
ಬೆಂಗಳೂರು, ಜೂನ್ 20: ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ, ಶಾಸಕರು (ಮತದಾರರ ನೆಲೆಯಲ್ಲಿ) ವರ್ತಿಸಬೇಕಾದ ನಿಯಮಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ರಾಜಾಜಿನಗರ ಕ್ಷೇತ್ರದ ಬಿಜೆಪಿ (BJP) ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar) ಪ್ರಶ್ನೆ ಮಾಡಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಈ ನಿಯಮಾವಳಿಗಳ ಹಿಂದಿರುವ ಅಸಲಿ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಶಾಸಕರ ಮತದಾನದ ದ್ವಂದ್ವ ನೀತಿ ಬಗ್ಗೆ ಪ್ರಶ್ನೆ.
ರಾಜ್ಯಸಭೆಯಲ್ಲಿ ಬಹಿರಂಗ, ಪರಿಷತ್ತಿನಲ್ಲಿ ಗೌಪ್ಯ ಮತದಾನ.
ಗೊಂದಲಕ್ಕೆ ಸ್ಪಷ್ಟೀಕರಣ ಕೋರಿ ಸಿಇಒಗೆ ಪತ್ರ.
ಇತ್ತೀಚೆಗೆ ನಮ್ಮ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಹಾಗೂ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಎರಡೂ ಚುನಾವಣೆಗಳಿಗೂ ವಿಧಾನಸಭಾ ಸದಸ್ಯರೇ (ಶಾಸಕರು) ಮತದಾರರಾಗಿದ್ದಾರೆ. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಮತ ಚಲಾಯಿಸುವಾಗ ತಾವು ಗುರುತು ಮಾಡಿದ ಮತಪತ್ರವನ್ನು ಅಲ್ಲಿ ಕುಳಿತಿರುವ ತಮ್ಮ ಪಕ್ಷದ ಏಜೆಂಟರಿಗೆ ಕಡ್ಡಾಯವಾಗಿ ತೋರಿಸಿ ಹಾಕಬೇಕಿರುತ್ತದೆ. ಆದರೆ, ಅದೇ ವಿಧಾನ ಪರಿಷತ್ ಚುನಾವಣೆಯಲ್ಲಿ ಇದೇ ಶಾಸಕರಿಗೆ ಗೌಪ್ಯ ಮತದಾನದ ಸೌಲಭ್ಯವನ್ನು ನೀಡಲಾಗಿರುತ್ತದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನಾನು ಬರೆದಿರುವ ಪತ್ರ. pic.twitter.com/CMT2JPuRGL
— S.Suresh Kumar (@nimmasuresh) June 20, 2026
ಒಂದೊಮ್ಮೆ ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ಆಯ್ಕೆಯಾಗದೇ ಹೋಗಿದ್ದರೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಎರಡೂ ಚುನಾವಣೆಗಳು ಒಂದೇ ದಿನ ನಡೆಯುತ್ತಿದ್ದವು. ಅಂತಹ ಸಂದರ್ಭದಲ್ಲಿ ಅದೇ ವಿಧಾನಸಭಾ ಸದಸ್ಯರು ರಾಜ್ಯಸಭೆಗೆ ಮತ ಹಾಕುವಾಗ ತಮ್ಮ ಏಜೆಂಟರಿಗೆ ಬ್ಯಾಲೆಟ್ ಪೇಪರ್ ತೋರಿಸಬೇಕಾಗುತ್ತದೆ ಮತ್ತು ಅದೇ ದಿನ ವಿಧಾನ ಪರಿಷತ್ತಿಗೆ ಮತ ಚಲಾಯಿಸುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಒಂದೇ ದಿನ, ಒಂದೇ ಮತದಾರರಾಗಿ ವರ್ತಿಸುವಾಗ ಶಾಸಕರಿಗೆ ಈ ದ್ವಂದ್ವ ನೀತಿ ಏಕೆ? ಈ ರೀತಿಯ ವಿಭಿನ್ನ ನಿಯಮಾವಳಿಗಳ ಹಿಂದೆ ಇರುವ ಉದ್ದೇಶವಾದರೂ ಏನು? ಎಂದು ಸುರೇಶ್ ಕುಮಾರ್ ಅವರು ಪತ್ರದ ಮೂಲಕ ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ಗೆ ಸೋಲು: ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ಉದ್ಭವಿಸಿರುವ ಈ ಗೊಂದಲಕ್ಕೆ ಶೀಘ್ರವೇ ಸ್ಪಷ್ಟೀಕರಣ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