
ಚಾಮರಾಜನಗರ, ಆಗಸ್ಟ್ 20: ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಚಾಮರಾಜನಗರದ ಹನೂರು ಬಳಿ ಮೂವರು ಬಲಿ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿ ಕುರಿತು ಮಹತ್ವದ ಸುಳಿವು ಸಿಕ್ಕಿದೆ. ಅರಣ್ಯ ಸಿಬ್ಬಂದಿ ಮಹಿಮ ದಾಸ್ ಲೊಕೇಷನ್ ಪತ್ತೆ ಹಚ್ಚಿದ್ದು, ಆರೋಪಿ ಚಾಮರಾಜನಗರ ಜಿಲ್ಲಾ ಪೊಲೀಸರ ಕಣ್ಗಾವಲಿನಲ್ಲಿದ್ದಾನೆ ಎನ್ನಲಾಗಿದೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಮಹಿಮ ದಾಸ್, ಸದ್ಯ ಅಜ್ಞಾತ ಸ್ಥಳದಲ್ಲಿದ್ದಾನೆ. ಹೀಗಾಗಿ ಆತನ ಚಲನವಲನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈತ ಎನ್ಕೌಂಟರ್ನಲ್ಲಿ ಬದುಕುಳಿದ ಏಕೈಕ ವಿಟ್ನೆಸ್ ಆಗಿದ್ದು, ಗುಂಡೇಟಿಗೆ ಬಲಿಯಾದವರ ಜತೆ ಮಹಿಮ ದಾಸ್ ಇದ್ದ ಎನ್ನಲಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಕರಣವನ್ನು ಮಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದು, ಆ ತನಿಖೆಯ ವರದಿ ಶನಿವಾರ ಬರಲಿದೆ. ವರದಿ ಬಂದ ಬಳಿಕ ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ತೇವೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಸಿಬ್ಬಂದಿಯ ಕೊಠಡಿ ಕೂಡ ಧ್ವಂಸಗೊಳಿಸಿದ್ದಾರೆ. ಜಿಲೆಟಿನ್ ಸಹ ಬಳಸಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ ಗುಂಡಿನದಾಳಿಯಲ್ಲಿ ಬಚಾವಾಗಿದ್ದ ಮಹಿಮದಾಸ್
ಗುಂಡೇಟಿಗೆ ಮೂವರು ಬಲಿ ಪ್ರಕರದ ಬಳಿಕ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿಲುಬೆಪುರ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಬೆಂಕಿ ಇಟ್ಟಿದ್ದಾರೆ. ಪರಿಣಾಮ, ಬರೋಬ್ಬರಿ 2.5 ಹೆಕ್ಟರ್ನಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಮೊನ್ನೆ ಜಿಲೆಟಿನ್ ಕಡ್ಡಿ ಇಟ್ಟು ಕಳ್ಳಬೇಟೆ ಶಿಬಿರಗಳನ್ನು ಸ್ಫೋಟಿಸಿದ್ದರೆ, ಈಗ ಅರಣ್ಯಕ್ಕೇ ಬೆಂಕಿ ಇಡಲಾಗಿದೆ. ಹೀಗಾಗಿ ಪ್ರಾಣ ಭಯದಲ್ಲೇ ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯಕ್ಕೆ ಬರಬೇಕಿರುವ ಸ್ಥಿತಿ ಉದ್ಭವಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Thu, 20 August 26