ಬೆಂಗಳೂರಿನಿಂದ ಮತ್ತೊಂದು ಹೈ-ಸ್ಪೀಡ್ ರೈಲು ಕಾರಿಡಾರ್​​ಗೆ ಒತ್ತಾಯಿಸಿದ ತೇಜಸ್ವಿ ಸೂರ್ಯ

bengaluru mubai high speed Railway corridor: ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಹೈ-ಸ್ಪೀಡ್ ರೈಲು ಕಾರಿಡಾರ್‌ ಮಂಜೂರು ಮಾಡುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. ಆಗ್ರಹಿಸಿದ್ದಾರೆ. ಇದರಿಂದ ಉತ್ತರ ಕರ್ನಾಟಕದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ವೇಗ ಇದರಿಂದ ಸಿಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಬೆಂಗಳೂರಿನಿಂದ ಮತ್ತೊಂದು ಹೈ-ಸ್ಪೀಡ್  ರೈಲು ಕಾರಿಡಾರ್​​ಗೆ ಒತ್ತಾಯಿಸಿದ ತೇಜಸ್ವಿ ಸೂರ್ಯ
Tejaswi Surya, ashwini vaishnaw

Updated on: May 17, 2026 | 5:19 PM

ಬೆಂಗಳೂರು, (ಮೇ 17): ದಾವಣಗೆರೆ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಹೈ-ಸ್ಪೀಡ್ ರೈಲು ಕಾರಿಡಾರ್ ಅನ್ನು (bengaluru mubai high speed Railway corridor) ಮಂಜೂರು ಮಾಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಅವರು ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (ashwini vaishnaw )ಅವರಿಗೆ ಆಗ್ರಹಿಸಿದ್ದಾರೆ. ಈ ಯೋಜನೆಯು ಮಧ್ಯ ಮತ್ತು ಉತ್ತರ ಕರ್ನಾಟಕದಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರನ್ನು ಚೆನ್ನೈ ಮತ್ತು ಹೈದರಾಬಾದ್‌ನೊಂದಿಗೆ ಸಂಪರ್ಕಿಸುವ ಇತ್ತೀಚೆಗೆ ಘೋಷಿಸಲಾದ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಂತೆಯೇ, ಬೆಂಗಳೂರು-ಮುಂಬೈ ಕಾರಿಡಾರ್ ಕೂಡ ಕರ್ನಾಟಕದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅವರು ಗಮನ ಸೆಳೆದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ನಡೆದ ನೂತನ, ಎಸ್‌ಎಂವಿಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಹಸಿರು ನಿಶಾನೆ ತೋರುವ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಸೂರ್ಯ ಅವರು ಈ ಮನವಿ ಮಾಡಿದರು.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ


ಉಭಯ ಮಹಾನಗರಗಳ ನಡುವಿನ ಬಲವಾದ ಆರ್ಥಿಕ ಸಂಬಂಧಗಳನ್ನು ಒತ್ತಿಹೇಳಿದ ಸೂರ್ಯ, ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ರಾಜಧಾನಿಗಳಾಗಿದ್ದು, ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿ ಮತ್ತು ಮುಂಬೈ ವಾಣಿಜ್ಯ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದರು.

“ಪ್ರತಿ ವರ್ಷ ಲಕ್ಷಾಂತರ ಜನರು ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುತ್ತಾರೆ. ದಾವಣಗೆರೆ ಮತ್ತು ಹುಬ್ಬಳ್ಳಿ ಮೂಲಕ ಈ ಎರಡು ನಗರಗಳನ್ನು ಸಂಪರ್ಕಿಸುವ ಹೈ-ಸ್ಪೀಡ್ ರೈಲು ಕಾರಿಡಾರ್ ಕೇವಲ ಸಂಪರ್ಕವನ್ನು ಸುಧಾರಿಸುವುದಲ್ಲದೆ, ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಈ ಯೋಜನೆಯನ್ನು ಪರಿಗಣಿಸಿ ಅನುಷ್ಠಾನಗೊಳಿಸಿದರೆ, ರಾಜ್ಯದ ಆರ್ಥಿಕ ಭವಿಷ್ಯವನ್ನು ಬಲಪಡಿಸಲು ನೀಡಿದ ಈ ಕೊಡುಗೆಯನ್ನು ಕರ್ನಾಟಕ ಮತ್ತು ಬೆಂಗಳೂರಿನ ಜನರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು ಸಂಸದ ಸೂರ್ಯ ವಿವರಿಸಿದರು.

