
ಚಿಕ್ಕಬಳ್ಳಾಪುರ, ಆಗಸ್ಟ್ 09: ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ ವೇಳೆ ಕ್ರೀಡಾಪಟು ಓರ್ವ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅಮನ್ ದೀಪ್ ಸಿಂಗ್ ಜಗಡೆ(31) ಮೃತ ದುರ್ದೈವಿಯಾಗಿದ್ದು, ಹೃದಯಾಘಾತದಿಂದ ಅಸುನೀಗರುವ ಸಾಧ್ಯತೆ ಅಂದಾಜಿಸಲಾಗಿದೆ. 21 ಕಿಲೋಮೀಟರ್ ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದ ಅಮನ್, ನಂದಿಗಿರಿಧಾಮದ ಬೆಟ್ಟದ ಮೇಲೆ ಕುಸಿದುಬಿದ್ದಿದ್ದಾರೆ. ತಕ್ಷಣ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಅಮನ್ ದೀಪ್ ಸಿಂಗ್ ಪಂಜಾಬ್ ಮೂಲದವರಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದರು. ಮಾನ್ಯತಾ ಟೆಕ್ ಪಾರ್ಕ್ನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು ಎಂಬುದು ತಿಳಿದುಬಂದಿದೆ.
ಅಮನ್ ದೀಪ್ ಸಿಂಗ್, 21 ಕೀಲೊ ಮೀಟರ್ ಕ್ರಮಿಸಬೇಕಿದ್ದ ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ನ ಅರ್ಧದಷ್ಟು ಮಾತ್ರ ಓಡಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಮೃತನ ಪತ್ನಿ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದು, ಮೃತದೇಹ ಸದ್ಯ ಆಸ್ಪತ್ರೆಯಲ್ಲಿಯೇ ಇದೆ. ಇನ್ನು ಮ್ಯಾರಥಾನ್ ಸಂಬಂಧ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದ ಅಮನ್ ದೀಪ್ ಸಿಂಗ್ 21 ಕೀಲೋ ಮೀಟರ್ ರನ್ನಿಂಗ್ನಲ್ಲಿ ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದರು ಎಂಬುದೂ ಗೊತ್ತಾಗಿದೆ.
ಇದನ್ನೂ ಓದಿ: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ
10 ಕಿಲೋಮೀಟರ್ ಹಾಗೂ 21 ಕಿಲೋಮೀಟರ್ ವಿಭಾಗಗಳಲ್ಲಿ ಈ ಮ್ಯಾರಥಾನ್ ನಡೆದಿದ್ದು, 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ, ಯುವಜನ ಕ್ರೀಡಾ ಮತ್ತು ಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Sun, 9 August 26