TV9 Kannada News Highlights: ವರುಣಾರ್ಭಟಕ್ಕೆ ಪತರುಗುಟ್ಟಿದ ಬಾಂಗ್ಲಾದೇಶ: ಕನಿಷ್ಠ 51 ಜನ ದಾರುಣ ಸಾವು
Karnataka News Today Highlights: ದಾವಣಗೆರೆಯ ಪೋಕ್ಸೋ ನ್ಯಾಯಾಲಯ ಇಂದು ವಚನಾನಂದ ಸ್ವಾಮೀಜಿ ಜಾಮೀನು ತೀರ್ಪು ಪ್ರಕಟಿಸಲಿದೆ. ರಾಯಚೂರು ಪೊಲೀಸರಿಂದ 20 ಲಕ್ಷ ಮೌಲ್ಯದ 20 ಕೆಜಿ ಗಾಂಜಾ ಜಪ್ತಿ, ಇಬ್ಬರ ಬಂಧನ. ಆಂಧ್ರದಲ್ಲಿ ಇಬ್ಬರು ಕೋವಿಡ್ ಸೋಂಕಿಗೆ ಬಲಿ, ವೈರಸ್ ಮರುಕಳಿಕೆ ಭೀತಿ. ಬ್ಯಾಂಕಾಕ್ನಲ್ಲಿ ದುರಂತ. ರಾಜ್ಯ, ದೇಶ, ವಿದೇಶಗಳ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Breaking News Today Highlights in Kannada: ಹರಿಹರ ತಾಲೂಕಿನ ಹನಗವಾಡಿ ಬಳಿಯ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ನಿಯಮಿತ ಜಾಮೀನು (Regular Bail) ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ದಾವಣಗೆರೆಯ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಇಂದು (ಜುಲೈ 13) ತನ್ನ ಮಹತ್ವದ ಅಂತಿಮ ತೀರ್ಪನ್ನು ಪ್ರಕಟಿಸಲಿದೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆದ ಅತ್ಯಂತ ರಹಸ್ಯ ‘ಕ್ಯೂಆರ್ ಕೋಡ್ ಮತ್ತು ಡಿಕಾಯ್ಸ್ ಸ್ಕ್ವಾಡ್’ ಕಾರ್ಯಾಚರಣೆಯ ಮೂಲಕ 20 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಅಂತರಜಿಲ್ಲಾ ದಂಧೆಕೋರರನ್ನು ಹೆಡೆಮುರಿ ಕಟ್ಟಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸಂಪೂರ್ಣ ಸೈಲೆಂಟ್ ಆಗಿದ್ದ ಹೆಮ್ಮಾರಿ ಕೊರೊನಾ ವೈರಸ್ (Covid-19) ಮತ್ತೆ ಆತಂಕ ಮೂಡಿಸಲು ಆರಂಭಿಸಿದೆ. ನೆರೆರಾಜ್ಯ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಸೋಮವಾರ ಬೆಳಗಿನ ಜಾವ ಘೋರ ದುರಂತವೊಂದು ಸಂಭವಿಸಿದೆ. ಹೀಗೆ ರಾಜ್ಯ, ದೇಶ, ವಿದೇಶಗಳ ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ.
LIVE NEWS & UPDATES
-
ಅಮೆರಿಕ-ಇರಾನ್ ಯುದ್ಧದ ನಡುವೆ ಮತ್ತೊಂದು ವಾರ್
ಅಮೆರಿಕ, ಇರಾನ್ ನಡುವಿನ ಯುದ್ಧದ ನಡುವೆ ಸೌದಿ ಅರೇಬಿಯಾ, ಯೆಮನ್ನ ಹೌತಿ ಬಂಡುಕೋರರ ನಡುವೆ ವಾರ್ ಶುರುವಾಗಿದೆ. ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶದ ಮೇಲೆ ಸೌದಿ ಅರೇಬಿಯಾದಿಂದ ಏರ್ಸ್ಟ್ರೈಕ್ ನಡೆಸಲಾಗಿದೆ. ಯೆಮನ್ನ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರಿಯಾಗಿಸಿ ದಾಳಿ ನಡೆದಿದೆ ಎನ್ನಲಾಗಿದೆ.
