ಉಪ ಚುನಾವಣೆ ಮತ ಎಣಿಕೆಗೆ ಒಂದು ವಾರ: ಬಿಜೆಪಿ ಒಳ ಲೆಕ್ಕಾಚಾರ -ಎರಡು ಗೆಲುವು ನಿಶ್ಚಿತ, ಇನ್ನೊಂದರಲ್ಲಿ ಫೋಟೋ ಫಿನಿಶ್​

| Updated By: ಸಾಧು ಶ್ರೀನಾಥ್​

Updated on: Apr 24, 2021 | 5:52 PM

ಇನ್ನೊಂದು ವಾರದಲ್ಲಿ ಉಪಚುನಾವಣೆಯ ತೀರ್ಪು ಬರಲಿದೆ. ಬಿಜೆಪಿಯ ಮೂಲಗಳ ಪ್ರಕಾರ ಎರಡು ಕ್ಷೇತ್ರದಲ್ಲಿ ಕಮಲದ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಮಸ್ಕಿಯಲ್ಲಿ ಹಣಾಹಣಿ ಇರುವುದು ಕುತೂಹಲಕಾರಿಯಾಗಿದೆ.

ಉಪ ಚುನಾವಣೆ ಮತ ಎಣಿಕೆಗೆ ಒಂದು ವಾರ: ಬಿಜೆಪಿ ಒಳ ಲೆಕ್ಕಾಚಾರ -ಎರಡು ಗೆಲುವು ನಿಶ್ಚಿತ, ಇನ್ನೊಂದರಲ್ಲಿ ಫೋಟೋ ಫಿನಿಶ್​
2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ; ಯಾರನ್ನೂ ಸಿಎಂ ಮಾಡಬೇಕೆಂದು ಸಲಹೆ, ಶಿಫಾರಸು ಮಾಡಲ್ಲ -ಯಡಿಯೂರಪ್ಪ
Follow us on

ಕೊರೊನಾದ ಎರಡನೆಯ ಅಲೆಯ ಮಧ್ಯೆ ಜನ ಚುನಾವಣೆಯನ್ನು ಮರೆತಿದ್ದಾರೆ. ಕರ್ನಾಟಕದಲ್ಲಿ ಕೂಡ ಪ್ರತಿ ತಿಂಗಳು ನಾಯಕತ್ವ ಬದಲಾವಣೆ ಆಗುತ್ತದೆ ಎಂದು ಓಡಾಡಿಕೊಂಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇನ್ನು ಕೆಲವು ನಾಯಕರು ಸದ್ಯ ಬಾಯ್ಮುಚ್ಚಿಕೊಂಡಿದ್ದಾರೆ. ಜನಪ್ರತಿನಿಧಿಗಳು ತಮ್ಮ ಕರ್ತವ್ಯದ ಕಡೆ ಗಮನ ಕೊಟ್ಟು ರಾಜಕೀಯದಿಂದ ಸ್ವಲ್ಪ ದಿನ ದೂರ ಇದ್ದರೂ ಇರಬಹುದು. ಆದರೆ ಒಂದು ವಾರಕ್ಕೆ ಸರಿಯಾಗಿ ಮೇ ಎರಡರಂದು ನಡೆಯುವ ಮತ ಎಣಿಕೆ ಕರ್ನಾಟಕದಲ್ಲಿ ಕೂಡ ರಾಜಕೀಯ ಬಿರುಗಾಳಿ ಬೀಸಲು ಅನುವು ಮಾಡಿಕೊಡಬಹುದು ಅಥವಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೈ ಮೇಲಾದರೆ ಮತ್ತೆ ಅವರ ವಿರೋಧಿಗಳು ಸ್ವಲ್ಪ ದಿನ ಸುಮ್ಮನಾಗಬಹುದು.

