
ಚಾಮರಾಜನಗರ, ಮಾರ್ಚ್ 09: ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ವೃದ್ಧೆಯೋರ್ವರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ನಡೆದಿದೆ. ಮಕ್ಕಳ ಆಸರೆ ಪಡೆಯದೆ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸಿದ್ದಮ್ಮ (84) ಹಠಾತ್ ಆಗಿ ಮೃತಪಟ್ಟಿರೋದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರ ಮೈಮೇಲಿದ್ದ ಒಡವೆ ಮಾಯವಾಗಿರೋದು ಸಾವಿನ ಬಗ್ಗೆ ಎದ್ದಿರುವ ಅನುಮಾನಗಳಿಗೆ ಮತ್ತಷ್ಟು ಇಂಬು ನೀಡಿವೆ. ಹಣ, ಒಡವೆಯ ಆಸೆಗೆ ತಾಯಿಯನನು ಕೊಲೆ ಮಾಡಲಾಗಿದೆ ಎಂದು ಮಕ್ಕಳು ಆರೋಪಿಸಿದ್ದಾರೆ.
ಮೃತಪಟ್ಟಿರುವ ಸಿದ್ದಮ್ಮಗೆ ಮೂವರು ಮಕ್ಕಳಿದ್ದರೂ ತಾನೂ ಸ್ವತಂತ್ರವಾಗಿರಬೇಕೆಂದು ಬಯಸಿದ್ದರು. ಹೀಗಾಗಿಯೇ ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ತಕ್ಕಮಟ್ಟಿನ ಜೀವನ ನಡೆಸುತ್ತಿದ್ದರು. ಹೀಗಿರುವಾಗ ಇಂದು ಬೆಳಗ್ಗೆಯಾದರೂ ಮನೆಯಿಂದ ಅವರು ಹೊರಬಂದಿರಲಿಲ್ಲ. ಅಲ್ಲದೆ ಅಂಗಡಿಯನ್ನೂ ಓಪನ್ ಮಾಡದ ಹಿನ್ನೆಲೆ ಎದುರು ಮನೆಯವರು ಪರಿಶೀಲಿಸಿದ್ದಾರೆ. ಆ ವೇಳೆ ವೃದ್ಧೆ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಅವರಿಗೆ ಸಂಬಂಧಿಸಿದ ಚಿನ್ನದ ಓಲೆ, ಚಿನ್ನದ ಸರ ಹಾಗೂ ಸೆರಗಿನಲ್ಲಿದ್ದ 50 ಸಾವಿರ ನಗದು ಕಳವಾಗಿದ್ದು, ಯಾರೋ ಕೊಲೆ ಮಾಡಿ ಆಭರಣ ಎಗರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಮಾರಿ ಹಬ್ಬದ ವೇಳೆ 100ಕ್ಕೂ ಹೆಚ್ಚು ಕುರಿಗಳ ಬಲಿ; ರಕ್ತ ಹೀರಿದ ಅರ್ಚಕ, ಭಯಾನಕ ವಿಡಿಯೋ ವೈರಲ್
ವಯಸ್ಸಾದರೂ ಸಿದ್ದಮ್ಮ ಆರೋಗ್ಯದಿಂದಲೇ ಇದ್ದರು. ಮಳೆಗಾಲಕ್ಕೂ ಮುನ್ಮ ಮನೆ ರಿಪೇರಿ ಮಾಡಿಸಬೇಕೆಂದು ಹೇಳುತ್ತಿದ್ದ ಇವರು, 50 ಸಾವಿರ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮಾಂಬಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿನ್ನ ಮತ್ತು ಹಣಕ್ಕಾಗಿ ವೃದ್ಧೆ ಕೊಲೆ ನಡೆಯಿತಾ? ಸಿದ್ದಮ್ಮ ಅವರನ್ನು ಕೊಂದು ಆರೋಪಿಗಳು ಚಿನ್ನಾಭರಣ ಎಗರಿಸಿದ್ರಾ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ಸದ್ಯ ಈ ಸಂಬಂಧ ಯುಡಿಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ಅಸಲಿ ಸತ್ಯ ಏನೆಂಬುದು ಬಯಲಾಗಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Mon, 9 March 26