-
ಬೊಟ್ ದುರಂತ: ವಿಯೆಟ್ನಾಂನಿಂದ ಮುಂಬೈ ತಲುಪಿದ 15 ಮೃತದೇಹಗಳು
ಬೋಟ್ ಮುಳುಗಿ ವಿಯೆಟ್ನಾಂನಲ್ಲಿ ಮೃತಪಟ್ಟಿದ್ದ 15 ಭಾರತೀಯರ ಮೃತದೇಹಗಳು ಫ್ಲೈಟ್ ಮೂಲಕ ಮುಂಬೈಗೆ ತಲುಪಿವೆ. ಜುಲೈ 11ರಂದು ವಿಯೆಟ್ನಾಂನ ಫು ಕ್ವೋಕ್ ದ್ವೀಪದ ಬಳಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಿ 15 ಜನ ಮೃತಪಟ್ಟಿದ್ದರು.
-
-
ಸಚಿವರಿಗೆ ಬಸ್ಸಿನಿಂದ ಕೆಳಗೆ ಇಳಿಯಿರಿ ಎಂದಿದ್ದ ಸಿಬ್ಬಂದಿ ಅಮಾನತು
ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಚಿಲ್ಲರೆ ನೀಡಿ ಇಲ್ಲ ಅಂದರೆ, ಬಸ್ಸಿನಿಂದ ಕೆಳಗೆ ಇಳಿಯಿರಿ ಎಂದಿದ್ದ ಕಂಡಕ್ಟರ್ ರಾಮಕೃಷ್ಣ ಟಿ.ಜಿ. ತಲೆತಂಡವಾಗಿದೆ. ಚಾಲಕ-ಕಂ-ನಿರ್ವಾಹಕನನ್ನು ಅಮಾನತುಗೊಳಿಸಿ ಬಿಎಂಟಿಸಿ ನಿಗಮ ಆದೇಶಿಸಿದೆ. ಮತ್ತಷ್ಟು ಓದಿ
-
ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಅಧಿಕೃತ ಆದೇಶ
ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಸಂಬಂಧ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಮಾಡಿದ್ದು, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾಹಿತಿ ಹಂಚಿಕೊಂಡಿದ್ದಾರೆ. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಅಧಿಕೃತ ಆದೇಶವನ್ನು ಹೊರಡಿಸಿದ್ದೇವೆ ಎಂದವರು ತಿಳಿಸಿದ್ದಾರೆ. ಮತ್ತಷ್ಟು ಓದಿ
-
ತೋಟದಲ್ಲಿ ಗಂಡು ಹುಲಿ ಶವ ಪತ್ತೆ
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಸಮೀಪ ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ತೋಟದಲ್ಲಿ ಗಂಡು ಹುಲಿ ಶವ ಪತ್ತೆಯಾಗಿದೆ.ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದಂತೆ ನಾಳೆ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಹುಲಿ ಸಾವಿನ ಬಗ್ಗೆ ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
-
-
ಮಳೆಯಿಂದ 51 ಜನರ ದುರ್ಮರಣ
ಬಾಂಗ್ಲಾದೇಶದಲ್ಲಿ ನಿರಂತರ ಮಳೆಯಿಂದ ಅಪಾರ ಸಾವು-ನೋವುಗಳು ಸಂಭವಿಸಿವೆ. ಹಲವೆಡೆ ಉಂಟಾಗಿರುವ ಪ್ರವಾಹ, ಭೂಕುಸಿತ ದುರಂತದಲ್ಲಿ ಈವರೆಗೆ 51 ಜನರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಳೆ, ಪ್ರವಾಹದಲ್ಲಿ ಸಿಲುಕಿ ಬಾಂಗ್ಲಾದಲ್ಲಿ 10 ಲಕ್ಷ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ.
