
ಚಿಕ್ಕಮಗಳೂರು, ನವೆಂಬರ್ 10: ಜಿಲ್ಲೆಯ ಶೃಂಗೇರಿಯಲ್ಲಿ ಕಾಡಾನೆ (Wild Elephants) ದಾಳಿಗೆ ಇಬ್ಬರು ಬಲಿಯಾಗಿದ್ದರು. ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಬೆನ್ನಲ್ಲೇ ಚಿಕ್ಕಮಗಳೂರು-ಹಾಸನ ಗಡಿ ಗ್ರಾಮದಲ್ಲಿ ಬೀಟಮ್ಮ-2 ಗ್ಯಾಂಗ್ (Beetamma-2 gang) ಎಂಟ್ರಿಯಾಗಿದೆ. 8 ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದೆ. ದಾಂಧಲೆ ಮಾಡುತ್ತಿರುವ ಭೀಮಾ ಕಾಡಾನೆ ಕೂಡ ಈ ಗ್ಯಾಂಗ್ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಒಂಟಿಯಾಗಿರುವ ಭೀಮಾ, ಬೀಟಮ್ಮ ಗ್ಯಾಂಗ್ ಹುಡುಕಿಕೊಂಡು ಕಾಫಿನಾಡಿಗೆ ಬರುವ ಆತಂಕ ಎದುರಾಗಿದೆ.
ಚಿಕ್ಕಮಗಳೂರು-ಹಾಸನ ಜಿಲ್ಲೆಯ ಗಡಿ ಗ್ರಾಮದಲ್ಲಿ ಸಂಚಾರ ಮಾಡುತ್ತಿದ್ದ 8 ಕಾಡಾನೆಗಳ ಹಿಂಡಿನ ಬೀಟಮ್ಮ-2 ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಎಂಟ್ರಿ ನೀಡಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು, ಜಿ.ಹೊಸಹಳ್ಳಿ, ಮಾಕೋನಹಳ್ಳಿ, ಬಾರದಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ.
ಇದನ್ನೂ ಓದಿ: ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ: ಏಕಲವ್ಯ ತಂಡದಿಂದ ಕಾರ್ಯಾಚರಣೆ ಯಶಸ್ವಿ
ಹಾಸನ ಜಿಲ್ಲೆಯ ಬೇಲೂರು ಭಾಗವಾಗಿ ಬೀಟಮ್ಮ ಗ್ಯಾಂಗ್ ಬಂದಿದ್ದು, ಭೀಮಾ ಬರುವ ಆತಂಕ ಸೃಷ್ಟಿಯಾಗಿದೆ. ಹೆಚ್ಚಾಗಿ ಬೀಟಮ್ಮ-2 ಗ್ಯಾಂಗ್ನಲ್ಲಿ ಇರುತ್ತಿದ್ದ ಭೀಮಾ ಒಂಟಿಯಾಗಿ ದಾಂಧಲೆ ನಡೆಸುತ್ತಿದ್ದು, ಬೀಟಮ್ಮ ಗ್ಯಾಂಗ್ 2 ಹುಡುಕಿಕೊಂಡು ಕಾಫಿನಾಡಿಗೆ ಬರುವ ಆತಂಕ ಸೃಷ್ಟಿಯಾಗಿದೆ.
ಕಳೆದ ವರ್ಷ ಕೂಡ ಇದೇ ತಿಂಗಳಲ್ಲಿ ಹಾಸನದಿಂದ ಬೇಲೂರು ಮಾರ್ಗವಾಗಿ ಬಂದಿದ್ದ ಬೀಟಮ್ಮ ಗ್ಯಾಂಗ್ 2 ಮತ್ತೆ ಬಂದಿದೆ. ಕಾಫಿತೋಟದಲ್ಲಿ ಕಾಫಿ ಕೊಯ್ಲು ಕೂಡ ಆರಂಭವಾಗಿದೆ. ಕಾರ್ಮಿಕರು, ಬೆಳೆಗಾರರು ಕಾಫಿತೋಟಕ್ಕೆ ತೆರಳಲು ಆತಂಕ ಪಡುವ ಸ್ಥಿತಿ ಎದರಾಗಿದೆ.
ಕಳೆದ ನಾಲ್ಕು ದಿನಗಳಿಂದ ಗೋಣಿಬೀಡು ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 8 ಕಾಡಾನೆಗಳ ಬೀಟಮ್ಮ ಗ್ಯಾಂಗ್, ರಾತ್ರಿ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚಾರ ಮಾಡುತ್ತಿದೆ. ಮೂಡಿಗೆರೆ ಅರಣ್ಯ ಇಲಾಖೆಯ ಸಿಬ್ಬಂದಿ, ETF ಸಿಬ್ಬಂದಿಗಳು ಬೀಟಮ್ಮ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಕಾಡಾನೆಗಳ ದಾಂಧಲೆ: ಕಾಳಗದಲ್ಲಿ ದಂತ ಮುರಿದುಕೊಂಡ ಭೀಮಾ
ಪ್ರತಿ ವರ್ಷ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಎಂಟ್ರಿ ನೀಡುತ್ತಿರುವ ಬೀಟಮ್ಮ ಗ್ಯಾಂಗ್ ಈ ವರ್ಷವೂ 8 ಸದಸ್ಯರ ಜೊತೆ ಎಂಟ್ರಿ ನೀಡಿದೆ. ಇನ್ನು ಭೀಮಾ ಕೂಡ ಬರುವ ಆತಂಕದಲ್ಲಿ ಕಾಫಿನಾಡಿನ ಜನರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.