ್ಳೆಯ ಕೆಲಸ ಮಾಡ್ತಿದೆ. ಕೊರೊನಾ ವೇಳೆ ಮನೆಯಲ್ಲಿ ಇರಿ ಎಂದು ಹೇಳಿದ್ದೆವು. ನಮ್ಮ ಮಾತು ಕೇಳದೆ ಸುರೇಶ್ ಅಂಗಡಿ ಸಂಚಾರ ಮಾಡಿದ್ರು. ಅವರು ದೆಹಲಿಗೆ ಹೋಗುವ ಸಂದರ್ಭದಲ್ಲಿ ಹುಷಾರಿರಲಿಲ್ಲ. ಆದರೂ ನಮಗೂ ಧೈರ್ಯ ಹೇಳಿ ದೆಹಲಿಗೆ ಹೋಗಿದ್ದರು ಎಂದು ಸುರೇಶ್ ಅಂಗಡಿ ನೆನೆಯುತ್ತಾ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಭಾವುಕರಾಗಿದ್ದಾರೆ. ಸುರೇಶ್ ಅಂಗಡಿಯನ್ನು 4 ಬಾರಿ ಆಯ್ಕೆ ಮಾಡಿದ್ದೀರಿ. ನನ್ನನ್ನೂ ಒಮ್ಮೆ ಗೆಲ್ಲಿಸಿ ಎಂದು ಮಂಗಳಾ ಅಂಗಡಿ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ಸೆಲೆಬ್ರಿಟಿಗಳ ಬರ್ತ್ ಡೇ ವಿಶ್ ಮಾಡಲು ಸಮಯವಿದೆ, ರೈತರಿಗಾಗಿ ಸಮಯವಿಲ್ಲ: ಸತೀಶ್ ಜಾರಕಿಹೊಳಿ
Published On - 6:32 pm, Sun, 4 April 21