AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ಜೊತೆ ದೇವಾಲಯದೊಳಕ್ಕೆ ಪ್ರವೇಶಿಸಿದ ದಲಿತರು

ಅವತ್ತು ನನಗೆ ಹೊಡೆದು, ಹಲ್ಲೆ ಮಾಡಿದ್ದರು. ನನಗೆ ಹೊಡೆದವರಿಗೂ ಭಗವಂತ ಒಳೆಯದು ಮಾಡಲಿ. 30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಅವರನ್ನ ನಾನು ದ್ವೇಷ ಮಾಡಲ್ಲ, ಪ್ರೀತಿಸ್ತೇನೆ. ನನಗೆ ದಲಿತ ಎಂದು ಹೊಡೆದಿದ್ದರು, ನೋವು ಮಾಡಿದ್ದರು. ಇಂದು ನಾನು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ ಎಂದು ಅಂದು ಹಲ್ಲೆಗೊಳಗಾಗಿದ್ದ ಯುವಕ ಮಾರುತಿ ಪೂಜೆ ಬಳಿಕ ಹೇಳಿದ್ದಾರೆ.

ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ಜೊತೆ ದೇವಾಲಯದೊಳಕ್ಕೆ ಪ್ರವೇಶಿಸಿದ ದಲಿತರು
ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ಜೊತೆ ದೇವಾಲಯದೊಳಕ್ಕೆ ಪ್ರವೇಶಿಸಿದ ದಲಿತರು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Jan 09, 2024 | 6:08 PM

ಚಿಕ್ಕಮಗಳೂರು, ಜನವರಿ 9: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣದ ಸಮ್ಮುಖದಲ್ಲಿ ದಲಿತರು ಪೊಲೀಸರ ಜೊತೆ ಗೊಲ್ಲರಹಟ್ಟಿ ಗ್ರಾಮದ ರಂಗನಾಥ ಸ್ವಾಮಿ ದೇವಾಲಯದೊಳಕ್ಕೆ ಇಂದು ಪ್ರವೇಶಿಸಿದರು. ಈ ವೇಳೆ, ದೇವಾಲಯದ ಕೀ ಇಲ್ಲ ಎಂದು ಗೊಲ್ಲರಹಟ್ಟಿ ಗ್ರಾಮದ ಮುಖಂಡ ಹೇಳಿದರಾದರೂ ದೇಗುಲದ ಬಾಗಿಲು ತೆಗೆಯದಿದ್ದರೆ ನಾವೇ ತೆಗೆಯುತ್ತೇವೆಂದು ತಾಲೂಕು ಆಡಳಿತಾಧಿಕಾರಿಗಳು ಎಚ್ಚರಿಕೆಯ ಸಂದೇಶ ರವಾನಿಸಿದರು. ಆಗ ಅಧಿಕಾರಿಗಳ ಒತ್ತಡಕ್ಕೆ ಮಣಿದು ಗ್ರಾಮಸ್ಥರು ದೇವಾಲಯದ ಕೀ ತಂದರು. ಆಗ ಪೊಲೀಸ್, ತಹಶೀಲ್ದಾರ್, ಎಸಿ ನೇತೃತ್ವದಲ್ಲಿ ದಲಿತರಿಂದ ದೇವಾಲಯದ ಪ್ರವೇಶ ನೆರವೇರಿತು.

ಈ ಸಂದರ್ಭದಲ್ಲಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಗೊಲ್ಲರಹಟ್ಟಿ ಗ್ರಾಮಸ್ಥರಿಗೆ ಹೊರಬಾರದಂತೆ ಸೂಚನೆ ನೀಡಲಾಗಿತ್ತು. ಗೊಲ್ಲರಹಟ್ಟಿ ಗ್ರಾಮದ ಎಲ್ಲಾ ಮನೆಗಳು ಲಾಕ್ ಆಗಿರುವುದು ಕಂಡುಬಂದಿತು. ಜನವರಿ 1 ರಂದು ದಲಿತ ಊರೊಳಗೆ ಬಂದನೆಂದು ಆತನ ಮೇಲೆ ಗೊಲ್ಲರಹಟ್ಟಿ ಜನ ಹಲ್ಲೆ ಮಾಡಿದ್ದರು. ದೇವರಿಗೆ ಮೈಲಿಗೆಯಾಗಿದೆ ಎಂಬುದು ಅವರ ತಕರಾರು ಆಗಿತ್ತು.

Also Read: ಚಿಕ್ಕಮಗಳೂರು – ಗೇರಮರಡಿ ಗ್ರಾಮದಲ್ಲಿ ದಲಿತರ ಪ್ರತಿಭಟನೆ ತೀವ್ರ, ಉದ್ವಿಗ್ನ ಪರಿಸ್ಥಿತಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ವಿದ್ಯಮಾನಗಳು ನಡೆದ ಹಿನ್ನೆಲೆಯಲ್ಲಿ ದಲಿತ ಸಂಘಟನೆಯಿಂದ ಪ್ರತಿಭಟನೆ ನಡೆದಿತ್ತು. ಹಲ್ಲೆಗೈದ ಗೊಲ್ಲರಹಟ್ಟಿ ಗ್ರಾಮದ 15 ಜ‌ನರ ವಿರುದ್ಧ ಎಫ್.ಐ. ಆರ್. ದಾಖಲು ಮಾಡಲಾಗಿತ್ತು.

ನನಗೆ ಹೊಡೆದವರಿಗೂ ಭಗವಂತ ಒಳೆಯದು ಮಾಡಲಿ: ಸಂತ್ರಸ್ತ ಯುವಕ

ಅವತ್ತು ನನಗೆ ಹೊಡೆದು, ಹಲ್ಲೆ ಮಾಡಿದ್ದರು. ನನಗೆ ಹೊಡೆದವರಿಗೂ ಭಗವಂತ ಒಳೆಯದು ಮಾಡಲಿ. 30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಅವರನ್ನ ನಾನು ದ್ವೇಷ ಮಾಡಲ್ಲ, ಪ್ರೀತಿಸ್ತೇನೆ. ನನಗೆ ದಲಿತ ಎಂದು ಹೊಡೆದಿದ್ದರು, ನೋವು ಮಾಡಿದ್ದರು. ಇಂದು ನಾನು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. ತಿಂಗಳ ಪೂಜೆ ಇದೆ, ಮೈಲಿಗೆ ಆಯ್ತು ಎಂದು ಹಲ್ಲೆ ಮಾಡಿದ್ದರು. ಇವತ್ತು ನನಗೆ ನೆಮ್ಮದಿ ಆಗಿದೆ. ಭಗವಂತ ಅವರಿಗೆ, ನಮಗೆ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಅಂದು ಹಲ್ಲೆಗೊಳಗಾಗಿದ್ದ ಯುವಕ ಮಾರುತಿ ಪೂಜೆ ಬಳಿಕ ಹೇಳಿದ್ದಾರೆ.

ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