ಮೂರಕ್ಕೆ ಮೂರನ್ನು ಗೆಲ್ಲುವ ವಿಶ್ವಾಸವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತಂಡ ಹೊಂದಿದೆ. ಲಿಂಗಾಯತರು ನಿರ್ಣಾಯಕವಾಗಿರುವ ಎರಡು ವಿಧಾನಸಭಾ ಉಪಚುನಾವಣೆಯಲ್ಲಿ, ಮತದಾರರು ತಮ್ಮದೇ ಸಮುದಾಯದ ಮುಖ್ಯಮಂತ್ರಿಗೆ ಮುಖಭಂಗ ಆಗಲು ಬಿಡರು ಎಂಬುದು ಅವರ ಲೆಕ್ಕಾಚಾರ. ಬೆಳಗಾವಿಯಲ್ಲಿ ಗೆಲುವು ಖಂಡಿತ ಎಂಬ ಆತ್ಮವಿಶ್ವಾಸ. ಮಸ್ಕಿಯಲ್ಲಿ ಯಡಿಯೂರಪ್ಪನವರ ಮಗ, ಬಿ.ವೈ. ವಿಜಯೇಂದ್ರ ಕ್ಯಾಂಪ್ ಹಾಕಿ ಚುನಾವಣಾ ಉಸ್ತುವಾರಿ ನೋಡಿದ್ದರಿಂದ ಅಲ್ಲಿಯೂ ಗೆಲ್ಲಬಹುದು ಎಂಬ ವಿಶ್ವಾಸವನ್ನು ಸಿಎಮ್ ಕ್ಯಾಂಪಿನ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಬಸವಕಲ್ಯಾಣದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದ್ದರೂ ಮುಸ್ಲಿಂ ಮತದಾರರು ತಮ್ಮ ಮತವನ್ನು ಪೋಲು ಮಾಡಬಾರದೆಂದು ನಿರ್ಧರಿಸಿ ಕಾಂಗ್ರೆಸ್​ಗೆ ನೀಡಿದ್ದಾರೆ. ಇನ್ನು ಮಸ್ಕಿಯಲ್ಲಿ, ಪ್ರತಾಪ್​ ಗೌಡ ಪಾಟೀಲ್ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಕೂಡ ಸಾಮ, ದಾನ, ಭೇದ ಹೀಗೆ ಎಲ್ಲ ರೀತಿಯ ಉಪಾಯವನ್ನು ಮಾಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಗೆದ್ದರೆ ಒಂದು ಲೆಕ್ಕ
ಬಿಜೆಪಿಯ ಒಂದು ಮೂಲದ ಪ್ರಕಾರ ಪಕ್ಷ ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಬಹುದು ಎಂಬ ವಿಶ್ವಾಸವನ್ನು ಪಕ್ಷದ ನಾಯಕರು ಹೊಂದಿದ್ದಾರೆ. ಮಸ್ಕಿಯಲ್ಲಿ ಹೋರಾಟ ಫೋಟೋ ಫಿನಿಶ್ ಆಗಬಹುದು. ಒಂದೊಮ್ಮೆ ಆಡಳಿತ ಪಕ್ಷದ ಕೆಲವು ನಾಯಕರು ಅಂದುಕೊಂಡಂತೆ ಎರಡು ಕ್ಷೇತ್ರ ಗೆದ್ದರೆ ಏನಾಗಬಹುದು?

ಒಂದು ಲೋಕಸಭೆ ಮತ್ತು ಒಂದು ವಿಧಾನಸಭೆ ಕ್ಷೇತ್ರವನ್ನು ಗೆದ್ದು ಮಸ್ಕಿಯನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್ ನಾಯಕರಿಗೆ ಹುಮ್ಮಸ್ಸು ಬರುವುದು ಗ್ಯಾರೆಂಟಿ. ಆದರೆ, ಇದು ಯಡಿಯೂರಪ್ಪ ಅವರನ್ನು ಸಿಎಮ್ ಗಾದಿಯಿಂದ ಇಳಿಸುವಷ್ಟು ಬಿರುಸಿನ ರಾಜಕೀಯ ಚೆದುರಂಗದಾಟಕ್ಕೆ ತಿದಿ ಒತ್ತುತ್ತದೆ ಎಂಬ ವಾದವನ್ನು ಯಾವ ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ, ಕೊರೊನಾದ ಆರ್ಭಟಕ್ಕೆ ರಾಜ್ಯವೇ ತತ್ತರಿಸಿಹೋದಾಗ ಈಗ ನಾಯಕತ್ವ ಬದಲಾವಣೆಯಂತಹ ಕೆಲಸಕ್ಕೆ ಹೈಮಾಂಡ್ ಕೈ ಹಾಕಲಾರದು. ಹಾಗೊಮ್ಮೆ ಕೈ ಹಾಕಿದರೆ, ಜನ ಉಗಿಯುವುದು ಗ್ಯಾರೆಂಟಿ. ಹಾಗಾಗಿ ಅದು ಆಗಲಾರದು ಎಂಬ ವಿಶ್ವಾಸವನ್ನು ಹಲವಾರು ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ನಾಯಕರು ಅಂದುಕೊಂಡಂತೆ ಮೂರರಲ್ಲಿ ಎರಡು ಗೆಲ್ಲಲಿ ಅಥವಾ ಮೂರನ್ನೂ ಗೆಲ್ಲಲಿ, ಸದ್ಯಕ್ಕೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಲು ಹೈಮಾಂಡಿಗೆ ಕೂಡ ಸಮಯವಿಲ್ಲ ಮತ್ತು ಇದು ಸಂದರ್ಭ ಅಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ, ಮಸ್ಕಿಯಲ್ಲಿ ಸೋತರೆ, ವಿಜಯೇಂದ್ರ ಅವರಿಗೆ ಸ್ವಲ್ಪ ಹಿನ್ನಡೆ ಆಗುವುದು ಗ್ಯಾರೆಂಟಿ. ವಿಜಯೇಂದ್ರ ಕೈ ಹಾಕಿದರೆ ಚುನಾವಣೆಯಲ್ಲಿ ಗೆಲುವು ಎಂಬ ಅವರ ಇಲ್ಲೀವರೆಗಿನ ಸ್ಟ್ರೈಕ್ ರೇಟ್ಗೆ ಹೊಡೆತ ಬೀಳುವುದು ಗ್ಯಾರೆಂಟಿ. ಒಮ್ಮೆ ಮೂರಕ್ಕೆ ಮೂರನ್ನು ಗೆದ್ದರೆ ಯಡಿಯೂರಪ್ಪ ರಾಜಕೀಯವಾಗಿ ಮತ್ತಷ್ಟು ಗಟ್ಟಿ ಆಗುವುದು ನಿಜ.