-
ಭೀಕರ ಸರಣಿ ಅಪಘಾತ: 16 ಮಂದಿ ಸಾವು
ಮೆಕ್ಸಿಕೋದಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 16 ಜನ ದುರ್ಮರಣ ಹೊಂದಿದ್ದಾರೆ. ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿವಿಧ ವಾಹನಗಳಲ್ಲಿದ್ದವರು ಸೇರಿ 16 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನನ್ನು ಮೆಕ್ಸಿಕೋ ಪೊಲೀಸರು ಬಂಧಿಸಿದ್ದಾರೆ.
-
ಚಿತ್ರದುರ್ಗದಲ್ಲಿ ಸಿಎಂ ಡಿಕೆಶಿ ರಹಸ್ಯ ಸಭೆ
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸಿಎಂ ಡಿಕೆ ಶಿವಕುಮಾರ್ ರಹಸ್ಯ ಸಭೆ ನಡೆಸಿದ್ದಾರೆ. ಜಿಲ್ಲೆಯ ಶಾಸಕರು ಮತ್ತು ನಿಗಮದ ಅಧ್ಯಕ್ಷರು ಈ ವೇಳೆ ಭಾಗಿಯಾಗಿದ್ದು, ಹಿರಿಯೂರು ಬೈಎಲೆಕ್ಷನ್ ಸಂಬಂಧ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ, ಯೋಗೀಶ್ ಬಾಬು, ಪಿ.ರಘು ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
-
ಲಾರ್ಡ್ಸ್ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಿಗ್ವಿಜಯ: ಇಂಗ್ಲೆಂಡ್ ವಿರುದ್ಧ 270 ರನ್ಗಳ ಬೃಹತ್ ಗೆಲುವು
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಕ್ರಿಕೆಟ್ನ ಕಾಶಿ ‘ಲಾರ್ಡ್ಸ್’ ಮೈದಾನದಲ್ಲಿ ನಡೆದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಪಂದ್ಯದ ಮೊದಲ ದಿನದಿಂದಲೂ ಇಂಗ್ಲೆಂಡ್ ತಂಡದ ಮೇಲೆ ಸಂಪೂರ್ಣ ಪಾರುಪತ್ಯ ಮೆರೆದ ಭಾರತೀಯ ಮಹಿಳಾ ಪಡೆ, ಬರೋಬ್ಬರಿ 270 ರನ್ಗಳ ದಾಖಲೆಯ ಗೆಲುವು ದಾಖಲಿಸಿದೆ.
-
ಪೋಕ್ಸೋ ಪ್ರಕರಣ: ವಚನಾನಂದ ಸ್ವಾಮೀಜಿಗೆ ಕೊನೆಗೂ ಬಿಗ್ ರಿಲೀಫ್
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರಿಗೆ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ನ್ಯಾಯಾಲಯದಿಂದ ದೊಡ್ಡ ಸಮಾಧಾನ ಸಿಕ್ಕಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಸ್ವಾಮೀಜಿಗೆ ಷರತ್ತುಬದ್ಧ ನಿಯಮಿತ ಜಾಮೀನು ಮಂಜೂರು ಮಾಡಿದೆ.
