ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 14: ಸೆಪ್ಟೆಂಬರ್ 15 ರಂದು ಭಾರತರತ್ನ ಹಾಗೂ ಜಗದ್ವಿಖ್ಯಾತ ಇಂಜನಿಯರ್ ಸರ್ ಎಂ.ವಿಶ್ವೇಶ್ವರಯ್ಯನವರ (Sir M Visvesvaraya) ಜನ್ಮದಿನ. ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕು ಮುದ್ದೇನಹಳ್ಳಿ (Muddenahalli) ಗ್ರಾಮದ ಸರ್ ಎಂ.ವಿಶ್ವೇಶ್ವರಯ್ಯನವರ ಸಮಾಧಿ ಸ್ಮಾರಕ ಸ್ಥಳದತ್ತ ಎಲ್ಲರ ಚಿತ್ತ ನೆಟ್ಟಿದೆ. ಅವರ ಜನ್ಮದಿನದಂದು ಮಾತ್ರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅತೀವ ಕಾಳಜಿ ತೋರಿಸಿ, ಸಮಾಧಿ, ಸ್ಮಾರಕ ಸ್ಥಳವನ್ನು ಸ್ವಚ್ಚಗೊಳಿಸಿ ಹೂವುಗಳಿಂದ ಅಲಂಕರಿಸುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಸಹಾ ಸಮಾಧಿ, ಸ್ಮಾರಕ ಸ್ಥಳವನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿದೆ.
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದ್ದ ಕಾರಣ ಅವರ ಸಮಾಧಿ ಸ್ಮಾರಕ ಸ್ಥಳವು ಮುದ್ದೇನಹಳ್ಳಿಯಲ್ಲಿದೆ. ಸರ್ ಎಂ.ವಿಶ್ವೇಶ್ವರಯ್ಯನವರು ಜನಿಸಿದ್ದ ಮನೆ ಸ್ಮಾರಕವಾಗಿದೆ. ಇದೇ ಮನೆಯಲ್ಲಿ ಒಂದು ಭಾಗದಲ್ಲಿ ಸರ್ ಎಂ.ವಿ.ರವರ ಮ್ಯೂಸಿಯಂ ಸ್ಥಾಪನೆ ಮಾಡಲಾಗಿದೆ. ಮ್ಯೂಸಿಯಂನಲ್ಲಿ ಸರ್ ಎಂ.ವಿ.ರವರು ಬಳಸಿದ್ದ ಸಾಮಾಗ್ರಿಗಳು, ಪ್ರಶಸ್ತಿ ಪತ್ರಗಳು, ಉಡುಗೊರೆಗಳು, ಟೈಪ್ರೈಟರ್, ಭಾರತರತ್ನ ಪ್ರಶಸ್ತಿ ಮತ್ತು ಪದಕ, ಗಣ್ಯಾತಿಗಣ್ಯರ ಜೊತೆ ಇರುವ ಭಾವಚಿತ್ರಗಳು, ಸರ್ ಎಂ.ವಿ.ರವರ ಹಸ್ತಪ್ರತಿ, ಸರ್ ಎಂ.ವಿ.ರವರ ಕಂಚಿನ ವಿಗ್ರಹಗಳು, ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸಮಯದ ಪೋಟೋಗಳು, ಸರ್ ಎಂ.ವಿ.ರವರು ಬಳಸುತ್ತಿದ್ದ ಕನ್ನಡಕ, ಮರದ ಪೆನ್ನು, ಇಂಕ್ ಪೆನ್ನು, ದೇಶ ವಿದೇಶಗಳಲ್ಲಿ ನೀಡಿ ಗೌರವಿಸಿರುವ ಪದಕಗಳು, ಅಪರೂಪದ ಛಾಯಾಚಿತ್ರಗಳು, ವಿದ್ಯುತ್ ಇಲ್ಲದ ಕಾಲದಲ್ಲಿ ಸರ್ ಎಂ.ವಿ.ರವರು ಬಳಸುತ್ತಿದ್ದ ಸೀಮೆಎಣ್ಣೆಯ ದೀಪ, ಹಳೇಕಾಲದ ಪೋನ್ಗಳು, ಅಪರೂಪದ ಗ್ರಂಥಗಳು, ಸರ್ ಎಂ.ವಿ.ರವರ ಪ್ರತಿಮೆ, ಪ್ಯಾನ್ಗಳು, ಸರ್ ಎಂ.ವಿ.ರವರಿಗೆ ಸೇರಿದ ಟ್ರಂಕ್ಗಳನ್ನು ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದೆ.
ಇದನ್ನೂ ಓದಿ: ಗೋಲ್ಡನ್ ಹೋಮ್ ಶೆಲ್ಟರ್ಸ್ಗೆ ಖರೀದಿ ಪತ್ರ ಬರೆದು ಕೊಡಲು ಗ್ರಾಹಕರ ಆಯೋಗ ಆದೇಶ
ಮುದ್ದೇನಹಳ್ಳಿಗೆ ಭೇಟಿ ನೀಡುವ ಗಣ್ಯರು ಹಾಗೂ ಸಾರ್ವಜನಿಕರು ಮ್ಯೂಸಿಯಂಗೆ ಭೇಟಿ ನೀಡಿ, ಸರ್ ಎಂ.ವಿ.ರವರು ಬಳಸಿದ್ದ ವಸ್ತುಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Thu, 14 September 23