
ಚಾಮರಾಜನಗರ, ಜೂನ್ 05: ಸಾರ್ವಜನಿಕರಿಗೆ ಕಟ್ಟುನಿಟ್ಟಿನ ನಿಷೇಧವಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (Bandipur Tiger Reserve) ದಟ್ಟ ಕಾನನದೊಳಗೆ ರೌಡಿ ಶೀಟರ್ ಒಬ್ಬ ತನ್ನ ಸಂಗಡಿಗರೊಂದಿಗೆ ರಾಜಾರೋಷವಾಗಿ ‘ಎಣ್ಣೆ ಪಾರ್ಟಿ’ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅತ್ಯಂತ ಸುರಕ್ಷಿತ ಮತ್ತು ನಿರ್ಬಂಧಿತ ವಲಯ ಎಂದೇ ಪರಿಗಣಿಸಲಾಗುವ ಕಳ್ಳಬೇಟೆ ತಡೆ ಶಿಬಿರದ (APC Camp) ಮುಂಭಾಗದಲ್ಲೇ ಈ ಮೋಜು-ಮಸ್ತಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯ ರೌಡಿ ಶೀಟರ್ ಸತೀಶ್ ಎಂಬಾತ ತನ್ನ ಸಂಗಡಿಗರಾದ ಗಂಗಾಧರ್ ಮತ್ತು ಚೇತನ್ ಎಂಬುವವರೊಂದಿಗೆ ಸೇರಿ ಬಂಡೀಪುರ ಅರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಎಂಬಲ್ಲಿ ಈ ಜಾಲಸಾಬ್ ಪಾರ್ಟಿ ಮಾಡಿದ್ದಾನೆ. ವನ್ಯಜೀವಿಗಳ ಮುಕ್ತ ಸಂಚಾರವಿರುವ, ಸದಾ ಹದ್ದಿನ ಕಣ್ಣಿಡಬೇಕಾದ ಆಂಟಿ ಪೋಚಿಂಗ್ ಕ್ಯಾಂಪ್ ಮುಂಭಾಗದಲ್ಲೇ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮೋಜು ಮಾಡಿದ್ದಾರೆ. ರೌಡಿ ಶೀಟರ್ಗಳು ಕಾಡಿನೊಳಗೆ ಮದ್ಯದ ಪಾರ್ಟಿ ಮಾಡುತ್ತಿರುವ ಎಕ್ಸ್ಕ್ಲೂಸಿವ್ ಫೋಟೋಗಳು ಈಗ ಲಭ್ಯವಾಗಿವೆ. ಈ ಮದ್ದೂರು ವಲಯವು ಆರ್ಎಫ್ಒ (RFO) ಪುನೀತ್ ಅವರ ಉಸ್ತುವಾರಿಯಲ್ಲಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿವೆ.
ಈ ಘಟನೆಯು ಬಂಡೀಪುರ ಅರಣ್ಯ ಇಲಾಖೆಯ ಸಂಪೂರ್ಣ ಭದ್ರತಾ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಾರಕಾಸ್ತ್ರಗಳನ್ನು ಹಿಡಿಯುವ ರೌಡಿ ಶೀಟರ್ಗೆ ದಟ್ಟ ಕಾನನದೊಳಗಿನ ಕಳ್ಳಬೇಟೆ ಶಿಬಿರದವರೆಗೂ ಹೋಗಲು ದಾರಿ ಮಾಡಿಕೊಟ್ಟವರು ಯಾರು? ಅರಣ್ಯ ಸಿಬ್ಬಂದಿಯ ಆಶೀರ್ವಾದ ಅಥವಾ ಸಹಕಾರವಿಲ್ಲದೆ ಇಂತಹ ಕೃತ್ಯ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.
ಕಾಡಿನಲ್ಲಿ ಒಣಗಿ ಬಿದ್ದ ಸೌದೆಯನ್ನು ತರಲು ಹೋಗುವ ಬಡ ರೈತರು ಮತ್ತು ಬುಡಕಟ್ಟು ಜನರನ್ನು ಕಂಡರೆ ಮುಲಾಜಿಲ್ಲದೆ ಕೇಸ್ ದಾಖಲಿಸುವ ಅರಣ್ಯ ಸಿಬ್ಬಂದಿ, ಇಂತಹ ಕ್ರಿಮಿನಲ್ ಹಿನ್ನೆಲೆಯುಳ್ಳವರು ಕಾಡಿನ ನಿಯಮಗಳನ್ನು ಗಾಳಿಗೆ ತೂರಿ ಗುಂಡಿನ ಪಾರ್ಟಿ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಏಕೆ? ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಸಿಕ್ಕಿದ್ದರೂ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಇಲಾಖೆಯೊಳಗಿನ ಶಾಮೀಲಾತಿಯನ್ನು ಶಂಕಿಸುವಂತೆ ಮಾಡಿದೆ. ಬಂಡೀಪುರದಂತಹ ಸೂಕ್ಷ್ಮ ವಲಯದ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.