-
ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣಗೆ ಸುಪ್ರೀಂಕೋರ್ಟ್ ಬಿಗ್ ಶಾಕ್
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪ್ರಭಾವಿ ನಾಯಕ ಹಾಗೂ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಇಂದು (ಜುಲೈ 13) ಮಹತ್ವದ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಹೈಕೋರ್ಟ್ ಈ ಹಿಂದೆ ಹೆಚ್.ಡಿ. ರೇವಣ್ಣ ಅವರಿಗೆ ನೀಡಿದ್ದ ದೋಷಮುಕ್ತ ಆದೇಶವನ್ನು ಪ್ರಶ್ನಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಕಠಿಣ ನಿರ್ಧಾರ ಕೈಗೊಂಡಿದೆ. ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ
-
ಮಹೇಶ್ ತಿಮ್ಮರೂಡಿಗೆ ಬಿಗ್ ಶಾಕ್: ಗಡಿಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಜಿಲ್ಲಾಡಳಿತ ಹಾಗೂ ಕಾನೂನು ಜಾರಿ ಸಂಸ್ಥೆಗಳು ತಮ್ಮ ವಿರುದ್ಧ ಹೊರಡಿಸಿದ್ದ ಗಡಿಪಾರು ಆದೇಶವನ್ನು ಪ್ರಶ್ನಿಸಿ ಹಿಂದೂ ಸಂಘಟನೆಯ ಮುಖಂಡ ಮಹೇಶ್ ತಿಮ್ಮರೂಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸುಪ್ರೀಂಕೋರ್ಟ್ನ ಈ ಮಹತ್ವದ ತೀರ್ಪಿನಿಂದಾಗಿ ಮಹೇಶ್ ತಿಮ್ಮರೂಡಿ ಅವರಿಗೆ ಕಾನೂನು ಹೋರಾಟದಲ್ಲಿ ಎರಡನೇ ಬಾರಿಗೆ ಭಾರಿ ಹಿನ್ನಡೆಯಾದಂತಾಗಿದೆ.
-
ತಮಿಳುನಾಡು ಗೋಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ
ತಮಿಳುನಾಡು ರಾಜ್ಯದಲ್ಲಿ ಬಕ್ರೀದ್ ಹಬ್ಬ ಸೇರಿದಂತೆ ಯಾವುದೇ ದಿನಗಳಲ್ಲಿ ಗೋಹತ್ಯೆ ಮಾಡದಂತೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಸದ್ಯ ಮಧ್ಯಂತರ ತಡೆ (Stay) ನೀಡಿದೆ. ಮದ್ರಾಸ್ ಹೈಕೋರ್ಟ್ನ ಈ ಕಠಿಣ ನಿರ್ದೇಶನವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಕ್ರಮ್ ನಾಥ್ ಮತ್ತು ಜಸ್ಟಿಸ್ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಹೈಕೋರ್ಟ್ ಆದೇಶಕ್ಕೆ ಬ್ರೇಕ್ ಹಾಕಿದ್ದು, ರಾಜ್ಯದಲ್ಲಿದ್ದ ಹಳೆಯ ನಿಯಂತ್ರಿತ ಗೋಹತ್ಯೆ ನಿಯಮವೇ ಸದ್ಯಕ್ಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
-
ಕೆಎಸ್ಆರ್ಟಿಸಿ ಬಸ್ನಲ್ಲಿ ಯುವತಿ ಜೊತೆ ಅನುಚಿತ ವರ್ತನೆ; ವ್ಯಕ್ತಿಗೆ ಬಸ್ನಲ್ಲೇ ಕಪಾಳಮೋಕ್ಷ
ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸುವ ಮತ್ತೊಂದು ಘಟನೆ ವರದಿಯಾಗಿದೆ. ಬೆಂಗಳೂರಿನಿಂದ ನೆಲಮಂಗಲದ ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ (KSRTC) ಬಸ್ನಲ್ಲಿ ಸಹಪ್ರಯಾಣಿಕ ಯುವತಿಯೊಬ್ಬಳ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ನಡೆದುಕೊಂಡು ಅನುಚಿತ ವರ್ತನೆ ತೋರಿದ್ದಾನೆ. ಆದರೆ, ಈ ಬಾರಿ ವಿಕೃತಿ ಮೆರೆದ ಪುಂಡನಿಗೆ ಬಸ್ನಲ್ಲೇ ತಕ್ಕ ಶಾಸ್ತಿಯಾಗಿದೆ.
