ವಾಲ್ಮೀಕಿ ನಿಗಮ ಹಗರಣ ತನಿಖೆ ಸಿಬಿಐಗೆ ನೀಡಿ ಕೋರ್ಟ್ ಆದೇಶ: ಹಲವರಿಗೆ ಢವ ಢವ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕರ್ನಾಟಕ ಹೈಕೋರ್ಟ್ ಎಸ್ಐಟಿಗೆ ಆದೇಶಿಸಿದೆ.ಸದ್ಯ ಪ್ರಕರಣದ ತನಿಖೆಯನ್ನು ಎಸ್ಐಟಿ ಮತ್ತು ಇಡಿ ನಡೆಸುತ್ತಿತ್ತು. ಇದೀಗ, ಹೈಕೋರ್ಟ್ ಸೂಚನೆ ಮೇರೆಗೆ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗಲಿದೆ.

ಬೆಂಗಳೂರು, ಜುಲೈ 01: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ (Maharshi Valmiki Scheduled Tribes Development Corporation Limited) ಅಕ್ರಮ ಹಣ ವರ್ಗಾವಣೆ (Illegal Money Transfer) ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್ ಎಸ್ಐಟಿಗೆ ಸೂಚನೆ ನೀಡಿದೆ. ಸಿಬಿಐ ಈವರೆಗೆ ಬ್ಯಾಂಕ್ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ಇನ್ನು, ಸಿಬಿಐನಿಂದ ಪ್ರಕರಣದ ತನಿಖೆ ಸಮಗ್ರ ತನಿಖೆ ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.
ಬ್ಯಾಂಕ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಕೋರ್ಟ್
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಹಣ ದುರುಪಯೋಗದ ಆರೋಪಗಳಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬ್ಯಾಂಕ್ ಮನವಿ ಮಾಡಿತ್ತು. ಆದರೆ, ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು.
ಎಲ್ಲಿಗೆಲ್ಲ ವರ್ಗಾವಣೆಯಾಗಿತ್ತು ಹಣ?
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬಹಿರಂಗವಾಗಿತ್ತು. 187 ಕೋಟಿ ರೂಪಾಯಿಯಲ್ಲಿ 94 ಕೋಟಿ ಹೈದರಾಬಾದ್ ಬ್ಯಾಂಕ್ಗೆ ಅಂದರೆ, ಹೈದರಾಬಾದ್ನ ಫಸ್ಟ್ ಬ್ಯಾಂಕ್ಗೆ ವರ್ಗಾಯಿಸಲಾಗಿತ್ತು. ಫಸ್ಟ್ ಬ್ಯಾಂಕ್ನ ಭರ್ತಿ 18 ನಕಲಿ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಇದೆಲ್ಲವೂ ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ ವರ್ಗಾವಣೆಯಾಗಿತ್ತು.
ಹೀಗೆ ವರ್ಗಾವಣೆ ಆದ ಹಣವನ್ನು ಮಧ್ಯವರ್ತಿ ಸತ್ಯನಾರಾಣ ವರ್ಮಾ ಬಿಡಿಸಿಕೊಂಡಿದ್ದನು. ಈ 18 ನಕಲಿ ಖಾತೆಗಳಿಂದ ಬೇರೆ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು. ನೆಟ್ ಬ್ಯಾಂಕಿಂಗ್, ಆರ್ಟಿಜಿಎಸ್, ಫೋನ್ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿ, ಆ ಹಣವನ್ನ ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಜತೆಗೂಡಿ ಹಣ ಹಂಚಿಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಬೆಂಝ್ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ ರೂ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ
ಪದ್ಮನಾಭ್ಗೆ ಸಿಕ್ಕಿದ್ದು ಭರ್ತಿ ₹5 ಕೋಟಿ ಪಾಲು
ನಿಗಮದ ಎಂಡಿಯಾಗಿದ್ದ ಪದ್ಮನಾಭಗೆ 5 ಕೋಟಿ ರೂಪಾಯಿ ಪಾಲು ಬಂದಿತ್ತು. ಈ ಹಣದಲ್ಲಿ ಅರ್ಧ ಹಣವನ್ನ ಮಗನ ಸ್ನೇಹಿತನ ಮನೆಯಲ್ಲಿ, ಅಂದರೆ ನೆಲಮಂಗಲದ ಗೋವಿನಹಳ್ಳಿಯ ಕೆಂಪೇಗೌಡ ಮನೆಯಲ್ಲಿದ್ದ ಇಟ್ಟಿದ್ದ. ಕೆಂಪೇಗೌಡ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು 3.64 ಕೋಟಿ ರೂಪಾಯಿ ಹಣವನ್ನ ಸೀಜ್ ಮಾಡಿದ್ದರು. ಅಲ್ಲದೆ, ಪದ್ಮನಾಭ ಸ್ನೇಹಿತರೊಬ್ಬರ ಕಾರಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂಪಾಯಿ ನಗದು ಕೂಡ ಸೀಜ್ ಆಗಿತ್ತು. ಅಲ್ಲದೆ, ನಾಗೇಂದ್ರ ಆಪ್ತ ಹರೀಶ್ಗೆ 25 ಲಕ್ಷ ರೂ., ದದ್ದಲ್ ಆಪ್ತನಿಗೆ 55 ಲಕ್ಷ ರೂ., ದದ್ದಲ್ ಆಪ್ತ ಹಂಪಣ್ಣಗೆ 55 ಲಕ್ಷ ರೂ. ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿತ್ತು. ಹೀಗೆ 94 ಕೋಟಿ ರೂಪಾಯಿ ಹಣವನ್ನ ನೆಕ್ಕಂಟಿ ನಾಗರಾಜ್ ಮತ್ತು ಸತ್ಯನಾರಾಯಣ ವರ್ಮಾ ಹಂಚಿಕೆ ಮಾಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Tue, 1 July 25