ಬೆಂಗಳೂರು ಮತ್ತು ಮುಂಬೈ ನಡುವಿನ ನೂತನ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸ್ವಾಗತಿಸಿದ ಸೂರ್ಯ ರವರು, ಎರಡೂ ನಗರಗಳ ನಡುವೆ ದಶಕಗಳಿಂದ ಪ್ರಯಾಣದ ಬೇಡಿಕೆ ಹೆಚ್ಚುತ್ತಿದ್ದರೂ, 1983 ರಿಂದ ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ಏಕೈಕ ನೇರ ರೈಲು ಸೇವೆಯಾಗಿ ಉಳಿದಿತ್ತು ಎಂಬುದನ್ನು ಉಲ್ಲೇಖಿಸಿ, 30 ವರ್ಷಗಳಿಗೂ ಹೆಚ್ಚು ಕಾಲ, ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವ ನಾಗರಿಕರು ಸೀಮಿತ ರೈಲು ಸಂಪರ್ಕದ ಕಾರಣದಿಂದಾಗಿ ಅಪಾರ ತೊಂದರೆಗಳನ್ನು ಎದುರಿಸುತ್ತಿದ್ದರು. ಹಬ್ಬದ ಮತ್ತು ರಜಾದಿನಗಳ ಸಂದರ್ಭದಲ್ಲಿ ವೇಟಿಂಗ್ ಲಿಸ್ಟ್‌ಗಳು ಹೆಚ್ಚಾಗುತ್ತಿದ್ದವು ಮತ್ತು ವಿಮಾನ ಹಾಗೂ ಬಸ್ ದರಗಳು ಗಗನಕ್ಕೇರುತ್ತಿದ್ದವು. ಈ ಹೊಸ ರೈಲು ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲ ಕಲ್ಪಿಸಲಿದೆ ” ಎಂದು ಅವರು ಹೇಳಿದರು.

ಬೆಂಗಳೂರು ಮತ್ತು ಮುಂಬೈ ನಡುವೆ ರಾತ್ರಿ ಸಂಪರ್ಕ ಕಲ್ಪಿಸುವ ‘ವಂದೇ ಭಾರತ್ ಸ್ಲೀಪರ್’ ಸೇವೆಯನ್ನು ಬೆಂಗಳೂರು ಶೀಘ್ರದಲ್ಲೇ ಪಡೆಯಲಿದೆ ಎಂದು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಸೂರ್ಯ ಇದೇ ವೇಳೆ ತಿಳಿಸಿದ್ದು, ಕರ್ನಾಟಕದ ರೈಲ್ವೆ ಮೂಲಸೌಕರ್ಯಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದರು.

ಕಳೆದ ಒಂದು ದಶಕದಲ್ಲಿ ರೈಲ್ವೆ ವಲಯದಲ್ಲಿ ಆಗಿರುವ ಅಭೂತಪೂರ್ವ ಸುಧಾರಣೆಗಳು ರಾಜ್ಯದ ಅಭಿವೃದ್ಧಿಗೆ ವೇಗ ನೀಡಿದ್ದು, 2014 ರವರೆಗೆ ಕರ್ನಾಟಕಕ್ಕೆ ವಾರ್ಷಿಕ ರೈಲ್ವೆ ಅನುದಾನ ಸರಾಸರಿ ಸುಮಾರು ₹850 ಕೋಟಿಗಳಷ್ಟಿತ್ತು, ಆದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ವಾರ್ಷಿಕವಾಗಿ ಸುಮಾರು ₹8,000 ಕೋಟಿ ಲಭಿಸುತ್ತಿದೆ, ಇದು ಸುಮಾರು ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ಕರ್ನಾಟಕದಲ್ಲಿ ಸದ್ಯ ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆ, ವಿದ್ಯುದೀಕರಣ ಮತ್ತು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನಿಲ್ದಾಣಗಳ ಮರುಅಭಿವೃದ್ಧಿ ಸೇರಿದಂತೆ 52,000 ಕೋಟಿಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಇನ್ನು ರಾಜ್ಯದಾದ್ಯಂತ ರೈಲ್ವೆ ವಿದ್ಯುದೀಕರಣವು 3,000 ಕಿಲೋಮೀಟರ್ ದಾಟಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸೂರ್ಯ ತಿಳಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us