ಕಾಂಗ್ರೆಸ್​ಗೆ ಏನಾಗಬಹುದು?
ಮೂರು ಉಪಚುನಾವಣೆಯಲ್ಲಿ ಒಂದನ್ನು ಗೆದ್ದರೂ ಕಾಂಗ್ರೆಸ್ ಚಿಗುರಿಕೊಳ್ಳಲು ಭಾರೀ ಅವಕಾಶ ಸಿಗುವುದು. ಚುನಾವಣೆಯಲ್ಲಿ ಬಿಜೆಪಿ ವಿರೋಧ ಪಕ್ಷಕ್ಕೆ ಮುಜುಗರವುಂಟು ಮಾಡದೇ ಬಹಳ ಸೇಫ್​ ಆಗಿ ಆಟ ಆಡಿತ್ತು. ಬೇರೆ ದಿನಗಳಲ್ಲಿ, ವಿರೋಧ ಪಕ್ಷದ ಟೀಕೆಗೆ ಯಾವತ್ತು ಉತ್ತರ ಕೊಡದೇ ತುಂಬಾ ದಾಕ್ಷಿಣ್ಯದಿಂದ ರಾಜಕೀಯ ಆಟ ಆಡುವ ಬಿಜೆಪಿಯ ತಂತ್ರಕ್ಕೆ ಈ ಚುನಾವಣೆಯಲ್ಲೇನಾದರೂ ಶಾಕ್ ಕೊಡುವ ಫಲಿತಾಂಶ ಬಂದರೆ ಕಾಂಗ್ರೆಸ್ನ ತಂತ್ರಗಾರಿಕೆಗೆ ಜನ ಬೆಂಬಲ ಸಿಗುವ ಸಾಧ್ಯತೆ ಜಾಸ್ತಿ.

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೇಲೆ ಅವರಿಗೆ ಇನ್ನೂ ಲಕ್ ಒಲಿದಿಲ್ಲ. ಈ ಬಾರಿ ಅವರು ಒಂದು ಕ್ಷೇತ್ರ ಗೆದ್ದಲ್ಲಿ, ಹೈಮಾಂಡ್ ಮುಂದೆ ನಾಯಕತ್ವದ ಯಶಸ್ಸನ್ನು ಬಿಂಬಿಸಿಕೊಳ್ಳಲು ಬಹಳ ಅನುಕೂಲವಾಗುವುದಂತು ನಿಜ. ಒಮ್ಮೆ ಈ ಬಾರಿಯೂ ವಿಫಲವಾದಲ್ಲಿ, ಸಿದ್ದರಾಮಯ್ಯ ತಂಡ ಡಿಕೆಶಿ ಅವರ ನಾಯಕತ್ವದ ಕುರಿತು ಪ್ರಶ್ನೆ ಕೇಳುವುದು ನಿಜ. ಈ ಬಾರಿ ಆ ನಾಯಕರಿಬ್ಬರ ಜಟಾಪಟಿ ಅಲ್ಲಿಗೆ ನಿಲ್ಲುವುದೋ ಎಂಬುದು ಕುತೂಹಲಕಾರಿ ಅಂಶವಾಗಿರುತ್ತದೆ.

ಇದನ್ನೂ ಓದಿ:

ಬೆಳಗಾವಿ ಶೇ 54, ಮಸ್ಕಿ ಶೇ 70, ಬಸವಕಲ್ಯಾಣ ಶೇ 59 ಮತದಾನ: ಮೇ 2ಕ್ಕೆ ಮತ ಎಣಿಕೆ

(Chief minister BS Yediyurappa seems safe if he wins at least two of the three seats in bypoll)