-
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತುಗೊಳಿಸಿದ ರಾಜ್ಯಪಾಲ
ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಅತ್ಯಂತ ಸಂಚಲನಾತ್ಮಕ ಬೆಳವಣಿಗೆಯೊಂದು ನಡೆದಿದೆ. ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ (Suspend) ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಇಂದು (ಜುಲೈ 13) ಅದೇಶ ಹೊರಡಿಸಿದ್ದಾರೆ. ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಗಂಭೀರ ಸ್ವರೂಪದ ಅಕ್ರಮ ಮತ್ತು ಸ್ವಜನಪಕ್ಷಪಾತದ ದೂರುಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಇಲ್ಲಿದೆ ನೋಡಿ ಸ್ಟೋರಿ
-
ಬೆಟ್ಟದ ಭೈರವೇಶ್ವರ ಕ್ಷೇತ್ರದಲ್ಲಿ ಪ್ರವಾಸಿಗರ ಹುಚ್ಚಾಟ: ಡಿಜೆ ಹಾಕಿ ಕುಣಿತ, ಚಪ್ಪಲಿ ಧರಿಸಿ ಓಡಾಟ
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮರಗುಂದ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ‘ಬೆಟ್ಟದ ಭೈರವೇಶ್ವರ’ ದೇವಾಲಯದ ಆವರಣದಲ್ಲಿ ಪ್ರವಾಸಿಗರ ಹುಚ್ಚಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತರುತ್ತಿರುವ ಪುಂಡರ ವರ್ತನೆಗೆ ಸ್ಥಳೀಯರು ಮತ್ತು ಭಕ್ತಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪವಿತ್ರ ದೇವಸ್ಥಾನದ ಆವರಣವನ್ನು ಪ್ರವಾಸಿಗರು ಪಿಕ್ನಿಕ್ ಸ್ಪಾಟ್ ಮಾಡಿಕೊಂಡಿದ್ದು, ನಿಯಮಗಳನ್ನು ಗಾಳಿಗೆ ತೂರಿ ಉದ್ಧಟತನ ಪ್ರದರ್ಶಿಸುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ.
-
ಬೈಕಿನಲ್ಲಿ ಸಾಗಿಸುತ್ತಿದ್ದ 20 ಕೆಜಿ ಗಾಂಜಾ ಜಪ್ತಿ, ಇಬ್ಬರ ಬಂಧನ
ರಾಯಚೂರು ಜಿಲ್ಲಾ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ಬೃಹತ್ ಗಾಂಜಾ ಜಾಲವನ್ನು ಭೇದಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆದ ಅತ್ಯಂತ ರಹಸ್ಯ ‘ಕ್ಯೂಆರ್ ಕೋಡ್ ಮತ್ತು ಡಿಕಾಯ್ಸ್ ಸ್ಕ್ವಾಡ್’ ಕಾರ್ಯಾಚರಣೆಯ ಮೂಲಕ 20 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಅಂತರಜಿಲ್ಲಾ ದಂಧೆಕೋರರನ್ನು ಹೆಡೆಮುರಿ ಕಟ್ಟಲಾಗಿದೆ. ಬಂಧಿತರನ್ನು ಸಿಂಧನೂರು ತಾಲೂಕಿನ ಆರ್.ಹೆಚ್. ಕ್ಯಾಂಪ್ ನಿವಾಸಿ ಧೀನಬಂಧು (53) ಮತ್ತು ಬಸವರಾಜೇಶ್ವರಿ ಕ್ಯಾಂಪ್ ನಿವಾಸಿ ಶಂಭು ಸರ್ದಾರ್ (31) ಎಂದು ಗುರುತಿಸಲಾಗಿದೆ. ಧೀನಬಂಧು ಸೆಂಟ್ರಿಂಗ್ ಕೆಲಸ ಹಾಗೂ ಶಂಭು ಕೂಲಿ ಕಾರ್ಮಿಕನಾಗಿದ್ದು, ಇದರ ಮರೆಯಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದರು.
Published On - Jul 13,2026 9:21 AM




