ವೃದ್ಧಾಶ್ರಮ ಸೇರಿದ್ದ ವ್ಯಕ್ತಿಯನ್ನ ಮರಳಿ ಕುಟುಂಬಕ್ಕೆ ಸೇರಿಸಿದ ಇನ್ಸ್ಟಾಗ್ರಾಮ್ ಪೋಸ್ಟ್!
ವೃದ್ಧಾಶ್ರಮ ಸೇರಿದ್ದ ವ್ಯಕ್ತಿಯನ್ನ ಅವರ ಕುಟುಂಬದ ಜೊತೆ ಸೇರಿಸುವಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ನೆರವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮಧ್ಯಪ್ರದೇಶದಿಂದ ಕೆಲಸಕ್ಕೆ ಬಂದು, ಕುಟುಂಬದ ಸಂಪರ್ಕ ಕಳೆದುಕೊಂಡಿದ್ದ 60 ವರ್ಷದ ವ್ಯಕ್ತಿಯನ್ನು ಪೊಲೀಸರು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಅಲ್ಲಿನ ಸಿಬ್ಬಂದಿ ಮಾಡಿದ ಇನ್ಸ್ಟಾಗ್ರಾಮ್ ವಿಡಿಯೋ ಅವರ ಪುತ್ರನಿಗೆ ತಲುಪಿದ್ದು, ತಂದೆಯನ್ನು ಹುಡುಕಿ ಆತ ಚಾಮರಾಜನಗರಕ್ಕೆ ಬಂದಿದ್ದಾನೆ.

ಚಾಮರಾಜನಗರ, ಜನವರಿ 02: ಇತ್ತೀಚೆಗೆ ಸೈಬರ್ ಬೆದರಿಕೆ, ನಕಲಿ ಸುದ್ದಿ ಹರಡುವಿಕೆಯಂತಕ ಪ್ರಕರಣಗಳಿಂದಲೇ ಸುದ್ದಿಯಾಗುತ್ತಿರುವ ಸಾಮಾಜಿಕ ಜಾಲತಾಣವೇ ವೃದ್ಧರೋರ್ವರ ಪಾಲಿಗೆ ಬದುಕಿನ ಆಶಾಕಿರಣವೆಂಬಂತೆ ಸಹಾಯ ಮಾಡಿದೆ. ದೂರದ ಮಧ್ಯಪ್ರದೇಶದಿಂದ ಕೆಲಸಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ವ್ಯಕ್ತಿ ಅಚಾನಕ್ಕಾಗಿ ಜೊತೆಗಾರರ ಸಂಪರ್ಕ ಕಳೆದುಕೊಂಡಿದ್ದರು. ಭಾಷೆ ಬರದೆ, ಊರಿನ ವಿಳಾಸ ಗೊತ್ತಿರದೆ ಸಂಕಷ್ಟಕ್ಕೆ ಸಿಲುಕಿದ್ದ ಇವರನ್ನ ಇನ್ಸ್ಟಾಗ್ರಾಮ್ನಒಂದೇ ಒಂದು ಪೋಸ್ಟ್ ಮರಳಿ ಮನೆಗೆ ಸೇರಿಸಿದೆ.
ಹೌದು, ಕೆಲಸ ಅರಸಿಕೊಂಡು ಉತ್ತರ ಭಾರತದ ರಾಜ್ಯಗಳ ಜನರು ಕರ್ನಾಟಕ್ಕೆ ಬರೋದು ಇತ್ತೀಚೆಗೆ ಮಾಮೂಲು. ಅದರಂತೆಯೇ ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಮಧ್ಯಪ್ರದೇಶದಿಂದ ಕೆಲ ಕುಟುಂಬಗಳು ಬಂದಿದ್ದವು. ಇವರ ಜೊತೆಗೆ ಪ್ರೀತಂ ಸಿಂಗ್ ಎಂಬ 60 ವರ್ಷದ ವೃದ್ಧ ವ್ಯಕ್ತಿ ಕೂಡ ಬಂದಿದ್ದರು. ಈ ನಡುವೆ ಅದೇಗೋ ಅಚಾನಕ್ಕಾಗಿ ಪ್ರೀತಂ ಅವರಿಗೆ ಗ್ರಾಮದವರ ಸಂಪರ್ಕ ಕಡಿತವಾಗಿದೆ. ಮನೆಯವರ ಫೋನ್ ನಂಬರ್ ಕೂಡ ಇಲ್ಲದೆ, ವಿಳಾಸ ತಿಳಿಯದೆ, ಕನಿಷ್ಠ ಇಲ್ಲಿನ ಭಾಷೆಯೂ ಬರದೆ ಪ್ರೀತಂ ಸಿಂಗ್ ಪರದಾಟ ನಡೆಸುತ್ತಿದ್ದರು. ಹೀಗಾಗಿ ಇವರನ್ನು ಯಳಂದೂರು ಪೊಲೀಸರು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಇದನ್ನೂ ಓದಿ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ
ಆ ಬೆನ್ನಲ್ಲೇ ಪ್ರೀತಂ ಸಿಂಗ್ರ ಕುಟುಂಬದ ಪತ್ತೆಗೆ ಪ್ರಯತ್ನ ಆರಂಭವಾಗಿದ್ದು, ವೃದ್ಧಾಶ್ರಮದ ಸಿಬ್ಬಂದಿ ಇನ್ಸ್ಟಾಗ್ರಾಮ್ನ ಹಲವು ಗ್ರೂಪ್ಗಳಿಗೆ ಇವರ ಬಗ್ಗೆ ವಿಡಿಯೋ ಹಾಕಿದ್ದರು. ಅದರಂತೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್ ಒಂದಕ್ಕೂ ಅದನ್ನು ಶೇರ್ ಮಾಡಿದ್ದರು. ಈ ವಿಡಿಯೋ ಪ್ರೀತಂ ಸಿಂಗ್ ಅವರ ಕುಟುಂಬಸ್ಥರಿಗೂ ತಲುಪಿದ್ದು, ವೃದ್ಧಾಶ್ರಮದಲ್ಲಿ ತಂದೆ ಇರುವಿಕೆ ಗೊತ್ತಾಗಿ ಅವರ ಪುತ್ರ ರಾಜೇಶ್ ಸಿಂಗ್ ಚಾಮರಾಜನಗರಕ್ಕೆ ಬಂದಿದ್ದಾರೆ. ಆ ಮೂಲಕ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ವೃದ್ಧ ಮತ್ತೆ ಕುಟುಂಬ ಸೇರಲು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ನೆರವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



