ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದ ರಾಜೀವ್ ಗೌಡ ಪ್ರಕರಣ: ‘ಕೈ’ ಮುಖಂಡನ ವಿರುದ್ಧ ಇದೆ 9 ಕ್ರಿಮಿನಲ್ ಕೇಸ್

ಮಹಿಳಾ ಅಧಿಕಾರಿಗೆ ಅವಾಜ್ ಹಾಕಿ, ದೌಲತ್ತು ತೋರಿಸಿ ಬಿಲ ಸೇರಿಕೊಂಡಿರುವ ರಾಜೀವ್ ಗೌಡರನ್ನು ಬಂಧಿಸಲು ಪೊಲೀಸರು 3 ತಂಡ ರಚನೆ ಮಾಡಿ ಹುಡುಕಾಡುತ್ತಿದ್ದಾರೆ. ಮತ್ತೊಂದೆಡೆ ಮುಜುಗರದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಪ್ರಕರಣದ ಮಾಹಿತಿ ಕೇಳಿ ಎಂಬುದು ಕಾಂಗ್ರೆಸ್​ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದ ರಾಜೀವ್ ಗೌಡ ಪ್ರಕರಣ: ‘ಕೈ’ ಮುಖಂಡನ ವಿರುದ್ಧ ಇದೆ 9 ಕ್ರಿಮಿನಲ್ ಕೇಸ್
ರಾಜೀವ್ ಗೌಡ
Edited By:

Updated on: Jan 16, 2026 | 7:23 AM

ಚಿಕ್ಕಬಳ್ಳಾಪುರ, ಜನವರಿ 16: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆಗೆ ಅಶ್ಲೀಲವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡ ವಿರುದ್ಧ ಈಗಾಗಲೇ ಎಫ್​ಐಆರ್ ದಾಖಲಾಗಿದೆ. ಎರಡು ದಿನಗಳಿಂದ ರಾಜೀವ್‌ ಗೌಡ (Rajeev Gowda) ತಲೆಮರೆಸಿಕೊಂಡಿದ್ದು, ಫೋನ್‌ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ರಾಜೀವ್ ಗೌಡ ಬಂಧನಕ್ಕೆ ಪೊಲೀಸರು 3 ತಂಡ ರಚನೆ ಮಾಡಿದ್ದಾರೆ. ಗುರುವಾರ ರಾಜೀವ್ ಗೌಡ ಮನೆ, ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಶೋಧ ನಡೆಸಲಾಯಿತು. ರಾಜೀವ್ ಗೌಡ ಪತ್ನಿ ಪೊಲೀಸರ ಜೊತೆ ರಂಪಾಟ ಮಾಡಿದ್ದಾರೆ. ಸರ್ಚ್ ವಾರಂಟ್ ಇಲ್ಲದೇ ಮನೆಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾರೆ.

ಏತನ್ಮಧ್ಯೆ, ರಾಜೀವ್‌ಗೌಡ ವರ್ತನೆ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ತಂದಿದೆ. ಇದೇ ಪ್ರಕರಣ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಈ ಬಗ್ಗೆ ವರದಿ ನೀಡುವಂತೆ ಕೆಪಿಸಿಸಿ ಸೂಚಿಸಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​​ಗೆ ನೇರವಾಗಿ ಫೋನ್ ಕರೆ ಮಾಡಿ ವರದಿ ಕೇಳಿರುವ ಬಗ್ಗೆ ಎಐಸಿಸಿ ಉನ್ನತ ಮೂಲಗಳಿಂದ ‘ಟಿವಿ9’ಗೆ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಸೂಚನೆ ಬೆನ್ನಲ್ಲೇ ಕೆಪಿಸಿಸಿ ರಾಜೀವ್‌ ಗೌಡಗೆ ನೋಟಿಸ್ ನೀಡಿದ್ದು, ವಾರದೊಳಗೆ ಸೂಕ್ತ ಉತ್ತರ ನೀಡದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದೆ.

ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿ ಇಂದು ಪ್ರತಿಭಟನೆ

ಮಹಿಳಾ ಅಧಿಕಾರಿಗೆ ಅನ್ಯಾಯವಾದರೂ ಸರ್ಕಾರಿ ನೌಕರರ ಸಂಘ ಮೌನವಾಗಿದ್ದ ಬಗ್ಗೆ ‘ಟಿವಿ9’ ವರದಿ ಮಾಡಿತ್ತು. ಸುದ್ದಿಪ್ರಸಾರದ ಬೆನ್ನಲ್ಲೇ ರಾಜೀವ್ ಗೌಡ ವಿರುದ್ಧ ಜಿಲ್ಲಾ ಸರ್ಕಾರಿ ನೌಕರರ ಸಂಘ ತಿರುಗಿಬಿದ್ದಿದೆ. ರಾಜೀವ್ ಗೌಂಡ ಬಂಧನಕ್ಕಾಗಿ ಆಗ್ರಹಿಸಿ ಇಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಿದೆ.
ಇನ್ನೊಂದೆಡೆ ಪೌರಾಡಳಿತ ಸಚಿವ ರಹೀಂ ಖಾನ್, ತಮ್ಮ ಇಲಾಖೆಯ ಮಹಿಳಾ ಅಧಿಕಾರಿಗೆ ಅನ್ಯಾಯವಾದರೂ ತುಟಿ ಬಿಚ್ಚದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜೀವ್ ಗೌಡ ವಿರುದ್ಧ ಇದೆ 9 ಕ್ರಿಮಿನಲ್ ಕೇಸ್

ಈ ಮಧ್ಯೆ, ಪೊಲೀಸರು ರಾಜೀವ್ ಗೌಡನ ಕ್ರಿಮಿನಲ್ ಇತಿಹಾಸ ಕೆದಕಲು ಶುರುಮಾಡಿದ್ದಾರೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಈವರೆಗೆ 9 ಕೇಸ್‌ ಕೇಸ್ ದಾಖಲಾಗಿರುವುದು ಬಯಲಾಗಿದೆ. ಶಿಡ್ಲಘಟ್ಟ ನಗರ, ಹೊಸಕೋಟೆ, ದೇವನಹಳ್ಳಿ ಸೇರಿ ಬೆಂಗಳೂರಲ್ಲಿ ಕೇಸ್‌ಗಳಿವೆ. ರಿಯಲ್ ಎಸ್ಟೇಟ್‌ನಲ್ಲಿ ಮೋಸ, ವಂಚನೆ ಸೇರಿ ವಿವಿಧ ಪ್ರಕರಣಗಳು ದಾಖಲಾಗಿದ್ದ ಬಗ್ಗೆ ‘ಟಿವಿ9’ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