ಬಿಬಿಎಂಪಿ ಮೈದಾನದ ಗೇಟ್‌ ಬಿದ್ದು ಬಾಲಕ ಸಾವು ಕೇಸ್​: ಓರ್ವ ಅಧಿಕಾರಿ ಅಮಾನತು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 11:08 PM

ಬಿಬಿಎಂಪಿ ಮೈದಾನದ ಗೇಟ್‌ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ಅಧಿಕಾರಿಯ ತಲೆದಂಡವಾಗಿದೆ. ಸಹಾಯಕ ಅಭಿಯಂತರ ಟಿ.ಶ್ರೀನಿವಾಸ ರಾಜುರನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡ ಬಿಬಿಎಂಪಿ ಅಡಳಿತ ವಿಭಾಗದ ಉಪ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.

ಬಿಬಿಎಂಪಿ ಮೈದಾನದ ಗೇಟ್‌ ಬಿದ್ದು ಬಾಲಕ ಸಾವು ಕೇಸ್​: ಓರ್ವ ಅಧಿಕಾರಿ ಅಮಾನತು
ಬಿಬಿಎಂಪಿ ಮೈದಾನದ ಗೇಟ್‌ ಬಿದ್ದು ಬಾಲಕ ಸಾವು ಕೇಸ್​: ಓರ್ವ ಅಧಿಕಾರಿ ಅಮಾನತು
Follow us on

ಬೆಂಗಳೂರು, ಸೆಪ್ಟೆಂಬರ್​ 23: ಬಿಬಿಎಂಪಿ (bbmp) ಮೈದಾನದ ಗೇಟ್‌ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಹಾಯಕ ಅಭಿಯಂತರ ಟಿ.ಶ್ರೀನಿವಾಸ ರಾಜು ಅಮಾನತು ಮಾಡಿ ಬಿಬಿಎಂಪಿ ಅಡಳಿತ ವಿಭಾಗದ ಉಪ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ. ಗೇಟ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸದಿರುವುದು, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ ಆರೋಪದಡಿ ಸಸ್ಪೆಂಡ್ ಮಾಡಲಾಗಿದೆ.

2022ರಲ್ಲಿ ದತ್ತಾತ್ರೇಯ ವಾರ್ಡ್‌ನ ಎಇ ಆಗಿದ್ದ ಶ್ರೀನಿವಾಸ ರಾಜು, ಪ್ರಸ್ತುತ ರಾಜಾಜಿನಗರ ವಾರ್ಡ್‌ನ ಎಇ ಆಗಿದ್ದರು. ಘಟನೆ ಬಗ್ಗೆ ಮೂರು ದಿನಗಳಲ್ಲಿ ನೋಟಿಸ್‌ಗೆ ಸೂಕ್ತ ಉತ್ತರ ನೀಡುವಂತೆ ಇಇ ವೆಂಕಟೇಶ್‌ಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್ ಗುಂಡೂರಾವ್

ನಿನ್ನೆ ಘಟನೆ ನಡೆದ ಬಳಿಕ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಬಾಲಕನ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಸಂಬಂಧಪಟ್ಟವರಿಂದ ವರದಿ ತರಿಸಿಕೊಳುತ್ತೇವೆ ಮತ್ತು ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು.

ಬಿಬಿಎಂಪಿ ಐದು ಲಕ್ಷ ರೂ., ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ, ಐದು ಲಕ್ಷ ರೂ. ಒಟ್ಟು ನಿರಂಜನ ಕುಟುಂಬಕ್ಕೆ ದಿನೇಶ್ ಗುಂಡುರಾವ್ ಹತ್ತು ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 10 ವರ್ಷದ ಬಾಲಕ ನಿರಂಜನ್ ಮೃತಪಟ್ಟಿದ್ದಾನೆ. ನಿನ್ನೆ ಸಂಜೆ 4 ಘಂಟೆ ಸುಮಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ರಾಜಾಶಂಕರ್ ಆಟದ ಮೈದಾನದಲ್ಲಿ, ಕಬ್ಬಿಣದ ಗೇಟ್ ಬಾಲಕನ ತಲೆ ಮೇಲೆ ಬಿದ್ದು ಮೃತಪಟ್ಟಿದ್ದಾನೆ. ಗದಗ ಮೂಲದವರಾಗಿರುವ ಮೃತ ನಿರಂಜನ್ ಪೋಷಕರು ಬೆಂಗಳೂರಿನಲ್ಲಿ ಪ್ಯಾಲೇಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಬಾಲಕನ ಕಣ್ಣುಗಳು ದಾನ 

ಗಾರೆ ಕೆಲಸ, ಆಟೋ ಚಾಲನೆ ಮಾಡಿ ಮಕ್ಕಳನ್ನು ಓದಿಸುತ್ತಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ, ಮೃತ ನಿರಂಜನ್​ನ ಎರಡು ಕಣ್ಣುಗಳನ್ನ ತಂದೆ ದಾನ ಮಾಡಿದ್ದಾರೆ.  ಲಯನ್ಸ್ ಇಂಟರ್ ನ್ಯಾಷನಲ್​ ಐ ಬ್ಯಾಂಕ್​ಗೆ ಕಣ್ಣುಗಳನ್ನ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಮೈದಾನದ ಗೇಟ್​ ಬಿದ್ದು 7 ವರ್ಷದ ಮಗು ಸಾವು

ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನ ಶಿಫ್ಟ್ ಮಾಡಲಾಗಿತ್ತು. ಬಿಬಿಎಂಪಿ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಆಗಿದ್ರೂ, ಈ ವರೆಗೂ ಮೃತ ಬಾಲಕನ ಕುಟುಂಬವನ್ನ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನವನ್ನು ಹೇಳಿಲ್ಲವಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.